ದೇವನಹಳ್ಳಿ: ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆ ಕೈ ಬಿಡುವಂತೆ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇವನಹಳ್ಳಿ ಚನ್ನರಾಯಪಟ್ಟಣ ರೈತ ಹೋರಾಟಗಾರರು ಮತ್ತು ಸಂಯುಕ್ತ ಹೋರಾಟ ವೇದಿಕೆ ಮುಖಂಡರೊಂದಿಗೆ ಜುಲೈ 4 ರಂದು ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಇಂದು ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ರೈತ ಮುಖಂಡರ ಜೊತೆ ಈ ಬಗ್ಗೆ ಚರ್ಚಿಸಿದ ಮುಖ್ಯಮಂತ್ರಿಗಳು ಜುಲೈ 4ರ ಬೆಳಗ್ಗೆ 11 ಗಂಟೆಗೆ ರೈತರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಮಗ್ರ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
ಭೂಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣ ಹೋಬಳಿ ರೈತರು ಸಾವಿರಕ್ಕೂ ಹೆಚ್ಚು ದಿನಗಳಿಂದ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಬುಧವಾರ ನಡೆದ ‘ದೇವನಹಳ್ಳಿ ಚಲೋ’ ವೇದಿಕೆಯಲ್ಲಿಯೇ ಅಹೋರಾತ್ರಿ ಹೋರಾಟಕ್ಕೆ ಮುಂದಾದ ರೈತ ಮುಖಂಡರನ್ನು ಪೊಲೀಸರು ವೇದಿಕೆಯಿಂದಲೇ ವಶಕ್ಕೆ ಪಡೆದು ಕರೆದೊಯ್ದಯ್ದಿದ್ದಾರೆ.
‘ಸರ್ಕಾರ ಬಂಧಿಸಿದರೂ ಜೈಲಿನಿಂದಲೇ ಹೋರಾಟ ಮುಂದುವರಿಸೋಣ. ಯಾರೂ ಜಾಮೀನು ತೆಗೆದುಕೊಳ್ಳುವುದು ಬೇಡ ಎಂದು ಒಮ್ಮತದ ನಿರ್ಣಯ ಕೈಗೊಂಡಿದ್ದರು. ಅಹೋರಾತ್ರಿ ಹೋರಾಟ ಕೈಬಿಡುವಂತೆ ಪೊಲೀಸರು ಹೋರಾಟಗಾರರ ಮನವೊಲಿಸಲು ಮುಂದಾದರು. ಆ ಪ್ರಯತ್ನ ವಿಫಲವಾದಾಗ ರೈತರು ಮತ್ತು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.
ಭೂ ಸ್ವಾಧೀನ ವ್ಯಾಪ್ತಿಯ 13 ಹಳ್ಳಿಗಳ ಭೂಮಿಯ ಮಣ್ಣು ತಂದು ವೇದಿಕೆಯ ಮುಂಭಾಗ ಸುರಿದ ರೈತ ಮಹಿಳೆಯರು ‘ನಮ್ಮ ಭೂಮಿ ನಮಗೆ ಬಿಡಿ’ ಎಂದು ಘೋಷಣೆ ಕೂಗಿ ಹೋರಾಟಕ್ಕೆ ಚಾಲನೆ ನೀಡಿದರು.
ರೈತರಿಂದ ಧಿಕ್ಕಾರ ಕೂಗಿಸಿಕೊಂಡು ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರ ಹೋಗಬಾರದು. ನಮ್ಮ ಭೂಮಿ ಬಿಟ್ಟು ಬದುಕಲು ಬಿಡಿ ಎಂಬ ರೈತರ ಕೂಗು ಸಿಎಂ ಸಿದ್ದರಾಮಯ್ಯರಿಗೆ ಕೇಳಿಸುತ್ತಿಲ್ಲವೇ? ಕಿವಿ ಹೃದಯ ಮನಸ್ಸಾಕ್ಷಿ ಇಲ್ಲವೇ? ಅಹಿಂದ ಜನಪರ ರೈತರ ಪರ ಅಂತೀರಿ.
ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ನಟ ಪ್ರಕಾಶ್ ರೈ ಅವರು ಮಾತಾನಾಡಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಇದೇ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತು ಕೊಟ್ಟಿದ್ದರು. ಈಗ ಮಾತಿಗೆ ಬದ್ಧರಾಗಬೇಕು ಎಂದು ಆಗ್ರಹಪಡಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಭೂಮಿ ತಂಟೆಗೆ ಬಂದ ಯಾವ ಸರ್ಕಾರಗಳೂ ಉಳಿಯುವುದಿಲ್ಲ. ಜನರ ಬದುಕು ಮತ್ತು ಪರಿಸರ ಹಾಳು ಮಾಡುವ ನಿಮ್ಮ ಯೋಜನೆಗಳಿಗೆ ನಮ್ಮ ಧಿಕ್ಕಾರವಿದೆ ಎಂದು ಗುಡುಗಿದರು.