ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಹೂತಿರುವ ಶವಗಳನ್ನು ಹೊರತೆಗೆಯುವ ಕೆಲಸ ಆರಂಭವಾಗಿದೆ. ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್ ಐಟಿ ತನಿಖಾ ದಳದ ತನಿಖಾಧಿಕಾರಿ ಜಿತೇಂದ್ರ ದಯಾಮ್ ಮತ್ತಿತರ ಅಧಿಕಾರಿಗಳು ಹಾಜರಿದ್ದಾರೆ.
ಶವಗಳನ್ನು ಹೊರತೆಗೆಯಲು ಎಸ್ ಐಟಿ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ. ಧರ್ಮಸ್ಥಳ ಗ್ರಾಮ ಪಂಚಾಯಿತಿ 12 ಮಂದಿ ಕಾರ್ಮಿಕರನ್ನು ನಿಯೋಜಿಸಿದೆ. ಅವರು ಹಾರೆ, ಪಿಕಾಸಿ, ಗುದ್ದಲಿ ಜತೆ ಆಗಮಿಸಿದ್ದಾರೆ. ಎಲ್ಲರೂ ನೇತ್ರಾವತಿ ಸ್ನಾನಘಟ್ಟದಲ್ಲಿ ಬೀಡುಬಿಟ್ಟಿದ್ದಾರೆ. ದೂರು ನೀಡಿದ ಅನಾಮಧೇಯ ವ್ಯಕ್ತಿ ಈವರೆಗೆ ಶವಗಳನ್ನು ಹೂತಿರುವ 13 ಸ್ಥಳಗಳನ್ನು ತೋರಿಸಿದ್ದಾನೆ. ಇಂದು ಸಂಜೆಯೊಳಗೆ ಅಸ್ಥಿಪಂಜರಗಳು ಹೊರಬರಲಿವೆಯೇ ಎಂದು ಕಾದುನೋಡಬೇಕಿದೆ.
ಈ ಮಧ್ಯೆ ಪ್ರತಿಕ್ರಿಯೆ ನೀಡಿದ ಗೃಹಸಚಿವ ಪರಮೇಶ್ವರ್, ಧರ್ಮಸ್ಥಳದಲ್ಲಿ ಎಸ್ ಐಟಿ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೇತ್ರಾವತಿ ಸ್ನಾನ ಘಟ್ಟದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪೊಲೀಸರು ಕಳೇಬರ ಅಥವಾ ಅಸ್ಥಿಪಂಜರಗಳ ಸಂಗ್ರಹಕ್ಕೆ ಬಟ್ಟೆ, ಪ್ಲಾಸ್ಟಿಕ್ ಕವರ್ ಗಳನ್ನು ತಂದಿದ್ದಾರೆ.
ದೂರುದಾರರ ವ್ಯಕ್ತಿ ಶನಿವಾರ ಮತ್ತು ಭಾನುವಾರ ಎಸ್ ಐ ಟಿ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಜುಲೈ 4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಂದು ವಾರದ ನಂತರ ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರಾಗಿ, ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.