ಬೆಂಗಳೂರು: ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ನೀಡುತ್ತಿದ್ದ ನಕಲಿ ಅಂಕಪಟ್ಟಿ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ಮೂವರು ವಂಚಕರನ್ನು ಬಂಧಿಸಿದ್ದಾರೆ. ಧಾರವಾಡದ ಪ್ರಶಾಂತ್ ಗುಡುಮಿ (41), ಬೆಂಗಳೂರಿನ ಬನಶಂಕರಿ ನಿವಾಸಿ ಮೌನಿಷ್ (36) ಮತ್ತು ಗದಗ ಜಿಲ್ಲೆಯ ರಾಜಶೇಖರ್ ಎಚ್. (41) ಬಂಧಿತ ಆರೋಪಿಗಳು. ಇವರು ಪ್ರತಿಯೊಬ್ಬ ಆಕಾಂಕ್ಷಿಯಿಂದ ರೂ. 5 ಸಾವಿರದಿಂದ 10 ಸಾವಿರ ರೂ. ಪಡೆದು ನಕಲಿ ಅಂಕಪಟ್ಟಿ ವಿತರಿಸುತ್ತಿದ್ದರು. ಈ ರೀತಿ 350 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ವಿತರಣೆ ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳು ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆಯನ್ನು ನೋಂದಣಿ ಮಾಡಿಕೊಂಡಿದ್ದರು. ಆದರೆ ರಾಜ್ಯ ಶಿಕ್ಷಣ ಮಂಡಳಿಯಿಂದ ಯಾವುದೇ ಮಾನ್ಯತೆ ನೀಡಿರಲಿಲ್ಲ. ಆದರೂ ಶಿಕ್ಷಣ ಇಲಾಖೆ ನೀಡುವ ಶಿಕ್ಷಣಕ್ಕೆ ಸರಿಸಮಾನವಾಗಿರುತ್ತದೆ ಎಂದು ಪ್ರಚಾರ ಮಾಡಿ 350 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ವಿತರಿಸಿದ್ದರು. ಇವರಲ್ಲಿ ಕೆಲವರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗವನ್ನೂ ಗಿಟ್ಟಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬನಶಂಕರಿಯಲ್ಲಿ ಅಕಾಡೆಮಿ ನಡೆಸುತ್ತಿದ್ದ ಮೌನೀಷ್ ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಕತ್ರಿಗುಪ್ಪೆಯ ರಾಮ್ ರಾವ್ ಲೇಔಟ್ ನಿವಾಸಿ ಮಿರ್ಜಾ ಇನಾಮುಲ್ಲಾ ಎಂಬ ವ್ಯಾಪಾರಿಯೊಬ್ಬರು ಅಕಾಡೆಮಿಯ ಮಾಲೀಕನನ್ನು ಭೇಟಿ ಮಾಡಿ, ತಮ್ಮ ಅಣ್ಣನ ಮಗನನ್ನು ದೂರ ಶಿಕ್ಷಣದ ಮೂಲಕ ಪಿಯುಸಿಗೆ ದಾಖಲು ಮಾಡಲು ಬಯಸಿದ್ದಾರೆ. ಆಗ ಮೌನಿಷ್, ತರಗತಿಗಳಿಗೆ ಹಾಜರಾಗದೆ, ಪರೀಕ್ಷೆ ಬರೆಯದೆಯೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅಂಕಪಟ್ಟಿಗಳನ್ನುನೀಡುವುದಾಗಿ ತಿಳಿಸಿದ್ದಾನೆ. ಕೂಡಲೇ ಇನಾಮುಲ್ಲಾ ಸಿಸಿಬಿ ಆರ್ಥಿಕ ಅಪರಾಧ ದಳಕ್ಕೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಬನಶಂಕರಿಯಲ್ಲಿರುವ ಅಕಾಡೆಮಿ ಮೇಲೆ ದಾಳಿ ನಡೆಸಿ ಸಂಸ್ಥೆಯ ಮಾಲೀಕ ಮೌನಿಷ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈತ ತನ್ನ ಕಚೇರಿಯಲ್ಲೇ ಅಂಕಪಟ್ಟಿಗಳನ್ನು ಮುದ್ರಿಸುತ್ತಿದ್ದ. ನಂತರ ರಾಜ್ಯದ ವಿವಿಧ ಭಾಗಗಳಲ್ಲಿರುವ ತನ್ನ ಸಹಚರರ ಮೂಲಕ ನಕಲಿ ಅಂಕಪಟ್ಟಿ ವಿತರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು ಧಾರವಾಡದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಮೊಬೈಲ್ ನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿಯ ಹೆಸರಿನಲ್ಲಿ ಸುಮಾರು 300 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳಿರುವುದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಬೆಳಗಾವಿ ಮೂಲದ ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಹುಡುಕಾಟ ನಡೆದಿದೆ.