ಬಲಿಯಾ: ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ಬಿಜೆಪಿ ಮುಖಂಡ ನೀರಜ್ ಶೇಖರ್ ಅವರ ಜತೆ ಗುರುತಿಸಿಕೊಂಡಿರುವ ಮತ್ತೊಬ್ಬ ಬಿಜೆಪಿ ಮುಖಂಡರೊಬ್ಬರು ದಲಿತ ಸಾಹಿತಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ವದಿಯಾಗಿದೆ.
ರಾಜ್ಯಸಭೆ ಸದಸ್ಯರೂ ಆಗಿರುವ ನೀರಜ್ ಶೇಖರ್ ಅವರ ಬೆಂಬಲಿಗ ಅಲೋಕ್ ಸಿಂಗ್ ಎಂಬಾತ ಲಖನೌ ವಿಶ್ವವಿದ್ಯಾಲಯದ ವಿದ್ವಾಂಸ ದೀಪಕ್ ಕನೌಜಿಯಾ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ನಿನ್ನೆ ರಾತ್ರಿ ಎಫ್ ಐ ಆರ್ ದಾಖಲಾಗಿದೆ.
ಅಲೋಕ್ ಸಿಂಗ್ ಗೆ ನಮ್ಮ ಕುಟುಂಬದ ಜತೆಗೆ ರಾಜಕೀಯ ವೈಷಮ್ಯವಿದೆ. ಮೇ.21 ಎಂದು ನನಗೆ ಕರೆ ಮಾಡಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದದ್ದಾರೆ ಎಂದು ದೀಪಕ್ ಕನೌಜಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ಮೊಬೈಲ್ ಕರೆಯನ್ನು ರೆಕಾರ್ಡ್ ಮಾಡಿಕೊಳ್ಳಿ, ಉತ್ತರ ಪ್ರದೇಶದ ಕಾನೂನು ಹಾಗೂ ಪೊಲೀಸರ ಬಗ್ಗೆ ನನಗೆ ಯಾವುದೇ ಭಯವಿಲ್ಲ ಎಂದು ಅಲೋಕ್ ಸಿಂಗ್ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನನ್ನ ತಂದೆಯೂ ಕೂಡ ಇವರ ಸತತ ಕಿರುಕುಳದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಕಳೆದ ವರ್ಷ ಹೃದಯಾಘಾತದಿಂದ ಮೃತಪಟ್ಟಿದ್ದರು. ಹಳ್ಳಿಯಲ್ಲಿ ವಾಸಿಸುತ್ತಿರುವ ನನ್ನ ತಾಯಿಯನ್ನು ಇವರು ಕೊಲೆ ಮಾಡುವ ಸಂಭವವಿದೆ ಎಂದು ದೀಪಕ್ ಕನೌಜಿಯಾ ಆರೋಪಿಸಿದ್ದಾರೆ.
ಅಲೋಕ್ ಸಿಂಗ್ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ನೀರಜ್ ಶೇಖರ್ ಅವರ ನಿಕಟವರ್ತಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಅರುಣ್ ತಿವಾರಿ ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಲೋಕ್ ಸಿಂಗ್ ಹಾಗೂ ದೀಪಕ್ ಕನೌಜಿಯಾ ಅವರ ನಡುವೆ ನಡೆದಿರುವ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೋಕ್ ಸಿಂಗ್ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.