ನವದೆಹಲಿ: ಮನೆಯಲ್ಲಿ ನಗದು ಪತ್ತೆಯಾದ ಪ್ರಕರಣದಲ್ಲಿ ತನ್ನನ್ನು ದೋಷಿ ಎಂದು ಪರಿಗಣಿಸಿರುವ ಆಂತರಿಕ ತನಿಖಾ ಸಮಿತಿ ನೀಡಿದ ವರದಿಯನ್ನು ಅಮಾನ್ಯ ಮಾಡಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ಯಶವಂತ ವರ್ಮಾ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಅಲ್ಲದೆ ತಮ್ಮನ್ನು ವಾಗ್ದಂಡನೆ ಗುರಿಪಡಿಸಬೇಕು ಎಂದು ಮೇ 8 ರಂದು ಮುಖ್ಯ ನ್ಯಾಯಮೂರ್ತಿಗಳು ಸಂಸತ್ ಗೆ ಶಿಫಾರಸು ಮಾಡಿದ್ದನ್ನು ರದ್ದು ಮಾಡಬೇಕೆಂದೂ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಪ್ರಕರಣವನ್ನು ಕುರಿತು ಸಿಜೆಐ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಹಾಗೂ ಜಾಯ್ ಮಲ್ಯ ಬಾಗ್ಚಿ ಅವರಿದ್ದ ಪೀಠ ವಿಚಾರಣೆ ನಡೆಸಿತು.
ವರ್ಮಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ವಾಗ್ದಂಡನೆಗೆ ಗುರಿಯಾಗಿಸಬೇಕು ಎನ್ನುವ ಶಿಫಾರಸ್ಸಿನ ಬಗ್ಗೆ ನಾವು ಕೆಲವೊಂದು ಸಂವಿಧಾನಿಕ ವಿಷಯಗಳನ್ನು ಎತ್ತಿದ್ದೇವೆ. ಹೀಗಾಗಿ ಇದನ್ನು ಶೀಘ್ರವೇ ವಿಚಾರಣೆಗೆ ಪಟ್ಟಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ನಾನೂ ಆ ಪ್ರಕ್ರಿಯೆ ಭಾಗವಾಗಿದ್ದರಿಂದ ನಾನು ಈ ಪ್ರಕಣದ ವಿಚಾರಣೆ ನಡೆಸುವುದು ಸರಿಯಾಗುವುದಿಲ್ಲ. ಈ ಬಗ್ಗೆ ನಿರ್ಧರಿಸಿ, ಹೊಸ ಪೀಠ ರಚನೆ ಮಾಡುತ್ತೇವೆ ಎಂದು ಸಿಜೆಐ ತಿಳಿಸಿದರು.