ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧ ದಂಪತಿಯನ್ನು ಬೆದರಿಸಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ನಾರಾಯಣ ಸಿಂಗ್ ಚೌಧರಿ ಮತ್ತು ಈಶ್ವರ್ ಸಿಂಗ್ ಬಂಧಿತ ಆರೋಪಿಗಳು. ಇವರು ವೃದ್ಧ ದಂಪತಿಗಳಿಂದ ಸುಮಾರು ರೂ.4.79 ಕೋಟಿ ಸುಲಿಗೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಇವರ ವಿರುದ್ಧ ವಂಚನೆಗೊಳಗಾದ ಮಂಜುನಾಥ್ ಎಂಬುವರು ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಸೈಬರ್ ವಂಚಕರು ದಂಪತಿಯನ್ನು ಬೆದರಿಸಿ, ಹಂತ ಹಂತವಾಗಿ ರೂ.4.79 ಕೋಟಿ ಸುಲಿಗೆ ಮಾಡಿದ್ದರು. ಜತೆಗೆ ಇವರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಬಲವಂತವಾಗಿ ಪಡೆದುಕೊಂಡಿದ್ದರು. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ವೃದ್ಧ ದಂಪತಿ ಸೈಬರ್ ಠಾಣೆಗೆ ದೂರು ನೀಡಿದ್ದರು ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.
ವೃತ್ತಿಯಿಂದ ಎಂಜಿನಿಯರ್ ಆಗಿದ್ದ ಮಂಜುನಾಥ್ ಅವರು ನೈಜೀರಿಯಾದಲ್ಲಿ 31 ವರ್ಷ ಕೆಲಸ ಮಾಡಿದ್ದ ನಿವೃತ್ತಿ ಹೊಂದಿದ್ದರು. ನಂತರ ಬೆಂಗಳೂರಿನಲ್ಲಿ ನೆಲಸಿದ್ದರು. ವಿವಿಧ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದು ಹಣವನ್ನು ಇಟ್ಟಿದ್ದರು.
ಮಾರ್ಚ್ ಮೊದಲ ವಾರದಲ್ಲಿ ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಮಂಜುನಾಥ್ ಅವರಿಗೆ ಸೈಬರ್ ವಂಚಕರು ಕರೆ ಮಾಡಿ ತಮ್ಮ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದರು. ನಕಲಿ ಬಂಧನದ ವಾರಂಟ್ ಪ್ರತಿಯನ್ನು ಮಂಜುನಾಥ್ ಅವರ ವಾಟ್ಸಾಪ್ ಗೆ ಕಳುಹಿಸಿ, ತಮ್ಮನ್ನು ಬಂಧಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಬಂಧಿಸಬಾರದು ಎಂದಾದರೆ ಹಣ ನೀಡುವಂತೆ ಕೇಳಿದ್ದರು. ಇವರ ಬೆದರಿಕೆಯಿಂದ ಆತಂಕಗೊಂಡಿದ್ದ ದಂಪತಿ, ಹಂತ ಹಂತವಾಗಿ ಸೈಬರ್ ವಂಚಕರಿಗೆ ರೂ.4.79 ಕೋಟಿ ಹಣ ನೀಡಿದ್ದರು. ಮತ್ತಷ್ಟು ಹಣ ನೀಡುವಂತೆ ಪೀಡಿಸಿದಾಗ ವೃದ್ಧ ದಂಪತಿ ಆಗ್ನೆಯ ವಿಭಾಗದ ಸೈಬರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಈ ಹಣದಿಂದ ಆರೋಪಿಗಳು ಶ್ರೀಲಂಕಾಗೆ ತೆರಳಿ ಮೋಜು ಮಸ್ತಿ ನಡೆಸಿ ಬಂದಿದ್ದರು. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು, ಹಣವನ್ನು ಜಪ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.