ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಆಗಸ್ಟ್ .15ರಿಂದ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್ ಗೆ ತಿಳಿಸಿದ್ದಾರೆ.
ಕಾಂಗ್ರೆಸ್ ನ ಮಧುಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಜರಾಯಿ ಇಲಾಖೆಯು ಆ.15ರಿಂದ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ, ಆದೇಶ ಹೊರಡಿಸಲಿದೆ. ಒಂದು ವೇಳೆ ನಿಯಮ ಮೀರಿ ಪ್ಲಾಸ್ಟಿಕ್ ಬಳಕೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಅವರುಯ ನೀಡಿದರು.
ದೇವಸ್ಥಾನದ ಒಳಗೆ ನಿಷೇಧ ಮಾಡಲು ಮುಜರಾಯಿ ಇಲಾಖೆಗೆ ಅಧಿಕಾರ ಇದೆ. ಆವರಣದ ಒಳಗೆ ಜಿಲ್ಲಾಧಿಕಾರಿ ಗಳು ಆದೇಶ ಹೊರಡಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮತ್ತು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಪ್ಲಾಸ್ಟಿಕ್ ನಿಷೇಧ ಮಾಡುತ್ತಿರುವುದಾಗಿ ಅವರು ವಿವರಣೆ ನೀಡಿದರು.
ಮುಜರಾಯಿ ದೇವಸ್ಥಾನಗಳ ನಿರ್ವಹಣೆಗಾಗಿ ಧಾರ್ಮಿಕ ಪರಿಷತ್ ರಚಿಸಲಾಗಿದ್ದು, ಈ ಸಮಿತಿಗೆ ಮುಜರಾಯಿ ಸಚಿವರು ಅಧ್ಯಕ್ಷರಾಗಿರುತ್ತಾರೆ. ಪರಿಷತ್ ವತಿಯಿಂದ ಎ ಗ್ರೇಡ್, ಬಿ ಗ್ರೇಡ್, ಸಿ ಗ್ರೇಡ್ ದೇವಸ್ಥಾನಗಳನ್ನು ನಿರ್ವಹಣೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.