ಜಾತಿಗಣತಿ ಸಮೀಕ್ಷೆ: ಅವಧಿ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಚಿವ ಎಚ್.ಆಂಜನೇಯ

Most read

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಬಾರದು ಎಂದು ಕಾಂಗ್ರೆಸ್‌ ಮುಖಂಡ ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದ್ದಾರೆ. ಜಾತಿಗಣತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಿಸಲು ಮಹದೇವಪುರ ವಿಧಾನಸಭಾ ಕ್ಷೇತ್ರದ ಹೂಡಿ ವ್ಯಾಪ್ತಿಯ ಪರಿಶಿಷ್ಟರ ವಾಸದ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಆರಂಭದಲ್ಲಿ ಈ ಕಾರ್ಯ ಆಮೆ ನಡಿಗೆಯಲ್ಲಿ ಆರಂಭಗೊಂಡಿದ್ದು, ಈಗ ಅತ್ಯಂತ ಚುರುಕು ಪಡೆದುಕೊಂಡಿದೆ. ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗವು ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ ಜೂ.22 ಅಂತಿಮ ದಿನ ಆಗಬೇಕು. ಮತ್ತೊಮ್ಮೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಬಾರದು ಎಂದು ಒತ್ತಾಯಿಸಿದರು.

ಈ ವೇಳೆ ಜಾತಿಗಣತಿ ಸರ್ವೇ ವೇಳೆ ನೊಂದಾಯಿಸಿದ್ದರ ಬಳಿ ನೀವು ಏನೆಂದು ಬರೆಯಿಸಿದ್ದೀರಾ ಎಂದು ಆಂಜನೇಯ ಪ್ರಶ್ನೀಸಿದರು. ಜಾತಿ ಆದಿಕರ್ನಾಟಕ, ಮೂಲ ಜಾತಿ ಮಾದಿಗ 061 ಎಂದು ಬರೆಯಿಸಿದ್ದೇವೆ ಎಂದು ಹೇಳಿದರು.

ಅದೇ ರೀತಿ ಅನೇಕ ಮನೆಗಳಿಗೆ ಭೇಟಿ ನೀಡಿ, ನೀವುಗಳು ತಕ್ಷಣ ಸರ್ವೇ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಜಾತಿ ಹೇಳಿಕೊಳ್ಳಲು ಹಿಂಜರಿಕೆ ಬೇಡ. ಇದು ಮೀಸಲಾತಿ ಪಡೆಯಲು ಇರುವ ಏಕೈಕ ಮಾರ್ಗ. ಕೀಳರಿಮೆ ತೊರೆಯದಿದ್ದರೆ ನಿಮಗೆ ಮೀಸಲಾತಿ ಸೌಲಭ್ಯ ದೊರೆಯುವುದಿಲ್ಲ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮೂಲ ಜಾತಿ ಮಾದಿಗ 061 ಎಂದು ಬರೆಯಿಸುವ ಮೂಲಕ ಒಳಮೀಸಲಾತಿಯಲ್ಲಿ ಹೆಚ್ಚು ಪಾಲು ಪಡೆಯಲು ಮುಂದಾಗಬೇಕು ಎಂದು ಆಂಜನೇಯ ಅವರು ತಿಳಿಸಿದರು.

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಮಾದಿಗರು ಸ್ವಾಭಿಮಾನದಿಂದ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ನಗರ ಪ್ರದೇಶ ಅದರಲ್ಲೂ ಬೆಂಗಳೂರಿನಲ್ಲಿ ಸಾಮಾಜಿಕ ಕಾರಣಕ್ಕೆ ಜಾತಿ ಹೇಳಿಕೊಳ್ಳಲು ಹಿಂಜರಿದಿದ್ದು, ಸಮೀಕ್ಷೆ ಕಾರ್ಯಕ್ಕೆ ತೀವ್ರ ಹಿನ್ನಡೆ ಆಗಿದೆ. ಈ ಸತ್ಯ ಅರಿತು ಸರ್ಕಾರ ಮತ್ತು ಆಯೋಗ ಮೂರು ಬಾರಿ ಸವೇ ಕಾರ್ಯ ದಿನಾಂಕವನ್ನು ವಿಸ್ತರಿಸಿದೆ. ಇದೇ ಅಂತಿಮ ಅವಕಾಶ, ಮತ್ತೊಮ್ಮೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದರು.

