ಸಂಸತ್‌: ಇದೇ 28ರಿಂದ ‘ಆಪರೇಷನ್ ಸಿಂಧೂರ’ ಕುರಿತು ಚರ್ಚೆ: ಸರ್ಕಾರ ಸಮ್ಮತಿ

Most read

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ‘ಆಪರೇಷನ್ ಸಿಂಧೂರ’ ಕುರಿತು ಸಂಸತ್ತಿನಲ್ಲಿ ದಿನಾಂಕ 28 ರಿಂದ ವಿಶೇಷ ಚರ್ಚೆ ನಡೆಸಲು ಸರ್ಕಾರ ಸಮ್ಮತಿ ಸೂಚಿಸಿದೆ. ಎರಡೂ ಸದನಗಳಲ್ಲಿ ತಲಾ 16 ಗಂಟೆಗಳ ಚರ್ಚೆಗೆ ಅವಕಾಶ ನೀಡಲಾಗಿದೆ.

ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪ ವ್ಯವಹಾರಗಳ ಸಮಿತಿ ಸಭೆಯಲ್ಲಿ (ಬಿಎಸಿ) 16 ಗಂಟೆಗಳ ಚರ್ಚೆಗೆ ಸರ್ಕಾರ ಒಪ್ಪಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಲಾಪದಲ್ಲಿ ಹಾಜರಿದ್ದು ಈ ವಿಷಯ ಕುರಿತು ಮಾತನಾಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ. ಲೋಕಸಭೆಯಲ್ಲಿ ಇದೇ 28ರಂದು ಚರ್ಚೆ ಆರಂಭವಾದರೆ ಮರುದಿನ ರಾಜ್ಯಸಭೆಯಲ್ಲಿ ಚರ್ಚೆ ಶುರುವಾಗಲಿದೆ.

ಪ್ರಧಾನಿ ಪ್ರತಿಕ್ರಿಯೆ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಗೆ ಸರ್ಕಾರ ಯಾವುದೇ ಭರವಸೆ ನೀಡಿಲ್ಲ ಎಂದು ತಿಳಿದು ಬಂದಿದೆ. ಬಿಎಸಿ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯಸಭೆಯ ಕಾಂಗ್ರೆಸ್ ಉಪ ನಾಯಕ ಪ್ರಮೋದ್ ತಿವಾರಿ, ಪ್ರಧಾನಿ ಮೋದಿ ಅವರು ಚರ್ಚೆಯ ಸಮಯದಲ್ಲಿ ಹಾಜರಿರಬೇಕು ಎಂದು ನಾವು ಒತ್ತಾಯಿಸಿದ್ದೇವೆ. ಸರ್ಕಾರದಿಂದ ನಮಗೆ ಆ ಬಗ್ಗೆ ಭರವಸೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್‌ ರಾಜೀನಾಮೆ ನೀಡಿದ ನಂತರ ನಡೆದ ಮೊದಲ ಬಿಎಸಿ ಸಭೆ ಇದಾಗಿದೆ. ರಾಜೀನಾಮೆಗೂ ಮುನ್ನ ಸದನದ ಕಾರ್ಯಸೂಚಿಯನ್ನು ಅಂತಿಮಗೊಳಿಸಲು ಧನಕರ್ ಅವರು ಎರಡು ಸಲ ಸಮಿತಿಯ ಸಭೆ ಕರೆದಿದ್ದರು. ಸೋಮವಾರ ಸಂಜೆ ನಡೆದ ಸಮಿತಿ ಸಭೆಗೆ ಕೇಂದ್ರ ಸಚಿವರು ಗೈರುಹಾಜರಾದ ಕಾರಣಕ್ಕೆ ಮಂಗಳವಾರಕ್ಕೆ ಮುಂದೂಡಿದ್ದರು. ಬುಧವಾರ ನಡೆದ ಸಮಿತಿ ಸಭೆಯ ಅಧ್ಯಕ್ಷತೆಯನ್ನು ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ವಹಿಸಿದ್ದರು.

ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಸೇರಿದಂತೆ ವಿವಿಧ ವಿಷಯಗಳ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸಿದವಾದರೂ ಸರ್ಕಾರ ಈ ಬಗ್ಗೆ ಯಾವುದೇ ಭರವಸೆ ನೀಡಿಲ್ಲ.

More articles

Latest article