ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಸಮೀಪ ಜಂಗ್ಲಿಗೆ ತೆರಳುವ ಮಾರ್ಗದಲ್ಲಿ ನಡೆದಿದ್ದ ಘರ್ಷಣೆಯಲ್ಲಿ ನಾಪತ್ತೆಯಾಗಿದ್ದ ಒಡಿಶಾದ ಬಿಬಾಶ್ ಎಂಬ ಪ್ರವಸಿಗನ ದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.
ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಇಸ್ರೇಲ್, ಅಮೆರಿಕ, ಒಡಿಶಾ, ಮಹಾರಾಷ್ಟ್ರ ಮತ್ತು ಸ್ಥಳೀಯ ಹೋಂ ಸ್ಪೇ ಮಹಿಳಾ ಮಾಲೀಕರೊಬ್ಬರು ಗಿಟಾರ್ ಬಾರಿಸುತ್ತ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದರು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಈಕೆಯ ಮೇಲೆ ಹಲ್ಲೆ ನಡೆಸಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ಸಂದರ್ಭದಲ್ಲಿ ದುಷ್ಕರ್ಮಿಗಳು ಒಡಿಶಾದ 26 ವರ್ಷದ ಬಿಬಾಶ್ ಅವರನ್ನು ಕಾಲುವೆಯಲ್ಲಿ ಬೀಸಾಡಿ ನಾಪತ್ತೆಯಾಗಿದ್ದರು. ಶುಕ್ರವಾರ ಬೆಳಿಗ್ಗೆಯಿಂದಲೇ ಅವರ ಪತ್ತೆಗೆ ಶೋಧ ಕಾರ್ಯ ನಡೆದಿತ್ತು. ಮಲ್ಲಾಪುರ ಗ್ರಾಮದ ಪವರ್ ಹೌಸ್ ಗೇಟ್ ಬಳಿ ಮೃತದೇಹ ಪತ್ತೆಯಾಗಿದೆ.
ಆರೋಪಿಗಳ ಪತ್ತೆಗೆ ಆರು ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘರ್ಷಣೆಯಲ್ಲಿ ಗಾಯಗೊಂಡಿರುವ ಮಹಾರಾಷ್ಟ್ರದ ನಾಸಿಕ್ನ ಪಂಕಜ್ ಅವರ ಸಹೋದರ ಇಲ್ಲಿಗೆ ಬಂದಿದ್ದಾರೆ. ಮೃತಪಟ್ಟ ಬಿಬಾಶ್ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಇಸ್ರೇಲ್ ಮತ್ತು ಸ್ಥಳೀಯ ಮಹಿಳೆಯರ ವೈದ್ಯಕೀಯ ಪರೀಕ್ಷೆ ಮಾಡಿದ್ದು ವರದಿ ಬರಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ತಿಳಿಸಿದ್ದಾರೆ.