ನವದೆಹಲಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿ ದೆಹಲಿಯಲ್ಲಿ ತಬ್ಲಿಗ್ ಧಾರ್ಮಿಕ ಸಭೆ ಆಯೋಜಿಸಿ, ಮುಸ್ಲಿಂ ಧಾರ್ಮಿಕ ನಾಯಕರಿಗೆ ಆಶ್ರಯ ನೀಡಲಾಗಿದೆ ಎಂದು ಆರೋಪಿಸಿ 70 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ದೆಹಲಿ ಹೈಕೋರ್ಟ್ ಕೈಬಿಟ್ಟಿದೆ.
ಸುನ್ನಿ ಧಾರ್ಮಿಕ ಕಾರ್ಯಕ್ರಮವಾದ ತಬ್ಲಿಗ್ ಜಮಾತ್ ನ ವಿದೇಶಿ ಅತಿಥಿಗಳಿಗೆ ಆಶ್ರಯ ನೀಡಿದ ಆರೋಪದಡಿ 70 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಾರ್ಯಕ್ರಮ ಆಯೋಜನೆಗೊಂಡಿದ್ದ ಸಂದರ್ಭದಲ್ಲಿ ಕೋವಿಡ್–19ಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿಯಲ್ಲಿತ್ತು.
2020ರ ಮಾರ್ಚ್ನಲ್ಲಿ ದೆಹಲಿಯಲ್ಲಿ ತಬ್ಲಿಗ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ದೇಶವಿದೇಶಗಳ ಮುಸ್ಲಿಂ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ಧರ್ಮಪ್ರಚಾರಕರು ಒಂದು ಕಡೆ ಸೇರಿದ ಕಾರಣ ಮತ್ತು ಆನಂತರ ಅವರು ದೇಶದ ವಿವಿಧ ಭಾಗಗಳಲ್ಲಿ ಸಾರ್ವಜನಿಕರ ಸಂಪರ್ಕ ಹೊಂದಿದ ಕಾರಣದಿಂದ ಕೊರಾನಾ ವೈರಾಣು ಸೋಂಕು ದುಪ್ಪಟ್ಟಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು. ಪ್ರಕರಣದ ಎಫ್ ಐ ಆರ್ ರದ್ದು ಕೋರಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ನೀನಾ ಬನ್ಸಲ್ ಕೃಷ್ಣ ಅವರು, ಆಯೋಜಕರು ಅಥವಾ ಭಾಗವಹಿಸಿದ್ದವರಿಗೆ ಕೋವಿಡ್–19 ದೃಢಪಟ್ಟ ಬಗ್ಗೆ ಅಥವಾ ಅಜಾಗರೂಕತೆಯಿಂದ ಸಮಾವೇಶ ಆಯೋಜಿಸಿದ್ದರ ಕುರಿತಾಗಲೀ ಅಥವಾ ಕಾನೂನು ಉಲ್ಲಂಘಿಸಿದ್ದರ ಬಗ್ಗೆಯಾಗಲೀ ಅಥವಾ ಕೋವಿಡ್–19 ಹರಡುವ ಉದ್ದೇಶದಿಂದಲೇ ಸಮಾವೇಶ ಆಯೋಜಿಸಿದ್ದರ ಕುರಿತು ಸಣ್ಣ ಅಂಶವೂ ಎಫ್ಐಆರ್ ಅಥವಾ ಆರೋಪಪಟ್ಟಿಯಲ್ಲಿ ಇಲ್ಲ ಎಂಬುದನ್ನು ಎತ್ತಿ ತೋರಿಸಿದ್ದಾರೆ.
ಈ ದೂರು ಕುರಿತು ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾ. ನೀನಾ ಅವರು ಇಲ್ಲಿ ನ್ಯಾಯದ ಹಿತಾಸಕ್ತಿಗಿಂತ, ಇಡೀ ಪ್ರಕ್ರಿಯೆಯನ್ನು ದೂಷಿಸುವ ಉದ್ದೇಶವೇ ಮುಖ್ಯವಾಗಿರುವುದು ಕಂಡುಬರುತ್ತದೆ. ಹೀಗಾಗಿ ಈ ಪ್ರಕರಣವನ್ನು ಕೈಬಿಡಲಾಗಿದೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದವರ ಕೋವಿಡ್ ಪರೀಕ್ಷೆಯನ್ನು 2020ರ ಏ. 3ರಂದು ನಡೆಸಲಾಗಿತ್ತು. ಅವರಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ವೈದ್ಯಕೀಯ ನಿಗಾದಲ್ಲಿ ಇವರನ್ನು ಐಸೊಲೇಷನ್ ನಲ್ಲಿ ಇಡಲಾಗಿತ್ತು ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ಎಫ್ ಐ ಆರ್ ರದ್ದುಗೊಳಿಸಲು ದೆಹಲಿ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ಸೆಕ್ಷನ್ 144ರ ಅಡಿಯಲ್ಲಿ ಆರೋಪಿಗಳು ಕಾನೂನು ಬಾಹಿರವಾಗಿ ಜಮಾವಣೆಗೊಂಡಿದ್ದರು ಎಂದು ತೋರಿಸುವ ಯಾವುದೇ ಸಾಕ್ಷಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ ಎಂದು ನ್ಯಾಯಾಲಯ ಹೇಳಿ ಪ್ರಕರಣವನ್ನು ಕೈಬಿಟ್ಟಿತು.