ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಂತೆ ಕೋಮು ಹಿಂಸೆ ನಿಗ್ರಹಕ್ಕಾಗಿ ರಚನೆಯಾಗಿರುವ ವಿಶೇಷ ಕಾರ್ಯಪಡೆಯನ್ನು (ಎಸ್ ಎಎ ಫ್) ಅಗತ್ಯ ಬಂದಲ್ಲಿ ರಾಜ್ಯಕ್ಕೂ ವಿಸ್ತರಣೆ ಮಾಡಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ. ಅವರು ಇಂದು ಮಂಗಳೂರಿನಲ್ಲಿ ಎಸ್ ಎ ಎಫ್ ಕಚೇರಿ ಹಾಗೂ ಪೊಲೀಸ್ ವಸತಿಗೃಹಗಳ ಸಮುಚ್ಚಯ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಇಂತಹ ಪ್ರಮುಖ ಕಾರ್ಯಪಡೆಯನ್ನು ರಚನೆ ಮಾಡಿದೆ. ದ್ವೇಷ ಭಾಷಣ, ಕೋಮು ಸಂಘರ್ಷ ಸೃಷ್ಟಿಸುವವರನ್ನು ಹತ್ತಿಕ್ಕುವ ದಿಸೆಯಲ್ಲಿ ಈ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ. ಶೈಕ್ಷಣಿಕ ವಾಗಿ, ಸಾಮಾಜಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾಗಿದೆ. ಈ ನೆಲ ಮತ್ತೆ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಬೇಕಾಗಿದೆ ಎಂದು ಹೇಳಿದರು.
ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಈ ಕಾರ್ಯಪಡೆಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಅಗತ್ಯ ಬಂದಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಇಲ್ಲಿನ ನಾಗರೀಕರು ಸಹಕಾರ ನೀಡಿದರೆ ಈ ಕಾರ್ಯಪಡೆಗೆ ಕೆಲಸವೇ ಇರುವುದಿಲ್ಲ. ಬೇರೆ ಜಿಲ್ಲೆಗೆ ಇಂತಹ ಕಾರ್ಯಪಡೆಯ ಅಗತ್ಯ ಬರಲಾರದು ಎಂದು ಭಾವಿಸಿದ್ದೇವೆ. ಒಟ್ಟಿನಲ್ಲಿ ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಹೇಳಿದರು.
ನಾನು ಹಿಂದೆ ಗೃಹ ಸಚಿವನಾಗಿದ್ದಾಗ ಬೆಂಗಳೂರಿನ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿದ್ದಾಗ ಚಿಕ್ಕ ಚಿಕ್ಕ ಮನೆಗಳಲ್ಲಿ ಪೊಲೀಸರು ವಾಸಿಸುವ ಸ್ಥಿತಿ ನೋವುಂಟಾಗಿತ್ತು. ರಾಜ್ಯಾದ್ಯಂತ ಪೊಲೀಸರಿಗೆ ಸುಸಜ್ಜಿತ ವಸತಿಗೃಹ ನಿರ್ಮಾಣ ಮಾಡಬೇಕು ಎಂದು ಅಂದೇ ಯೋಚಿಸಿದ್ದೆ. ಈ ಯೋಜನೆಗೆ ಅನುದಾನವೂ ಸರ್ಕಾರದಿಂದ ದೊರೆಯಿತು. ಮಂಗಳೂರು ನಗರ ಹಾಗೂ ಬೆಳ್ತಂಗಡಿ ಪೊಲೀಸ್ ವಸತಿ ಗೃಹಗಳನ್ನು ಉದ್ಘಾಟಿಸಲಾಗಿದೆ. ಪ್ರತಿ ವಸತಿಗೃಹವನ್ನು ಅಂದಾಜು ರೂ. 28 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ಶೇ. 40 ಪೊಲೀಸ್ ಸಿಬ್ಬಂದಿ ವಸತಿಗೃಹಗಳಲ್ಲೇ ವಾಸಿಸುತ್ತಿದ್ದಾರೆ. ಈ ಪ್ರಮಾಣ ಶೇ 80 ಕ್ಕೆ ತಲುಪಬೇಕು ಎಂಬ ಗುರಿ ಹೊಂದಲಾಗಿದೆ ಎಂದು ಗೃಹ ಸಚಿವರು ಹೇಳಿದರು.
ರಾಜ್ಯದಲ್ಲಿ ಪೊಲೀಸ್ ಇಲಾಖೆ ಉತ್ತಮ ಕೆಲಸ ಮಾಡುತ್ತಿದ್ದು, ಶೇ. 99 ರಷ್ಟು ಕೊಲೆ ಪ್ರಕರಣಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಸೈಬರ್ ಅಪರಾಧ ಹೆಚ್ಚುತ್ತಿದ್ದು, ಪ್ರತಿ ಕಾನ್ ಸ್ಟೇಬಲ್ ಸೈಬರ್ ಅಪರಾಧ ಪತ್ತೆ ಹಚ್ಚುವಲ್ಲಿ ತಜ್ಞತೆ ಪಡೆಯಬೇಕೆಂಬ ಉದ್ದೇಶದಿಂದ ಎಲ್ಲ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ತರಬೇತಿ ವಿಭಾಗ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಶೈಕ್ಷಣಿಕ, ವಾಣಿಜ್ಯಿಕ ವಾಗಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕೋಮು ದ್ವೇಷವೇ ಕಫ್ಪುಚುಕ್ಕೆಯಾಗಿದೆ. ಇದನ್ನು ನಿಯಂತ್ರಿಸಲು ರಚನೆ ಮಾಡಿರುವ ಎಸ್ ಎ ಎಫ್ ಅನ್ನು ಶೇ 90ರಷ್ಟು ಜನರು ಸ್ವಾಗತಿಸಿದ್ದಾರೆ. ಶೇ 5 ರಷ್ಟು ಜನರಿಗೆ ಇದರಿಂದ ತೊಂದರೆ ಆಗಬಹುದು. ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಿ ಜನರು ಶಾಂತಿಯಿಂದ ನೆಲೆಸಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಖಾಕಿಗೆ ಖಾಕಿಯೇ ಧರ್ಮವಾಗಿದ್ದು, ಯಾರೇ ತಪ್ಪು ಮಾಡಿದರೂ ಪಕ್ಷಪಾತ ಇಲ್ಲದೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಎಲ್ಲ ಪಕ್ಷಗಳು, ಸಮುದಾಯಗಳು, ಶಿಕ್ಷಣ ತಜ್ಞರು, ಸಾಹಿತಿಗಳು ಎಲ್ಲರನ್ನೂ ಒಳಗೊಂಡು ಶಾಂತಿ ಸಭೆ ನಡೆಸಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವಾನ್ ಡಿಸೋಜ, ಶಾಸಕ ಅಶೋಕ ಕುಮಾರ್ ರೈ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ. ಎ.ಸಲೀಂ, ಐಜಿಪಿ ಅಮಿತ್ ಸಿಂಗ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕಾರ್ಯಪಡೆ ಮುಖ್ಯಸ್ಥರಾಗಿರುವ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಮಾರಮಭದಲ್ಲಿ ಉಪಸ್ಥಿತರಿದ್ದರು.