ಚಾಮರಾಜನಗರ: ಚಾಮರಾಜನಗರ ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬೇಡಗುಳಿ ವಲಯದಲ್ಲಿ ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದು, ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಮಹಿಳೆಯನ್ನು ಬೇಡಗುಳಿ ಹಾಡಿಯ ರಂಗಮ್ಮ ಹಾಗೂ ಗಾಯಗೊಂಡ ಯುವಕನನ್ನು ರಾಮಯ್ಯನ ಪೋಡಿಯ ರವಿ ಎಂದು ಗುರುತಿಸಲಾಗಿದೆ.
ಇಂದು ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿದ್ದ ರಂಗಮ್ಮ ಅವರ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಸೋಮವಾರ ರಾತ್ರಿ ರವಿ ತನ್ನ ಹಾಡಿಗೆ ಮರಳುವಾಗ ಹುಲಿ ದಾಳಿ ಮಾಡಿದ್ದು ಅವರ ಕಿರುಚಾಟ ಕೇಳಿ ನೆರವಿಗೆ ಧಾವಿಸಿದ ಸ್ಥಳೀಯರು ಹುಲಿಯನ್ನು ಓಡಿಸಿದ್ದಾರೆ. ರವಿ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪನೀಡಲಾಗುತ್ತಿದೆ.
ರಂಗಮ್ಮ ಹಾಗೂ ರವಿ ಮೇಲೆ ದಾಳಿ ನಡೆಸಿರುವ ಹುಲಿ ಒಂದೇ ಆಗಿದ್ದು ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲಾಗಿದೆ ಎಂದು ಬಿ ಆರ್ ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ಶ್ರೀಪತಿ ತಿಳಿಸಿದ್ದಾರೆ.