ಹಿಂದೂ ಧರ್ಮದ ರಕ್ಷಕರೆಂದು ಕರೆದುಕೊಳ್ಳುವ ಉತ್ತರಪ್ರದೇಶದ ಬ್ರಾಹ್ಮಣರು, ದಲಿತರು ಬುದ್ಧ, ಅಂಬೇಡ್ಕರ್ ಅವರನ್ನು ಅನುಸರಿಸಿದರೇಕೆ ಕೆಂಡಾಮಂಡಲವಾಗುತ್ತಾರೆ ಎಂಬುದನ್ನು ಇಂದು ಮನುವಾದಿ ಸಂಘಟನೆಗಳಲ್ಲಿ ಕಾಲ್ದಳಗಳಂತೆ ಕೆಲಸ ಮಾಡುತ್ತಿರುವ SC/ST/OBC ಯುವಜನತೆ ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಉತ್ತರಪ್ರದೇಶದ ಬ್ರಾಹ್ಮಣರಿಗೆ ಕರ್ನಾಟಕದ ಕುದ್ಮುಲ್ ರಂಗರಾವ್, ಗೋಪಾಲಕೃಷ್ಣ ಅಯ್ಯಂಗಾರರಂತಹ ಮಾನವತಾವಾದಿಗಳ ಪರಿಚಯ ಮಾಡಿಸಬೇಕು.
ಕೋಮುವಾದ ಹೆಚ್ಚಿದಂತೆಲ್ಲ ಜಾತಿ ವಿರೋಧಿ ಹೋರಾಟಗಳಿಗೆ ಹಿನ್ನಡೆಯಾಗುತ್ತದೆ. ಮುಸ್ಲೀಮರ ಬಗೆಗಿನ ಕಪೋಲಕಲ್ಪಿತ ಭಯವನ್ನು ಸೃಷ್ಟಿಸಿ SC/ST/OBC ಗಳನ್ನು ತನ್ನ ಕಾಲ್ದಳವನ್ನಾಗಿ ಮಾಡಿಕೊಂಡಿರುವ ಮನುವಾದಿ ವಿಚಾರವು, ಅದೇ SC/ST/OBC ಗಳು ಬುದ್ಧ-ಬಸವ-ಅಂಬೇಡ್ಕರ್-ಕುವೆಂಪು ಎಂದರೆ ಕೆಂಡಾಮಂಡಲವಾಗಿ ಹತ್ತಿಕ್ಕಲು ಪ್ರಯತ್ನಿಸುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿರುವ ಅಮಾನವೀಯ ಘಟನೆ.
![](https://kannadaplanet.com/wp-content/uploads/2023/12/WhatsApp-Image-2023-12-25-at-5.56.14-PM.jpeg)
ಕಾನ್ಪುರದ ಪಹೇವ ಹಳ್ಳಿಯಲ್ಲಿ ದಲಿತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಕಳೆದ ವರ್ಷದಿಂದ ಡಿಸೆಂಬರ್ ತಿಂಗಳಿನಲ್ಲಿ ‘ಬುದ್ಧ ಕಥಾ’ ಎಂಬ ಕಾರ್ಯಕ್ರಮವನ್ನು ಏಳು ದಿನಗಳ ಕಾಲ ಹಮ್ಮಿಕೊಳ್ಳಲಾಗುತ್ತಿದೆ. ಈ ಏಳು ದಿನಗಳು ಬುದ್ಧ, ಅಂಬೇಡ್ಕರ್, ಸಂತ ರವಿದಾಸ್ ಹಾಗೂ ಇತರೆ ಬಹುಜನ ನಾಯಕ/ನಾಯಕಿಯರ ಕುರಿತು ಹಾಡುಗಳನ್ನು, ಕಥೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ. ಇಡೀ ಗ್ರಾಮದ ದಲಿತರು ಅಲ್ಲಿ ಭಾಗವಹಿಸುತ್ತಾರೆ. ರಾತ್ರಿ ಸಮಯದಲ್ಲಿ ಒಂದಷ್ಟು ಜನ ಸಮಾರಂಭದ ವೇದಿಕೆ ಬಳಿಯೇ ಮಲಗುತ್ತಾರೆ.
