ಬಜೆಟ್‌ ಚರ್ಚೆಗೆ ಉತ್ತರ: ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಬಜೆಟ್;‌ ಸಿಎಂ ಸಿದ್ದರಾಮಯ್ಯ

Most read

1.​ಬಜೆಟ್ ಮೇಲಿನ ವಿರೋಧ ಪಕ್ಷದವರ ಮಾತುಗಳನ್ನು ಕೇಳಿದ್ದೇನೆ ಮತ್ತು ಓದಿದ್ದೇನೆ. ಅನೇಕರು ಬಜೆಟ್ಟನ್ನು ಅಧ್ಯಯನ ಮಾಡಲು ಪ್ರಯತ್ನಿಸಿದ್ದಾರೆ. ಒಳ್ಳೆಯ ಪ್ರಯತ್ನ ಮಾಡಿದ್ದಾರೆ, ಅವರೆಲ್ಲರನ್ನೂ ಅಭಿನಂದಿಸುತ್ತೇನೆ.

2.​ಸದನದಲ್ಲಿ ನಾನು ಗಮನಿಸಿದ ಹಾಗೆ 4-5 ವಿಚಾರಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಚರ್ಚಿಸಲಾಗಿದೆ. ಮುಖ್ಯವಾಗಿ, 1) ರಾಜ್ಯದ ಸಾಲ ಹಾಗೂ ಆರ್ಥಿಕ ಪರಿಸ್ಥಿತಿ 2) ಗ್ಯಾರಂಟಿ ಯೋಜನೆಗಳು 3) ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ವಿಚಾರ 4) ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ 5) ಕ್ಷೇತ್ರಗಳಿಗೆ ಅಭಿವೃದ್ಧಿ ಅನುದಾನ ಹಾಗೂ ಪ್ರದೇಶವಾರು ಅಭಿವೃದ್ಧಿ ಕುರಿತಂತೆ ಚರ್ಚಿಸಲಾಗಿದೆ.  ನಾನು  ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ಕೊಡುವಾಗ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನಗಳು, ಗ್ಯಾರಂಟಿ ಯೋಜನೆಗಳು  ಮುಂತಾದ ವಿಚಾರಗಳ ಕುರಿತು ದೀರ್ಘವಾಗಿ ಉತ್ತರ ಕೊಟ್ಟಿದ್ದೇನೆ. ಹಾಗಾಗಿ ಅವುಗಳಿಗೆ ಕಡಿಮೆ ಸಮಯ ಮೀಸಲಿಟ್ಟು ಉಳಿದ ವಿಚಾರಗಳಿಗೆ ತುಸು ಹೆಚ್ಚು ಸಮಯ ಕೊಟ್ಟು ಇಂದು ಉತ್ತರ ನೀಡಲಿದ್ದೇನೆ.

3.​ನಮ್ಮ ಬಜೆಟ್ ಬಗ್ಗೆ ವಿರೋಧ ಪಕ್ಷದವರು ಏನಂದರು?  ಆಡಳಿತ ಪಕ್ಷದವರು ಏನಂದರು ಹಾಗೂ ಉಳಿದೆಲ್ಲ ಜನಪ್ರತಿನಿಧಿಗಳ ಪ್ರತಿಕ್ರಿಯೆ ಹೇಗಿತ್ತು ಎನ್ನುವುದು ಒಂದು ಆಯಾಮ. ಅದಕ್ಕೆ ಈ ಸದನ ಸಾಕ್ಷಿಯಾಗಿದೆ.  ಸದನದ ದಾಖಲೆಗಳಲ್ಲಿದೆ.

4.​ನಾನು ಪದೆ ಪದೇ ಹೇಳುವಂತೆ “ನಾವು ಜನರ ತೆರಿಗೆ ಹಣಕ್ಕೆ ಟ್ರಸ್ಟಿಗಳೆ ಹೊರತು, ಮಾಲೀಕರಲ್ಲ.” ನಾವು ಜನರ ತೆರಿಗೆ ಹಣವನ್ನು ನ್ಯಾಯಯುತ ರೀತಿಯಲ್ಲಿ ನಾಡಿನ ಅಭಿವೃದ್ಧಿಗೆ ವಿನಿಯೋಗಿಸಲು ಬದ್ಧವಾಗಿದ್ದೇವೆ.

