ಬೆಂಗಳೂರು: ಕಾಂತಾರಾ ಖ್ಯಾತಿಯ ರಿಷಬ್ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್, ರಾಜ್ ಬಿ.ಶೆಟ್ಟಿ, ರುಕ್ಮಿಣಿ ವಸಂತ್ ಅವರ ಇನ್ಸ್ಟಾ ಗ್ರಾಂ ಖಾತೆಗಳನ್ನು ರಿಷಬ್ ಅನ್ ಫಾಲೋ ಮಾಡಿರುವುದು ಸಿನಿ ಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಯುಗಾದಿ ಹಬ್ಬದಂದು ರಿಷಭ್ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಮಾಡಿದ್ದರು ಅದರಲ್ಲಿ “ಅಧ್ಯಾಯ 2 ಇಲ್ಲಿಂದ ಶುರು!” ಎಂದು ಬರೆದ ಫಲಕವನ್ನು ಪ್ರದರ್ಶಿಸಿದ್ದರು. ಈ ಪೋಸ್ಟ್ನಲ್ಲಿ ಅವರದೇ ಬ್ಯಾನರ್ ಲೋಗೋ (ರಿಷಭ್ ಶೆಟ್ಟಿ ಫಿಲ್ಮ್ಸ್) ಕಾಣಿಸಿತು. ಸಿನಿಫ್ಯಾನ್ಗಳು ತಕ್ಷಣ ಕಾಂತಾರ ಯೂನಿವರ್ಸ್ನ ಎರಡನೇ ಅಧ್ಯಾಯಕ್ಕೆ ಸಂಬಂಧಿಸಿದೆ ಎಂದು ಊಹಿಸಿದ್ದರು. ಆದರೆ ಹೊಂಬಾಳೆ ಫಿಲ್ಮ್ಸ್ ಬೇರೆಯೇ ಕಾಂತಾರ 2ಕೆಲಸ ಆರಂಭಿಸಿದೆ ಎಂದು ಹೇಳಿಕೊಂಡಿತ್ತು. ಈ ನಡುವೆ ರಿಷಭ್ ಅವರ ಮುಂದಿನ ಪ್ರಾಜೆಕ್ಟ್ ಏನು ಎಂಬ ಕುತೂಹಲ ಶುರುವಾಗಿತ್ತು.
ಆದರೆ ಇದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತೆ, ಮಾರ್ಚ್ 19-20ರ ಸುಮಾರಿಗೆ ರಿಷಭ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಅಧಿಕೃತ ಖಾತೆಯನ್ನು ಅನ್ಫಾಲೋ ಮಾಡಿದ್ದಾರೆ. ಅಲ್ಲದೆ ಕಾಂತಾರ ಅಧಿಕೃತ ಪೇಜ್ನನ್ನೂ ಅನ್ಫಾಲೋ ಮಾಡಿದ್ದಾರೆ ಎಂಬುದನ್ನು ಫ್ಯಾನ್ಗಳು ಗಮನಿಸಿದ್ದಾರೆ. ಇಷ್ಟೇ ಅಲ್ಲದೆ ಮಾರ್ಚ್ 27ರ ಸುಮಾರಿಗೆ ಅವರು ತಮ್ಮ ಗೆಳೆಯ ರಾಜ್ ಬಿ. ಶೆಟ್ಟಿ ಮತ್ತು ರುಕ್ಮಿಣಿ ವಾಸಂತ್ ಅವರನ್ನೂ ಅನ್ಫಾಲೋ ಮಾಡಿರುವುದು ಫ್ಯಾನ್ಗಳ ಗಮನಕ್ಕೆ ಬಂದಿದೆ!
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ’ ಸರಣಿ ಬ್ಲಾಕ್ಬಸ್ಟರ್ ಹಿಟ್ ಆಗಿ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಗುರುತಿಸಿಕೊಂಡಿದ್ದವು. ರಿಷಭ್ ಅವರೇ ನಟ-ನಿರ್ದೇಶಕರಾಗಿ ಮಾಡಿದ ಈ ಚಿತ್ರಕ್ಕೆ ಹೊಂಬಾಳೆಯ ವಿಜಯ್ ಕಿರಗಂದೂರು ಅವರ ಬೆಂಬಲ ದೊಡ್ಡದಾಗಿತ್ತು. ಆದರೆ ಈಗ ರಿಷಭ್ ಅವರು ಹೊಂಬಾಳೆಯನ್ನು ಅನ್ಫಾಲೋ ಮಾಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆಸಕ್ತಿಕರವಾಗಿ, ಹೊಂಬಾಳೆ ಫೌಂಡರ್ ವಿಜಯ್ ಕಿರಗಂದೂರ್ ಅವರ ವೈಯಕ್ತಿಕ ಖಾತೆಯನ್ನು ಮಾತ್ರ ರಿಷಭ್ ಇನ್ನೂ ಫಾಲೋ ಮಾಡುತ್ತಿದ್ದಾರೆ ಎಂದು ಕೆಲವು ವರದಿಗಳು ತಿಳಿಸುತ್ತಿವೆ. ಇದೇ ರೀತಿ ರಿಷಭ್ ಅವರ ಪತ್ನಿ ಮತ್ತು ನಿರ್ಮಾಪಕಿ ಪ್ರಗತಿ ಶೆಟ್ಟಿ ಅವರು ಕೂಡ ಹೊಂಬಾಳೆ ಖಾತೆಯನ್ನು ಅನ್ಫಾಲೋ ಮಾಡಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಈ ಅನ್ಫಾಲೋಗಳ ಹಿಂದೆ ಏನಿದೆ? ಫ್ಯಾನ್ಗಳು ತಮ್ಮದೇ ಆದ ತೀರ್ಮಾನಗಳಿಗೆ ಬಂದಿದ್ದಾರೆ. ರಿಷಭ್ ಅವರು ತಮ್ಮದೇ ಬ್ಯಾನರ್ ಅಡಿಯಲ್ಲಿ ‘ಕಾಂತಾರ ಅಧ್ಯಾಯ 2’ ಮಾಡಲಿದ್ದಾರೆಯೇ? ಎಂದು ಸಿನಿಪ್ರಿಯರು ಪ್ರಶ್ನಿಸುತ್ತಿದ್ದಾರೆ. ಹೊಂಬಾಳೆ ಸಂಸ್ಥೆಯ ಜೊತೆಗಿನ ರಿಷಬ್ ಸಂಬಂಧ ಹಳಸಿದೆ ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ನೊಂದಿಗೆ ಹೊಸ ಪ್ರಾಜೆಕ್ಟ್ (ಹನುಮಾನ್ ಸಂಬಂಧಿತ ಚಿತ್ರ?) ಶುರು ಮಾಡುತ್ತಿರುವುದರಿಂದ ಹೊಂಬಳೆಯಿಂದ ದೂರ ಸರಿದಿರಬಹುದು ಎಂದು ಹಲವರು ಊಹಿಸುತ್ತಿದ್ದಾರೆ.
ಇದುವರೆಗೆ ರಿಷಭ್ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್, ರಾಜ್ ಬಿ. ಶೆಟ್ಟಿ ಅಥವಾ ರುಕ್ಮಿಣಿ ವಸಂತ್ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಏನೋ ಆಗಿದೆ ಎಂಬುದಂತೂ ಸ್ಪಷ್ಟ. ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಎಂದು ಸಿನಿಪಂಡಿತರು ಹೇಳುತ್ತಿದ್ದಾರೆ.

