ಮೈಸೂರಿನಲ್ಲಿ ಫಿಲ್ಮ್‌  ಸಿಟಿ ನಿರ್ಮಾಣ ಸನ್ನಿಹಿತ; ಸ್ಥಳ ವೀಕ್ಷಣೆ ಮಾಡಿದ ನಿರ್ಮಾಪಕ ನಿರ್ದೇಶಕರು; ಈಡೇರಿದ ಸ್ಯಾಂಡಲ್ ವುಡ್‌ ಕನಸು

Most read

ಬೆಂಗಳೂರು: ರಾಜ್ಯದಲ್ಲೂ ಚಿತ್ರನಗರಿ ನಿರ್ಮಾಣ ಆಗಬೇಕು ಎಂದು ಸ್ಯಾಂಡಲ್‌ ವುಡ್‌ ನ ಕನಸು. ದಶಕಗಳಿಂದ ನಿರ್ಮಾಪಕರು, ನಿರ್ದೇಶಕರು, ನಟರು ಚಿತ್ರ ನಗರ ನಿರ್ಮಾಣಕ್ಕೆ ಆಗ್ರಹಪಡಿಸುತ್ತಲೇ ಬಂದಿದ್ದಾರೆ. ರಾಜ್ಯಕ್ಕೆ ತನ್ನದೇ ಆದ ಫಿಲ್ಮ್‌  ಸಿಟಿಯ ಅಗತ್ಯ ಇದೆ ಎಂದು ಪ್ರತಿಪಾದಿಸುತ್ತಲೇ ಬಂದಿದ್ದರು. ದಶಕಗಳ ಬೇಡಿಕೆ ಈಡೇರುವ ಸಮಯ ಬಂದಿದೆ.

ಸರ್ಕಾರ ಈಗಾಗಲೇ ಮೈಸೂರಿನಲ್ಲಿ ಚಿತ್ರನಗರ ನಿರ್ಮಾಣದ ಭರವಸೆಯನ್ನು ನೀಡಿದೆ. ಕೆಲವೇ ದಿನಗಳಲ್ಲಿ ಚಿತ್ರನಗರಿಯ ಕೆಲಸಗಳು ಆರಂಭವಾಗಲಿವೆ ಎನ್ನಲಾಗುತ್ತಿದೆ. ಕನ್ನಡದ ಹಿರಿಯ ನಿರ್ದೇಶಕರಾದ ರಾಜೇಂದ್ರಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್ ಇನ್ನೂ ಕೆಲವರು ಇತ್ತೀಚೆಗಷ್ಟೆ ಚಿತ್ರನಗರಿ ನಿರ್ಮಾಣವಾಗುತ್ತಿರುವ ಮೈಸೂರಿನ ಸ್ಥಳಕ್ಕೆ ಹೋಗಿ ವೀಕ್ಷಣೆ ನಡೆಸಿ ಬಂದಿದ್ದಾರೆ.

ಚಿತ್ರ ನಗರಿ ಸ್ಥಳ ನೋಡಿಕೊಂಡು ಬಂದಿರುವ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಫೇಸ್‌ ಬುಕ್‌ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಸರ್ಕಾರಕ್ಕೆ ಕೃತಜ್ಞತೆಗಳು. ಬಹುದಿನಗಳ ಕನಸು ನನಸಾಗಿದೆ. ಮೈಸೂರು ಬಳಿ ಚಿತ್ರನಗರಿಯ ಕಾಮಗಾರಿ ಆರಂಭವಾಗಿದೆ. ಮೊನ್ನೆ ನಾವೆಲ್ಲ ಹೋಗಿ ನೋಡಿ ಖುಷಿಪಟ್ಟೆವು. ಸಂಕಷ್ಟದಲ್ಲಿರುವ ಉದ್ಯಮ ಇದನ್ನು ಸದ್ಬಳಕೆ ಮಾಡಿಕೊಂಡು ಹಿರಿತೆರೆ, ಕಿರುತೆರೆಯ ಎಲ್ಲ ತರುಣರು ಹೊಸ ದೃಷ್ಟಿಯಿಂದ ಇಲ್ಲಿ ಹೊಸ ಬೆಳೆ ಬೆಳೆಯಬೇಕು. ಕುಶಲಿಗಳು, ಕಾರ್ಮಿಕರು ಮತ್ತು ತಂತ್ರಜ್ಞರಿಗೆ ಚಿತ್ರನಗರಿಯ ಆಸುಪಾಸಿನಲ್ಲಿ ಕಾನೂನು ವ್ಯಾಪ್ತಿಯಲ್ಲಿ ನಿವೇಶನ ಒದಗಿಸಿದರೆ ಉದ್ಯಮವನ್ನು ಮೈಸೂರಿಗೆ ಸ್ಥಳಾಂತರಿಸಬಹುದು. ಇದು ಚಿತ್ರನಗರಿಯ ಶೀಘ್ರ ಬೆಳವಣಿಗೆಗೆ ಅನುಕೂಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಕೆಲವು ಮೈಸೂರಿನಲ್ಲಿ ಮಾತನಾಡಿದ್ದ ಸಚಿವ ಎಚ್ ​ಸಿ ಮಹದೇವಪ್ಪ, ‘ಚಿತ್ರನಗರಿ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿರುವ ಕೋಚನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತುಸು ಸಮಸ್ಯೆ ಇದೆ. ಇಲ್ಲಿ ಅನಧಿಕೃತವಾಗಿ ಉಳುಮೆ ಮಾಡುತ್ತಿದ್ದವರು ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಕೆಲವರಿಗೆ ಮಾನವೀಯತೆ ಆಧಾರದಲ್ಲಿ ಉದ್ಯೋಗ, ಹಣಕಾಸು ಇನ್ನಿತರೆಗಳನ್ನು ನೀಡುವ ಆಲೋಚನೆ ಇದೆ ಎಂದು ತಿಳಿಸಿದ್ದರು.

ಸುಮಾರು 500 ಕೋಟಿ ವೆಚ್ಚದಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ  ಚಿತ್ರನಗರಿ ಸ್ಥಾಪನೆಯಾಗಲಿದೆ. ಈಗಾಗಲೇ 150 ಎಕರೆ ಸ್ಥಳವನ್ನು ಚಿತ್ರನಗರಿಗೆ ಗುರುತಿಸಲಾಗಿದ್ದು, ಇನ್ನೂ 100 ಎಕರೆಯನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳುವ ಉದ್ದೇಶವೂ ಇದೆ. ಸಿನಿಮಾ ನಿರ್ಮಾಣಕ್ಕೆ ಸಹಾಯವಾಗುವುದರ ಜತೆಗೆ ಪ್ರವಾಸೋದ್ಯಮದ ಉತ್ತೇಜನಕ್ಕೂ ಸಹಕಾರಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

More articles

Latest article