5.​ಬಲಿಷ್ಠವಾದವು ಮಾತ್ರ ಬದುಕುತ್ತವೆ ಎನ್ನುವುದು ಡಾರ್ವಿನ್ ಸಿದ್ಧಾಂತ. ಅದಕ್ಕೆ ವಿರುದ್ಧವಾಗಿ ಸಂವಿಧಾನವು ಅಸಹಾಯಕರಿಗೆ, ದುರ್ಬಲ ವರ್ಗಗಳಿಗೆ ಶಕ್ತಿ ತುಂಬಿ, ಸಮಾಜವನ್ನು ಸಮಗ್ರ ರೀತಿಯಲ್ಲಿ ಹಾಗೂ ಮಾನವೀಯ ನೆಲೆಯಲ್ಲಿ ಮುನ್ನಡೆಸಬೇಕು ಎನ್ನುವ ಕಾಳಜಿಯಿಂದ ನಾವು ಈ ಬಜೆಟ್ಟನ್ನು ರೂಪಿಸಿದ್ದೇವೆ. ಹಾಗಾಗಿಯೇ, ನಾಡಿನ ವಿದ್ವಾಂಸರು, ಪರಿಣಿತರು, ಸಾಮಾನ್ಯ ಜನರು, ಮಾಧ್ಯಮಗಳು ನಮ್ಮ ಬಜೆಟ್ ಕುರಿತು ವ್ಯಾಪಕ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ಆಯವ್ಯಯ ಗಾತ್ರದ ಹೆಚ್ಚಳ:

6. ​2025-26ನೇ ಸಾಲಿನಲ್ಲಿ 4,09,549 ಕೋಟಿ ರೂ. ಗಾತ್ರದ ಬಜೆಟ್ಟನ್ನು ನಾನು ಮಂಡಿಸಿದ್ದೇನೆ.       2024-25ನೇ ಸಾಲಿನ ಆಯವ್ಯಯಕ್ಕೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ನಮ್ಮ ರಾಜ್ಯದ ಬಜೆಟ್ ಗಾತ್ರ ಶೇ.10.3 ರಷ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ. ಜನಸಂಖ್ಯೆಯ ಗಾತ್ರದಲ್ಲಿ ಕರ್ನಾಟಕವು 8ನೇ ಸ್ಥಾನದಲ್ಲಿದೆ. ತೆರಿಗೆ ಸಂಗ್ರಹಿಸಿಕೊಡುವ ವಿಚಾರದಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಜಿಎಸ್‌ಡಿಪಿಯಲ್ಲಿ ಕರ್ನಾಟಕವು ಮಹಾರಾಷ್ಟç, ತಮಿಳುನಾಡಿನ ನಂತರ 3ನೇ ಸ್ಥಾನದಲ್ಲಿದೆ. ಆದರೆ, 2025-26ನೇ ಸಾಲಿನ ನಮ್ಮ ಬಜೆಟ್ ಉತ್ತರ ಪ್ರದೇಶ, ಮಹಾರಾಷ್ಟç, ರಾಜಸ್ಥಾನ, ತಮಿಳುನಾಡಿನ ನಂತರ 5ನೇ ದೊಡ್ಡ ಬಜೆಟ್ ಆಗಿದೆ.

7.​ಇದೇ ಸಂದರ್ಭದಲ್ಲಿ, 2025-26ನೇ ಸಾಲಿಗೆ ಸಂಬಂಧಿಸಿದಂತೆ ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಗಾತ್ರ 50.65 ಲಕ್ಷ ಕೋಟಿ ರೂ. 2024-25 ರಲ್ಲಿ 48.21 ಲಕ್ಷ ಕೋಟಿ ರೂ.ಗಳಷ್ಟಿತ್ತು. ಕೇಂದ್ರದ ಬಜೆಟ್ ಬೆಳವಣಿಗೆ ಶೇ. 5.06 ರಷ್ಟು ಮಾತ್ರ. ಇದರಲ್ಲಿ ಹಣದುಬ್ಬರವನ್ನು ಕಳೆದರೆ, ಕೇಂದ್ರದ ಬಜೆಟ್ಟಿನ ಗಾತ್ರ ನಕಾರಾತ್ಮಕವಾಗುತ್ತದೆ.