ಆದ್ದರಿಂAದ ಸಮುದಾಯದ ಚಿಂತಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ನೌಕರರು ಸಮಾಜದ ಋಣ ತೀರಿಸಲು ಜೊತೆಗೆ ನಮ್ಮಗಳ ಭವಿಷ್ಯ ಉಜ್ವಲಕ್ಕಾಗಿ ಸಮೀಕ್ಷೆ ಕಾರ್ಯ ಕುರಿತು ಎಸ್ಸಿ ಕಾಲೋನಿ ಜೊತೆಗೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕು. ಜೊತೆಗೆ ಸಮೀಕ್ಷೆದಾರರ ಜೊತೆಗೆ ಮನೆ ಮನೆಗೆ ಹೋಗಿ ಮಾದಿಗ 061 ಎಂದು ಬರೆಯಿಸಲು ಬದ್ಧತೆ ಪ್ರದರ್ಶಿಸಬೇಕು. ಈ ಮೂಲಕ ಯಾರೊಬ್ಬರೂ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು ಎಂದರು.

ಈಗಾಗಲೇ ರಾಜ್ಯಾದ್ಯಂತ ಸುತ್ತಾಟ ನಡೆಸಿ ಜಾಗೃತಿ ಮೂಡಿಸಿದ್ದೇನೆ. ಜನರು ಹೆಚ್ಚು ಜಾಗೃತಗೊಂಡಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲೂ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘಟನೆಗಳ ಮುಖಂಡರು, ಚಿಂತಕರು, ನೌಕರರ ಜವಾಬ್ದಾರಿ ಹೆಚ್ಚು ಇದೆ ಎಂದು ಹೇಳಿದರು.

ಜೂ.22ರ ಬಳಿಕ ಗಡುವ ವಿಸ್ತರಣೆ ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಆಯೋಗಕ್ಕೆ ಮನವಿ ಮಾಡುತ್ತೇವೆ. ಈಗಾಗಲೇ ಬಹಳಷ್ಟು ಅವಕಾಶ ನೀಡಲಾಗಿದೆ. ಈಗ ಏನಿದ್ದರೂ ಸಮೀಕ್ಷೆ ಅವಧಿ ಮುಗಿಯುತ್ತಿದ್ದಂತೆ ಏಳೆಂಟು ದಿನಗಳಲ್ಲಿ ಪರಿಶಿಷ್ಟರಲ್ಲಿ ಯಾವ್ಯಾವ ಸಮುದಾಯ ಭೂಮಿ, ಮನೆ, ಸರ್ಕಾರಿ ನೌಕರಿ, ಶಿಕ್ಷಣ, ಆರ್ಥಿಕ ಪರಿಸ್ಥಿತಿಯ ದತ್ತಾಂಶ ಒಳಗೊಂಡ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಜೊತೆಗೆ ಅತ್ಯಂತ ಹಿಂದುಳಿದ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದರು. ಸದಾಶಿವ ಆಯೋಗದ ವರದಿಯಲ್ಲಿ ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ನೀಡಲಾಗಿತ್ತು. ನಾಗಮೋಹನ್ ದಾಸ್ ಆಯೋಗವೂ ದತ್ತಾಂಶದ ಆಧಾರಡಿ ಇನ್ನಷ್ಟು ಹೆಚ್ಚು ಮೀಸಲಾತಿ ನೀಡುವ ವಿಶ್ವಾಸ ಇದೆ ಎಂದು ಹೇಳಿದರು.

ರಾಮಚಂದ್ರ ಚಿನ್ನಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿ.ವಿಕ್ರಮ್, ಕೃಷ್ಣಮೂರ್ತಿ, ನಾಗರಾಜ್, ಮಂಜುನಾಥ್, ಬಸವರಾಜ್, ಸತೀಶ್, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡ ಕೇಶವಮೂರ್ತಿ, ಮಾದಿಗ ದಂಡೋರ ಸಮಿತಿಯ ಮುಖಂಡ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

More articles

Latest article