ಬೆಂಗಳೂರು: 23 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಬೇಕು, ವಿಧಾನಸೌಧ-ವಿಕಾಸೌಧ ಬಹುಮಹಡಿ ಕಟ್ಟಡದ ಬಳಿ ಸರ್ಕಾರಿ ಕೇಂದ್ರ ಲೇಖನ ಸಾಮಾಗ್ರಿ ಮಳಿಗೆಯನ್ನು ಸ್ಥಾಪಿಸಬೇಕು, ಬಹು ಆದಾಯ ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸಬೇಕು ಮತ್ತು ಕೆಪಿಎಸ್ ಸಿ ಶಾಖಾ ಕಚೇರಿಯನ್ನು ಧಾರವಾಡದಲ್ಲಿ ತೆರೆಯ ಬೇಕು ಎಂದು 8ನೇ ಆಡಳಿತ ಸುಧಾರಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗದ 8ನೇ ವರದಿಯನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಇಂದು ಸಲ್ಲಿಸಿದರು.
ಈ ವರದಿಯಲ್ಲಿ 189 ಹೊಸ ಶಿಫಾರಸುಗಳನ್ನು ಮಾಡಲಾಗಿದೆ. ಹಿಂದಿನ ಏಳು ವರದಿಗಳಲ್ಲಿ ಒಟ್ಟು 5,039 ಶಿಫಾರಸ್ಸುಗಳನ್ನು ಮಾಡಲಾಗಿದ್ದು, ಒಟ್ಟಾರೆ ಶೇ.30ರಷ್ಟು ಅನುಷ್ಠಾನಗೊಂಡಿದ್ದು, ಶೇ.53ಕ್ಕೂ ಹೆಚ್ಚು ಶಿಫಾರಸ್ಸುಗಳನ್ನ ಸಂಪೂರ್ಣವಾಗಿ ಅನುಷ್ಠಾನಗೊಳಿಸುವತ್ತ ಕ್ರಮ ಜರುಗಿಸಲಾಗುತ್ತಿದೆ. ಇದು ಆಡಳಿತ ಸುಧಾರಣೆಯಲ್ಲಿ ಮಹತ್ತರ ಹೆಜ್ಜೆಯಾಗಿದೆ ವರದಿ ಸಲ್ಲಿಸಿದ ನಂತರ ಶಾಸಕರೂ ಆಗಿರುವ ದೇಶಪಾಂಡೆ ತಿಳಿಸಿದರು.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ, ಮುದ್ರಣ ಲೇಖನ ಸಾಮಾಗ್ರಿ ಮತ್ತು ಪ್ರಕಟಣೆಗಳ ಇಲಾಖೆ ಒಳಗೊಂಡಿದೆ ಎಂದರು. ಪಡಿತರಚೀಟಿ, ಡೇಟಾ ಬೇಸ್, ಜನನ-ಮರಣ ನೋಂದಣಿ ತಂತ್ರಾಂಶದೊಂದಿಗೆ ನೌಕರರ ಡೇಟಾವನ್ನು ಪ್ರತಿ ವರ್ಷ ಸಂಯೋಜಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ ಎಂದರು.
ಸಾಮಾಜಿಕ, ಆರ್ಥಿಕ ಜಾತಿ ಗಣತಿ ಸಮಯದಲ್ಲಿ ಬಿಪಿಎಲ್ ಕುಟುಂಬಗಳನ್ನು ಗುರುತಿಸಲು ನಿಗದಿಪಡಿಸಿದ ಮಾನದಂಡಗಳನ್ನು ಸರ್ಕಾರ ಸೂಕ್ತ ಮಾರ್ಪಾಡುಗಳೊಂದಿಗೆ ಬಿಪಿಎಲ್ ಕುಟುಂಬಗಳನ್ನು ಗುರುತಿಸಲು ಪರಿಗಣಿಸಬಹುದು. ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಲು ಸರ್ಕಾರವು ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು. ಉನ್ನತಮಟ್ಟದ ಮೇಲಿಚಾರಣಾ ಸಮಿತಿ ರಚನೆ, ಡಿಜಿಟಿಲ್ ಟ್ರ್ಯಾಕಿಂಗ್ ಕಾರ್ಯವಿಧಾನ ಅಳವಡಿಕೆ, ಇಲಾಖೆಗಳೊಂದಿಗೆ ಸಮನ್ವಯ ಬಲಪಡಿಸುವುದು, ಅನುಷ್ಠಾನಗೊಂಡ ಶಿಫಾರಸುಗಳ ಪರಿಣಾಮವನ್ನು ಸಮೀಕ್ಷೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವುದು ವರದಿಯ ಪ್ರಮುಖ ಶಿಫಾರಸ್ಸಾಗಿದೆ ಎಂದು ಅವರು ತಿಳಿಸಿದರು.