8.​ಅರವಿಂದ್ ಬೆಲ್ಲದ್ ಅವರು ಸೇರಿದಂತೆ ವಿರೋಧ ಪಕ್ಷಗಳವರು ತೆರಿಗೆ ಸಂಗ್ರಹ ಕಡಿಮೆಯಾಗಿದೆ, ಆಯವ್ಯಯದಲ್ಲಿ ಅಂದಾಜು ಮಾಡಿದ ತೆರಿಗೆ ಸಂಗ್ರಹಣೆ ಗುರಿಯನ್ನು ತಲುಪಿಲ್ಲ ಎಂದು ಪ್ರಸ್ತಾಪಿಸಿದ್ದಾರೆ. 2024-25 ರಲ್ಲಿ 1,89,893 ಕೋಟಿ ರೂ.ಗಳಷ್ಟು ರಾಜ್ಯದ ಸ್ವಂತ ತೆರಿಗೆ ಸಂಗ್ರಹವಾಗಬಹುದೆಂದು ಅಂದಾಜು ಮಾಡಲಾಗಿತ್ತು. ಫೆಬ್ರವರಿ ಅಂತ್ಯದವರೆಗೆ 1,57,111 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದ್ದು, ಶೇ. 82.7 ರಷ್ಟಾಗಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ಸುಮಾರು 1,77,000 ಕೋಟಿ ರೂ.ಗಳಷ್ಟು ಸಂಗ್ರಹವಾಗಬಹುದು. ಇದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ತುಸು ಕಡಿಮೆ. ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲಿಯೂ ಸಂಭವಿಸುತ್ತಿದೆ. ಕರ್ನಾಟಕವು ದೇಶದ ಒಂದು ಭಾಗ. ದೇಶದಲ್ಲಿ ನಡೆಯುವ ಬೆಳವಣಿಗೆಗಳು ರಾಜ್ಯದ ಮೇಲೂ ಪರಿಣಾಮ ಬೀರುತ್ತವೆ. ಇದು ದೇಶದ ಆರ್ಥಿಕ ಬೆಳವಣಿಗೆಯು ಸಮರ್ಪಕವಾಗಿಲ್ಲ ಎಂಬುದನ್ನು ತೋರಿಸುತ್ತದೆ.

9.​ ತಮಗೆಲ್ಲರಿಗೂ ತಿಳಿದಿರಲಿ, ನಾನು ಮೊದಲೆ ಹೇಳಿದ ಹಾಗೆ 2024-25 ರಲ್ಲಿ ಮೋದಿ ಸರ್ಕಾರವು 48.21 ಲಕ್ಷ ಕೋಟಿ ರೂ. ಗಳ ಬಜೆಟ್ ಮಂಡಿಸಿತ್ತು. ಆದರೆ, ಪರಿಷ್ಕೃತ ಅಂದಾಜುಗಳ ಪ್ರಕಾರ, 1.05 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹಣೆ ಕಡಿಮೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ. ಹಾಗಾಗಿ 2024-25 ರ ಬಜೆಟ್ಟನ್ನು 47.16 ಲಕ್ಷ ಕೋಟಿ ರೂ.ಗೆ ಪರಿಷ್ಕರಣೆ ಮಾಡಿದೆ.

10.​ರಾಜ್ಯವು ಅಭಿವೃದ್ಧಿ ಹೊಂದುತ್ತಿದೆ. 2022-23 ರಲ್ಲಿ 2,65,720 ಕೋಟಿ ರೂ.ಗಳಷ್ಟಿದ್ದ ಆಯವ್ಯಯ ಗಾತ್ರ 2025-26ನೇ ಸಾಲಿಗೆ 4,09,549 ಕೋಟಿ ರೂ. ಗಳಿಗೆ ಏರಿಕೆ ಆಗುತ್ತದೆ. ವ್ಯತ್ಯಾಸ 2022-23ಕ್ಕೆ ಹೋಲಿಸಿದರೆ 1,43,829 ಕೋಟಿ ರೂ.ಗಳಷ್ಟಾಗುತ್ತದೆ. ನಮ್ಮ ಆಯವ್ಯಯ ಗಾತ್ರ ಶೇ.54.12 ರಷ್ಟು ಹೆಚ್ಚಾಗಿದೆ.

