ನೆಲಮಂಗಲ: ಕಾರನ್ನು ಓವರ್ ಟೇಕ್ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ, ಅವರ ಪುತ್ರ, ಭದ್ರತಾ ಸಿಬ್ಬಂದಿ, ಚಾಲಕ ಹಾಗೂ ಮತ್ತೊಂದು ಕಾರಿನ ಪ್ರಯಾಣಿಕರ ಮಧ್ಯೆ ಗಲಾಟೆ ನಡೆದಿದೆ. ಬೆಂಗಳೂರು-ಪುಣೆ ರಸ್ತೆಯ ನೆಲಮಂಗಲ ಸಮೀಪ ಹಳೆ ನಿಜಗಲ್ ಬಳಿ ಈ ಪ್ರಕರಣ ನಡದಿದೆ.
ಅನಂತ್ ಕುಮಾರ್ ಹೆಗಡೆ, ಕಾರು ಚಾಲಕ ಮಹೇಶ್, ಭದ್ರತಾ ಸಿಬ್ಬಂದಿ ಶ್ರೀಧರ್ ಮತ್ತು ಅನಂತ್ ಕುಮಾರ್ ಅವರ ಪುತ್ರ ಆಶುತೋಷ್ ಹಾಗೂ ಮತ್ತೊಂದು ಕಾರಿನಲ್ಲಿದ್ದ ಸಲ್ಮಾನ್, ಸೈಫ್, ಇಲಿಯಾಜ್ ಖಾನ್, ಗುಲಷಿರ್ ಉನ್ನೀಸಾ ಅವರ ನಡುವೆ ಗಲಾಟೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಬಸ್ಪೇಟೆ ಬಳಿ ನಮ್ಮ ಕಾರು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಸಲ್ಮಾನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತುಮಕೂರಿನಿಂದ ಹಾಲೇನಹಳ್ಳಿ ಎಂಬ ಗ್ರಾಮಕ್ಕೆ ತೆರಳುತ್ತಿದ್ದೆವು. ಆಗ ಘಟನೆ ನಡೆದಿದೆ. ಹಲ್ಲೆಯಿಂದ ನನ್ನ ಹಲ್ಲು ಮುರಿದಿದ್ದು, ಮುಖಕ್ಕೆ ಪೆಟ್ಟು ಬಿದ್ದಿದೆ ಎಂದು ಹಲ್ಲೆಗೆ ಒಳಗಾದ ಸಲ್ಮಾನ್ ಖಾನ್ ಆರೋಪಿಸಿದ್ದಾರೆ.
ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದೆವು. ಹಳೇ ನಿಜಗಲ್ ಬಳಿ ಇನೊವಾ ಕಾರೊಂದು ನಮ್ಮ ಕಾರನ್ನು ಹಿಂದಿಕ್ಕುವಾಗ ನಮ್ಮ ಕಾರಿಗೆ ಅವರ ಕಾರು ತಾಗಿತ್ತು. ನಮ್ಮ ಕಾರು ಚಾಲಕ ಪ್ರಶ್ನೆ ಮಾಡಿದ್ದಕ್ಕೆ ವಾಗ್ವಾದ ನಡೆದಿದೆ. ಯಾರ ಮೇಲೂ ಹಲ್ಲೆ ನಡೆಸಿಲ್ಲ ಎಂದು ಅನಂತ್ ಕುಮಾರ್ ಹೆಗಡೆ ಪೊಲೀಸರಿಗೆ ತಿಳಿಸಿದ್ದಾರೆ. ಸೈಫ್ ಖಾನ್ ಅವರ ಕುಟುಂಬದ ಸದಸ್ಯರು ಕಾರಿನ ಒಳಗಿನಿಂದ ಚಿತ್ರೀಕರಿಸಿದ ವೀಡಿಯೊದಲ್ಲಿ ಕಿತ್ತಳೆ ಬಣ್ಣದ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಸೈಫ್ ಖಾನ್ ಮತ್ತು ಅವರ ಸಹೋದರರ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ.
ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಸಲ್ಮಾನ್ ಹಾಗೂ ಅನಂತ್ಕುಮಾರ್ ಹೆಗಡೆ ಬೆಂಬಲಿಗರು ಠಾಣೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.