ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ಬಹುತೇಕ ಎಲ್ಲ ಅಣೆಕಟ್ಟುಗಳು ಭರ್ತಿಯಾಗುವ ಹಂತ ತಲುಪಿವೆ. ನಿರಂತರ ಮಳೆ ಸುರಿಯುತ್ತಿದ್ದು, ಕೆ ಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ 120 ಅಡಿಗೆ ಹೆಚ್ಚಿದೆ. ಗರಿಷ್ಠ 124.80 ಅಡಿ ಸಾಮರ್ಥ್ಯವಿರುವ ಈ ಜಲಾಶಯಕ್ಕೆ ಒಳಹರಿವು 13,856 ಕ್ಯೂಸೆಕ್ಸ್ ನಷ್ಟು ಇದ್ದು ಸದ್ಯದಲ್ಲೇ ಭರ್ತಿಯಾಗಲಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಮಂಡ್ಯ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳು ಹಾಗೂ ಕೇರಳ ಭಾಗದಲ್ಲಿ ಮುಂಗಾರು ಮಳೆ ವ್ಯಾಪಕ ಪ್ರಮಾಣದಲ್ಲಿ ಬೀಳುತ್ತಿದ್ದು, ಇದರಿಂದ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.
ಅದೇ ರೀತಿ ಜಲಾಶಯದ ಒಳಹರಿವು ನಿರಂತರವಾಗಿ ಏರಿಕೆಯಾಗುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, 49.45 ಟಿಎಂಸಿ ಅಡಿ ಗರಿಷ್ಠ ಸಾಮರ್ಥ್ಯವಿರುವ ಕೆ ಆರ್ ಎಸ್ ಜಲಾಶಯದಲ್ಲಿ 43.30 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಅಂದರೆ ಶೇ.88ರಷ್ಟು ಈಗಾಗಲೇ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 14.57 ಅಡಿಯಷ್ಟು ಮಾತ್ರ ನೀರು ಸಂಗ್ರಹವಾಗಿತ್ತು. ಜೂನ್ ಅಂತ್ಯಕ್ಕೆ ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಗಳಿದ್ದು, ಕುಡಿಯುವ ನೀರು ಹಾಗೂ ರೈತರ ಬೆಳೆಗಳಿಗೆ ನೀರಿನ ಸಮಸ್ಯೆ ಉದ್ಭವವಾಗುವುದಿಲ್ಲ.
ಹಾರಂಗಿ ಜಲಾಶಯ ಶೇ.74, ಹೇಮಾವತಿ ಶೇ.83, ಕಬಿನಿ ಜಲಾಶಯ ಶೇ.81ರಷ್ಟು ಭರ್ತಿಯಾಗಿದ್ದು, ಒಟ್ಟಾರೆ ನಾಲ್ಕೂ ಜಲಾಶಯಗಳಲ್ಲಿ ಶೇ.84ರಷ್ಟು ನೀರಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದುಪ್ಪಟ್ಟು ನೀರಿನ ಸಂಗ್ರಹವಿದೆ. ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ವರಾಹಿ, ಸೂಫ ಜಲಾಶಯಗಳಿಗೂ ಒಳಹರಿವು ಹೆಚ್ಚಾಗಿದೆ. ಈ ಮೂರು ಜಲಾಶಯ ಗಳಿಂದ 38 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯುತ್ತಿದ್ದು, ಒಟ್ಟಾರೆ ಶೇ.31ರಷ್ಟು ಭರ್ತಿಯಾಗಿವೆ.
ಕೃಷ್ಣ ಕೊಳ್ಳದ ಭದ್ರ, ತುಂಗಭದ್ರ, ಘಟ್ಟಪ್ರಭ, ಹಾಲಮಟ್ಟಿ, ನಾರಾಯಣಪುರ ಜಲಾಶಯಗಳಿಗೂ ಸಾಕಷ್ಟು ಒಳಹರಿವಿದೆ. ಈ ಜಲಾಶಯಗಳಲ್ಲಿ ಒಟ್ಟಾರೆ ಶೇ.51ರಷ್ಟು ನೀರು ಸಂಗ್ರವಾಗಿದ್ದು, ಒಳಹರಿವು 1,45,000 ಕ್ಯೂಸೆಕ್ಗೂ ಹೆಚ್ಚಿದೆ.
ಆಲಮಟ್ಟಿ ಜಲಾಶಯ ಶೇ.61ರಷ್ಟು , ನಾರಾಯಣಪುರ ಜಲಾಶಯ ಶೇ.78ರಷ್ಟು ಭರ್ತಿಯಾಗಿವೆ. ಆಲಮಟ್ಟಿ ಜಲಾಶಯಕ್ಕೆ 98 ಸಾವಿರಕ್ಕೂ ಹೆಚ್ಚು ಒಳಹರಿವಿದ್ದು, 50 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ನಾರಾಯಣಪುರ ಜಲಾಶಯಕ್ಕೆ 51 ಸಾವಿರಕ್ಕೂ ಹೆಚ್ಚು ನೀರು ಹರಿದುಬರುತ್ತಿದ್ದು, 44 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.