11.​ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯಪಾಲರ ಭಾಷಣದ ಮೇಲೆ ನಾನು ವಿವರವಾಗಿ ಮಾತನಾಡಿದ್ದೇನೆ. ಈ ವರ್ಷ ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ರೂ.ಗಳನ್ನು ನಾನು ಒದಗಿಸಿದ್ದೇನೆ. ನಾನು ಮೊದಲೆ ಹೇಳಿದ ಹಾಗೆ ನಮ್ಮ ಸರ್ಕಾರ ಜನರ ಕಲ್ಯಾಣವನ್ನು ಹಾಗೂ ರಾಜ್ಯದ ಅಭಿವೃದ್ಧಿಯನ್ನು ಏಕಕಾಲದಲ್ಲಿ ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಕುರಿತ ಜಗತ್ತಿನ ವ್ಯಾಖ್ಯಾನಗಳು ಬದಲಾಗುತ್ತಿವೆ. ಜನರ ಕೊಳ್ಳುವ ಶಕ್ತಿ ಹೆಚ್ಚಾದರೆ, ಆರ್ಥಿಕತೆಯ ಪ್ರಗತಿ ವೇಗವಾಗುತ್ತದೆ. ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲದಿದ್ದರೆ ಆರ್ಥಿಕತೆ ಅಂಗವಿಕಲವಾಗುತ್ತದೆ. ಇದೇ ಗುಜರಾತಿನ ಮಾದರಿಗೂ ಕರ್ನಾಟಕದ ಮಾದರಿಗೂ ಇರುವ ವ್ಯತ್ಯಾಸ.

ವಿತ್ತೀಯ ಶಿಸ್ತು

12.​ ವಿತ್ತೀಯ ಕೊರತೆಯು ಜಿ.ಎಸ್.ಡಿ.ಪಿ.ಯ ಶೇ.3 ರಷ್ಟನ್ನು ಮೀರಬಾರದು ಎಂದಿದೆ. ಅದರಂತೆ ನಮ್ಮ ವಿತ್ತೀಯ ಕೊರತೆಯು ಶೇ.2.95 ರಷ್ಟಿದೆ. ಹಾಗೆಯೇ ಜಿ.ಎಸ್.ಡಿ.ಪಿ ಗೆ ಎದುರಾಗಿ ನಮ್ಮ ಹೊಣೆಗಾರಿಕೆಗಳು ಶೇ.25 ರಷ್ಟನ್ನು ಮೀರಬÁರದು ಎಂದಿದೆ. 2025-26ರ ಹೊಣೆಗಾರಿಕೆ ಶೇ.24.91 ರಷ್ಟಾಗುತ್ತದೆ.

13.​ಕರ್ನಾಟಕವು 2021-22 ರಲ್ಲಿ ಶೇ.26.71 ರಷ್ಟು ಹೊಣೆಗಾರಿಕೆಯನ್ನು ಹೊಂದಿತ್ತು. 2021-22 ರಲ್ಲಿ ವಿತ್ತೀಯ ಕೊರತೆ ಶೇ. 3.03 ರಷ್ಟಿತ್ತು.

14.​ನಮ್ಮ ಸರ್ಕಾರ ಗ್ಯಾರಂಟಿ ಯೋಜನೆÀಗಳಿಗೆ 51 ಸಾವಿರ ಕೋಟಿ ಸೇರಿದಂತೆ ಇತರೆ ಎಲ್ಲಾ ಕಲ್ಯಾಣ ಯೋಜನೆಗಳಿಗೆ ಹಾಗೂ ಸಹಾಯಧನಗಳಿಗೆ ಸರಿ ಸುಮಾರು 1 ಲಕ್ಷ ಕೋಟಿವರೆಗೆ ವಿನಿಯೋಗಿಸುತ್ತಿದೆ. ಇವೆಲ್ಲವೂ ಮಧ್ಯವರ್ತಿಗಳಿಲ್ಲದೆ ಜನರಿಗೆ ನೇರವಾಗಿ ತಲುಪುವ ಕಾರ್ಯಕ್ರಮಗಳಾಗಿವೆ. (ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು 18,000 ಕೋಟಿ, ವಿವಿಧ ಸಾಮಾಜಿಕ ಪಿಂಚಣಿ ಯೋಜನೆಗಳಿಗೆ 10,835 ಕೋಟಿ ಹಾಗೂ ಮನೆ ನಿರ್ಮಾಣದ ಸಬ್ಸಿಡಿ, ವಿದ್ಯಾರ್ಥಿ ವೇತನ ಸೇರಿದಂತೆ ಇತರೆ ಎಲ್ಲಾ ಇಲಾಖೆಗಳ ಸಹಾಯಧನಗಳು, ಹಾಲಿನ ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ, ಇತ್ಯಾದಿ ಎಲ್ಲವೂ ಸೇರಿ ಸುಮಾರು 20,000 ಕೋಟಿ ರೂ). ಇವೆಲ್ಲ ಸೇರಿ ಒಟ್ಟಾರೆ 1 ಲಕ್ಷ ಕೋಟಿ ರೂಗಳಾಗುತ್ತದೆ.

