ಬೆಂಗಳೂರು: ಚಿತ್ರನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಾ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟಿ ರಮ್ಯಾ ದೂರು ನೀಡಿದ್ದಾರೆ.
ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಲಿಖಿತ ದೂರು ಸಲ್ಲಿಸಿರುವ ರಮ್ಯಾ ಅವರು, ನಾಲ್ಕು ಪುಟಗಳ ಲಿಖಿತ ದೂರು ಸಲ್ಲಿಸಿದರು. ಜತೆಗೆ 43 ಖಾತೆಗಳನ್ನು ಉಲ್ಲೇಖಿಸಿ ದೂರು ನೀಡಿ ಕ್ರಮಕ್ಕೆ ಕೋರಿದರು. ದೂರನ್ನು ಸ್ವೀಕರಿಸಲಾಗಿದ್ದು, ದೂರಿನ ಪ್ರತಿಯನ್ನು ಸೈಬರ್ ಠಾಣೆಗೆ ವರ್ಗಾವಣೆ ಮಾಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅಭಿಮಾನಿಗಳ ಅವಹೇಳನಕಾರಿ ಸಂದೇಶಗಳನ್ನು ಕಂಡ ರಮ್ಯಾ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ದೇ ಸಾಮಾಜಿಕ ಜಾಲತಾಣಗಳ್ಲಲಿ ಆಕ್ರೋಶ ಹೊರಹಾಕಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ‘ತಮ್ಮ ಮಾತಿನಿಂದಲೇ ಓರ್ವ ಮೂರ್ಖ ಗುರುತಿಸಿಕೊಳ್ಳುತ್ತಾನೆ. ಬುದ್ಧಿವಂತನೊಬ್ಬ ತನ್ನ ಮೌನದಿಂದಲೇ ಗುರುತಿಸಿಕೊಳ್ಳುತ್ತಾನೆ’ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರೂ ಇನ್ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ.