ಬೆಂಗಳೂರು: ಪ್ರತಿ ಪ್ರಶ್ನೆಗೆ ಉತ್ತರ ನೀಡಲು ಐದು ಆಯ್ಕೆಗಳನ್ನು ಒಳಗೊಂಡ ಹೊಸ ವಿಧಾನವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಈ ವಿಧಾನ ಅನ್ವಯವಾಗುವುದಿಲ್ಲ. ಸಿಇಟಿ ಪರೀಕ್ಷಾ ವಿಧಾನ ಈ ಹಿಂದಿನಂತೆಯೇ ಇರಲಿದೆ ಎಂದೂ ಹೇಳಿದ್ದಾರೆ.
ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ಕೆಇಎ ನಡೆಸುವ ಎಲ್ಲ ಪರೀಕ್ಷೆಗಳಲ್ಲೂ ಪ್ರತಿ ಪ್ರಶ್ನೆಗೆ ಉತ್ತರ ನೀಡಲು ಇದುವರೆಗೆ ನಾಲ್ಕು ಆಯ್ಕೆಗಳು ಇದ್ದವು. ಪರೀಕ್ಷಾ ಅಕ್ರಮ ತಡೆಯಲು ಪ್ರಾಧಿಕಾರ ಐದು ಆಯ್ಕೆಗಳ ವಿಧಾನ ಅಳವಡಿಸಿಕೊಂಡಿದೆ. ಒಬ್ಬ ವಿದ್ಯಾರ್ಥಿ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸದಿದ್ದರೆ, ಅವರು ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಯಲ್ಲಿ ಒದಗಿಸಲಾದ ಐದನೇ ಆಯ್ಕೆಗೆ ಮಾರ್ಕ್ ಮಾಡಬಹುದು.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಪರೀಕ್ಷೆಗಳಲ್ಲಿ ಕೆಲವರು ಪರೀಕ್ಷೆಯ ನಂತರ ಒಎಂಆರ್ ಹಾಳೆ ತಿದ್ದಿದ್ದ ಪ್ರಕರಣಗಳು ವರದಿಯಾಗಿದ್ದವು. ಈ ಕುರಿತು ರಚಿಸಿದ್ದ ಸಮಿತಿ ಒಎಂಆರ್ನಲ್ಲಿ ಐದನೇ ಆಯ್ಕೆಗೆ ಶಿಫಾರಸು ಮಾಡಿತ್ತು. ಇದೇ ವಿಧಾನವನ್ನು ಕೆಇಎ ಅಳವಡಿಸಿಕೊಂಡಿದೆ ಎಂದು ಹೇಳಿದ್ದಾರೆ.