15.1.​2024-25 ರಲ್ಲಿ ಸರ್ಕಾರಿ ನೌಕರರ ಸಂಬಳಕ್ಕಾಗಿ 71,862 ಕೋಟಿ ರೂ. ಮತ್ತು ಪಿಂಚಣಿಗೆ 30,907 ಕೋಟಿ ರೂ. ಸೇರಿ ಒಟ್ಟು 1,02,769 ಕೋಟಿ ರೂ. ವೆಚ್ಚವಾಗಬಹುದೆಂದು ಪರಿಷ್ಕೃತ ಅಂದಾಜಿನಲ್ಲಿ ಅಂದಾಜು ಮಾಡಲಾಗಿದೆ. 7ನೇ ವೇತನ ಆಯೋಗ ಜಾರಿ ಆಗಿರುವುದರಿಂದ 2025-26 ನೆ ಸಾಲಿಗೆ ಸರ್ಕಾರಿ ನೌಕರರ ಸಂಬಳಕ್ಕಾಗಿ 85,860 ಕೋಟಿ ರೂ. ಮತ್ತು ಪಿಂಚಣಿಗಾಗಿ 38,580 ಕೋಟಿ ರೂ. ಸೇರಿ ಒಟ್ಟು ವೇತನಗಳಿಗಾಗಿ 1,24,440 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗಿದೆ.  ಬಡ್ಡಿ ಪಾವತಿಗಾಗಿ 45,600 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ವೇತನ, ಪಿಂಚಣಿ ಮತ್ತು ಬಡ್ಡಿ ಪಾವತಿಗಳಿಗಾಗಿ ಒಟ್ಟು 1,70,040 ಕೋಟಿ ರೂ.ಗಳು ಬೇಕು.

16 .​2025-26 ರಲ್ಲಿ ನಾನು ಮಂಡಿಸಿದ್ದು 16ನೇ ಬಜೆಟ್. ನನಗೆ ದಾಖಲೆಗಳನ್ನು ಮಾಡುವುದರಲ್ಲಿ ನಂಬಿಕೆಯಿಲ್ಲ. ನಾನು ಮಂಡಿಸಿದ ಬಜೆಟ್ ಬಡವರ, ಮಹಿಳೆಯರ, ಮಕ್ಕಳ, ಶೋಷಿತರ, ದುರ್ಬಲ ವರ್ಗದವರ, ಯುವಜನರ, ಕಾರ್ಮಿಕರ, ರೈತರ, ಹಿಂದುಳಿದವರ, ಅಲ್ಪಸಂಖ್ಯಾತರ ಏಳಿಗೆಯನ್ನು ಹಾಗೂ ಸಂಪತ್ತನ್ನು ಉತ್ಪಾದನೆ ಮಾಡುವವರ ಹಿತರಕ್ಷಣೆಯನ್ನು ಗಮನದಲ್ಲಿ ಇಟ್ಟುಕೊಂಡು ನಾಡಿನ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವ ಮೂಲಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುವ ಮೂಲಕ ಕರ್ನಾಟಕವನ್ನು ಸಮಗ್ರ ಹಾಗೂ ಸುಸ್ಥಿರ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಶ್ರಮಿಸುವ ನಿಟ್ಟಿನಲ್ಲಿ ನಾನು ಬಜೆಟ್‌ಗಳನ್ನು ರೂಪಿಸಿದ್ದೇನೆ. ಈ ಬಾರಿಯೂ ಅದೇ ಕೆಲಸವನ್ನು ಮಾಡಿದ್ದೇನೆ ಎಂಬುದು ನನ್ನ ಧೃಢವಾದ ನಂಬಿಕೆ.

