ಕೇಂದ್ರ ತೆರಿಗೆ ಆಯುಕ್ತಾಲಯಕ್ಕೆ ನೇಮಿಸಲಾಗಿರುವ ಪರ ಭಾಷಿಕರ ನೇಮಕ ತಡೆಹಿಡಿಯಲು ಅಗ್ರಹ

Most read

ಬೆಂಗಳೂರು: ಬೆಂಗಳೂರು ವಲಯದ ಕೇಂದ್ರ ತೆರಿಗೆ ಆಯುಕ್ತಾಲಯಕ್ಕೆ ಇತ್ತೀಚೆಗೆ 137 ಹವಾಲ್ದಾರರು, ಸಹಾಯಕರು ಹಾಗೂ ತೆರಿಗೆ ಸಹಾಯಕರುಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಕನ್ನಡಿಗರ ಸೇವೆ ಮಾಡಬೇಕಾದ ಈ ಎಲ್ಲ ನೌಕರರು ಅನ್ಯ ಭಾಷಿಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಅನಾವಶ್ಯಕ ಭಾಷಾ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ ಕೂಡಲೇ ಈ ನೇಮಕಾತಿಯನ್ನು ತಡೆ ಹಿಡಿದು ಸ್ಥಳೀಯರಿಗೆ ಪ್ರಾತಿನಿಧ್ಯವನ್ನು ಕಲ್ಪಿಸುವ ನೇಮಕಾತಿಗೆ ಮುಂದಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕೇಂದ್ರ ಸರ್ಕಾರವನ್ನು ಆಗ್ರಹ ಪಡಿಸಿದ್ದಾರೆ.

ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಈ ರೀತಿಯ ಕೇಂದ್ರದ ತೀರ್ಮಾನಗಳು ಸ್ಥಳೀಯರಲ್ಲಿ ಅನಾವಶ್ಯಕ ಆಕ್ರೋಶವನ್ನು ಉಂಟು ಮಾಡುತ್ತವೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾವನೆಗಳನ್ನು ಗೌರವಿಸುವುದು ಯಾವುದೇ ಸರ್ಕಾರದ ಕರ್ತವ್ಯವಾಗಿದ್ದು, ಸಾಂವಿಧಾನಿಕ ಆಶಯಗಳು ಸಾಕಾರಗೊಳ್ಳಬೇಕಾದರೆ ಕೇಂದ್ರ ಸರ್ಕಾರವು ಇಂತಹ ಕ್ರಮಗಳನ್ನು ಪ್ರೋತ್ಸಾಹಿಸಬಾರದೆಂದು ಹೇಳಿದ್ದಾರೆ.

ವಿತ್ತ ಸಚಿವರ ಸ್ಥಳೀಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕೆಂಬ ಈ ಹಿಂದಿನ ಕರೆಯನ್ನು ಸ್ಮರಿಸಿರುವ ಬಿಳಿಮಲೆ, ತಮ್ಮ ಉದ್ದೇಶವು ಈ ನೇಮಕಾತಿಯಲ್ಲಿಯೂ ಈಡೇರಿರುವುದಿಲ್ಲವೆನ್ನುವ ಅಂಶವನ್ನು ನಿರ್ಮಲಾ ಸೀತಾರಾಮನ್‌ ಅವರಿಗೆ ನೆನಪಿಸಿದ್ದಾರೆ.

More articles

Latest article