ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಸುರಕ್ಷಿತವಾಗಿದ್ದಾರೆ: ಸಹೋದರನ ಹೇಳಿಕೆ

Most read

ಬೆಂಗಳೂರು: ತೂಗುದೀಪ ಕಂಬೈನ್ಸ್‌ ಸಂಸ್ಥೆಯ ಮಾಜಿ ಮ್ಯಾನೇಜರ್‌, ನಿರ್ಮಾಪಕ-ವಿತರಕ ಮಲ್ಲಿಕಾರ್ಜುನ್‌ ಸುರಕ್ಷಿತವಾಗಿದ್ದಾರೆ ಎಂದು ಅವರ ಸಹೋದರ ಬಿ.ಬಿ.ಸಂಕನಗೌಡರ್‌ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಬಂಧನವಾದ ನಂತರ, ಆರು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವಾಗಿರುವ ಮಲ್ಲಿಕಾರ್ಜುನ್‌ ಸಂಕನಗೌಡರ್‌  ಎಲ್ಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಮಲ್ಲಿಕಾರ್ಜುನ್‌ ಕೂಡ ಕೊಲೆಯಾಗಿರಬಹುದೇ ಎಂದು ಕೆಲವು ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿದ್ದವು.

ಯಶ್‌ ಅಭಿನಯದ ʻಮೊದಲ ಸಲʼ ಚಿತ್ರದ ಸಹನಿರ್ಮಾಪಕರಾಗಿದ್ದ ಮಲ್ಲಿಕಾರ್ಜುನ್‌ ನಂತರ ದರ್ಶನ್‌ ಸಂಸ್ಥೆಯಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದರ್ಶನ್‌ ಮತ್ತು ದಿನಕರ್‌ ಅವರ ಹಣಕಾಸಿನ ವ್ಯವಹಾರಗಳನ್ನು ಅವರೇ ನೋಡಿಕೊಳ್ಳುತ್ತಿದ್ದರು.

ನಂತರ ಅರ್ಜುನ್‌ ಸರ್ಜಾ ನಿರ್ಮಾಣದ ಪ್ರೇಮಬರಹ ಚಿತ್ರದ ವಿತರಣೆಯಿಂದ ಬಂದ ಹಣವನ್ನು ಮಲ್ಲಿಕಾರ್ಜುನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಮಲ್ಲಿಕಾರ್ಜುನ್‌ ಮತ್ತು ದರ್ಶನ್‌ ಕುಟುಂಬದ ನಡುವೆ ವಿರಸ ಮೂಡಿತ್ತು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ್‌ ಆಶ್ಚರ್ಯಕರ ರೀತಿಯಲ್ಲಿ ನಾಪತ್ತೆಯಾಗಿದ್ದರು. ಸುಮಾರು ಹತ್ತು ಕೋಟಿ ರುಪಾಯಿಗಳ ಸಾಲ ಇದ್ದಿದ್ದರಿಂದ ಮಲ್ಲಿಕಾರ್ಜುನ್‌ ರಾಜ್ಯವನ್ನೇ ಬಿಟ್ಟುಹೋಗಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಮಲ್ಲಿಕಾರ್ಜುನ್‌ ಅವರನ್ನು ಕ್ಷಮಿಸಿ ದರ್ಶನ್‌ ಅವರೇ ಅವರ ಸಾಲವನ್ನು ತೀರಿಸಿ ವಾಪಾಸ್‌ ಕರೆಸುತ್ತಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವಾದ ನಂತರ ದರ್ಶನ್‌ ಮತ್ತು ಅವರ ತಂಡ ಇದೇ ಥರದ ಘಟನೆಗಳನ್ನು ಹಿಂದೆಯೂ ಮಾಡಿರಬಹುದೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್‌ ನಾಪತ್ತೆ ಪ್ರಕರಣ ಮುನ್ನೆಲೆಗೆ ಬಂದಿತ್ತು. ಇದೀಗ ಅವರ ಸಹೋದರ ಬಿ.ಬಿ.ಸಂಕನಗೌಡರ್‌ ಹೇಳಿಕೆ ನೀಡಿ ಮಲ್ಲಿಕಾರ್ಜುನ್‌ ಸುರಕ್ಷಿತವಾಗಿ ಇದ್ದಾರೆ. ದರ್ಶನ್‌ ಅವರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.

More articles

Latest article