17.​ಈ ಬಾರಿ ನಮ್ಮ ಸರ್ಕಾರ ಮಂಡಿಸಿರುವ ಆಯವ್ಯಯವು ಗ್ಯಾರಂಟಿ ಯೋಜನೆಗಳ ಆಯವ್ಯಯ ಅಷ್ಟೇ ಅಲ್ಲ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ತಯಾರಕರಿಗೆ ತಲಾ 1000 ರೂ ಹೆಚ್ಚು ಮಾಡಿದ್ದೇವೆ. ಅತಿಥಿ ಉಪನ್ಯಾಸಕರು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ತಲಾ 2000 ರೂ ಹೆಚ್ಚು ಮಾಡಿದ್ದೇವೆ. ಪತ್ರಕರ್ತರಿಗೆ ತಲಾ 3000 ರೂ, ಕಲಾವಿದರಿಗೆ ತಲಾ 500 ರೂ, ಕುಸ್ತಿ ಪಟುಗಳಿಗೆ ತಲಾ 1000 ರೂ ಹೆಚ್ಚು ಮಾಡಿದ್ದೇವೆ.

18.​ಎಲ್ಲಾ ಧರ್ಮದ ಪುರೋಹಿತರಿಗೆ ಸಮಾನವಾಗಿ ಮಾಸಿಕ 6000 ರೂ ಗೌರವಧನ ನೀಡಲು ಉದ್ದೇಶಿಸಲಾಗಿದೆ.

19.​ಇಷ್ಟರ ನಡುವೆ, ಬಂಡವಾಳ ವೆಚ್ಚಗಳಿಗೆ ಈ ವರ್ಷ 83,200 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಇಷ್ಟಾದರೂ ಸಹ, ನಮ್ಮ ವಿತ್ತೀಯ ಶಿಸ್ತು ನಿಯಮಗಳಿಗೆ ಅನುಗುಣವಾಗಿಯೇ ಇದೆ.

20.​2025-26ನೇ ಸಾಲಿಗೆ ಸಂಬಂಧಪಟ್ಟಂತೆ ಒಟ್ಟಾರೆ ರಾಜ್ಯದ ರಾಜಸ್ವ ಸ್ವೀಕೃತಿ 2,92,470 ಕೋಟಿ ರೂ. ಗಳಷ್ಟಾದರೆ ರಾಜಸ್ವ ವೆಚ್ಚ 3,11,739 ಕೋಟಿ ರೂ. ಆಗಬಹುದು. ಇದರಿಂದ 19,262 ಕೋಟಿ ರೂ.ಗಳಷ್ಟು ರಾಜಸ್ವ ಕೊರತೆ ಆಗಲಿದೆ ಎಂಬುದು ಅಂದಾಜು. ಇದು ಕಡಿಮೆ ಆಗಲೂಬಹುದು. 2024-25ರ ಬಜೆಟ್ ಮಂಡಿಸಿದಾಗ 27,354 ಕೋಟಿ ರೂ.ಗಳಷ್ಟು ರೆವೆನ್ಯೂ ಡಿಫಿಸಿಟ್ ಆಗಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ಪರಿಷ್ಕೃತ ಅಂದಾಜಿನಂತೆ 26,127 ಕೋಟಿ ರೂ.ಗಳಷ್ಟಾಗಬಹುದೆಂದು ಅಂದಾಜು ಮಾಡಲಾಗಿದೆ. ಒಟ್ಟಾರೆ 2024-25 ಕ್ಕೆ ಹೋಲಿಸಿದರೆ 2025-26 ರಲ್ಲಿ ಸುಮಾರು 8,000 ಕೋಟಿ ರೂ.ಗಳಷ್ಟು ರಾಜಸ್ವ ಕೊರತೆ ಕಡಿಮೆ ಆಗುತ್ತದೆ. 2024-25ರ ಆಯವ್ಯಯದ ಅಂದಾಜಿನಲ್ಲಿ ರಾಜಸ್ವ ಕೊರತೆಯು ಜಿ.ಎಸ್.ಡಿ.ಪಿ.ಯ ಶೇ.0.96 ರಿಂದ 2025-26ರ ಆಯವ್ಯಯದಲ್ಲಿ ಶೇ.0.63 ಕ್ಕೆ ಇಳಿಕೆಯಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ನೀಡುವಾಗ ನಾನು ಹೇಳಿದಂತೆ 2026-27ನೇ ಸಾಲಿಗೆ ರಾಜ್ಯದ ಬಜೆಟ್ ರಾಜಸ್ವ ಕೊರತೆಯಿಂದ ಹೊರಬರುತ್ತದೆ, ನಾವು ಉಳಿತಾಯ ಬಜೆಟ್ಟನ್ನು ಮಂಡಿಸುತ್ತೇನೆ ಎಂಬ ವಿಶ್ವಾಸ ನನಗೆ ಇದೆ.

21.​ಮಾನ್ಯ ಅಧ್ಯಕ್ಷರೆ, ಮಾನ್ಯ ಸದಸ್ಯರ ಗಮನಕ್ಕೆ ತರಬಯಸುವುದೇನೆಂದರೆ, ಕೇಂದ್ರದಲ್ಲಿ ಮೋದಿಯವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ರಾಜ್ಯಗಳ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. 2013 ರಿಂದ 2017 ರವರೆಗೆ ಕೇವಲ 04 ರಾಜ್ಯಗಳ ವಿತ್ತೀಯ ಕೊರತೆ ಶೇ.3 ಕ್ಕಿಂತ ಹೆಚ್ಚಿತ್ತು ಹಾಗೆಯೇ            5 ರಾಜ್ಯಗಳ ಒಟ್ಟು ಹೊಣೆಗಾರಿಕೆಗಳು ಶೇ.25 ಕ್ಕಿಂತ ಹೆಚ್ಚು ಇದ್ದವು. ಆದರೆ 2024-25 ರಲ್ಲಿ ದೇಶದ ಪ್ರಮುಖ 14 ರಾಜ್ಯಗಳ ಪೈಕಿ 10 ರಾಜ್ಯಗಳ ಒಟ್ಟು ಹೊಣೆಗಾರಿಕೆಗಳು ಶೇ.25 ಕ್ಕಿಂತ ಹೆಚ್ಚಿಗೆ ಇವೆ. ಅದೇ ರೀತಿ, 6 ಕ್ಕಿಂತ ಹೆಚ್ಚು ರಾಜ್ಯಗಳ ವಿತ್ತೀಯ ಕೊರತೆ ಶೇ.3 ಕ್ಕಿಂತ ಹೆಚ್ಚಾಗಿದೆ.

22.​ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚಿಗೆ ಬಿಡುಗಡೆ ಮಾಡಿರುವ ದಾಖಲೆಗಳಂತೆ 2014 ರಲ್ಲಿ ಮನಮೋಹನ್ ಸಿಂಗ್ ಅವರು ಅಧಿಕಾರದಿಂದ ಇಳಿಯುವ ಸಂದರ್ಭದಲ್ಲಿ ದೇಶದ ಎಲ್ಲಾ ರಾಜ್ಯಗಳ ಒಟ್ಟು ಸಾಲ 25.1 ಲಕ್ಷ ಕೋಟಿ ರೂ.ಗಳಷ್ಟಿತ್ತು. (ಮಾರ್ಚ್ 31-2014) 2024 ರ ಮಾರ್ಚ್-31 ರ ವೇಳೆಗೆ 83.32 ಲಕ್ಷ ಕೋಟಿ ರೂ.ಗಳಷ್ಟು ಎಂದು ಆರ್.ಬಿ.ಐ ದಾಖಲೆ ಬಿಡುಗಡೆ ಮಾಡಿದೆ. ಈ ವರ್ಷದ ಕಡೆಗೆ  ಎಲ್ಲಾ ರಾಜ್ಯಗಳ ಸಾಲದ ಪ್ರಮಾಣ 95-100 ಲಕ್ಷ ಕೋಟಿ ರೂ.ಗಳಷ್ಟಾಗಬಹುದು.

More articles

Latest article