![](https://kannadaplanet.com/wp-content/uploads/2023/12/WhatsApp-Image-2023-12-25-at-5.56.14-PM-1-2.jpeg)
ಈ ವರ್ಷವೂ ಸಹ ‘ಬುದ್ಧ ಕಥಾ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಘೋಷಿಸಿದ ತಕ್ಷಣ ಅದೇ ಹಳ್ಳಿಯ ಬ್ರಾಹ್ಮಣರು ‘ನೀವು ಈ ಕಾರ್ಯಕ್ರಮ ಮಾಡುವಂತಿಲ್ಲ. ಮಾಡಿದರೆ ಮಹಿಳಾ ಹಾಡುಗಾರರನ್ನು ಅಪಹರಿಸಲಾಗುವುದು. ಕಾರ್ಯಕ್ರಮದಲ್ಲಿ ಗುಂಡು ಹಾರಿಸಲಾಗುವುದು’ ಎಂದು ಬೆದರಿಕೆ ಹಾಕಿದರಂತೆ. ಆದರೆ ಈ ಬೆದರಿಕೆಗೆಲ್ಲ ಜಗ್ಗದ ದಲಿತ ಸಮುದಾಯ ಬುದ್ಧ ಕಥಾ ಕಾರ್ಯಕ್ರಮವನ್ನು ಏಳು ದಿನಗಳ ಕಾಲ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಸಂತೋಷದ ವಿಚಾರವೆಂದರೆ ಈ ಬಾರಿ OBC ಗಳು ಸಹ ಭಾಗವಹಿಸಿದ್ದಾರೆ. ಕಾರ್ಯಕ್ರಮ ಅರ್ಥಪೂರ್ಣವಾಗಿ ಆರಂಭವಾಗಿದೆ. ಆದರೆ ಮೂರನೇ ದಿನ ರಾತ್ರಿ 2 ಗಂಟೆಯಷ್ಟೊತ್ತಿಗೆ ಸುಮಾರು 15 ಜನ ಜಾತಿವಾದಿ ಗೂಂಡಾಗಳು ಪೆಂಡಾಲ್ ಬಳಿ ನುಗ್ಗಿ ಮಲಗಿದ್ದವರನ್ನು ಥಳಿಸಿ, ಗಾಳಿಯಲ್ಲಿ ಗುಂಡುಗಳ ಮಳೆ ಸುರಿಸಿ, ಬುದ್ಧ , ಅಂಬೇಡ್ಕರ್ ಭಾವಚಿತ್ರಗಳನ್ನು ಹರಿದು ಬಿಸಾಡಿ, ಸಂತ ರವಿದಾಸರ ಪ್ರತಿಮೆಯನ್ನು ಒಡೆದು ಹಾಕಿ ಓಡಿ ಹೋಗಿದ್ದಾರೆ. ಅವರಲ್ಲಿ ಚಂದ್ರಭಾನ್ ಮಿಶ್ರಾ, ಶಿವಮ್ ಮಿಶ್ರಾ, ಜೀತು ಮಿಶ್ರಾ, ಅರುಣ್ ಕುಮಾರ್, ಅಶು ಮತ್ತು ವಿಶಂಭರ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಬ್ರಾಹ್ಮಣರೇ ಆಗಿದ್ದಾರೆ.
![](https://kannadaplanet.com/wp-content/uploads/2023/12/WhatsApp-Image-2023-12-25-at-5.56.09-PM-2.jpeg)
ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ಜನಸಂಖ್ಯೆಯ ಬ್ರಾಹ್ಮಣರು ಇರುವುದು ಉತ್ತರ ಪ್ರದೇಶದಲ್ಲಿಯೇ. ಹಿಂದೂ ಧರ್ಮದ ರಕ್ಷಕರೆಂದು ಕರೆದುಕೊಳ್ಳುವ ಈ ಉತ್ತರಪ್ರದೇಶದ ಬ್ರಾಹ್ಮಣರು ದಲಿತರು ಬುದ್ಧ, ಅಂಬೇಡ್ಕರ್ ಅವರನ್ನು ಅನುಸರಿಸಿದರೇಕೆ ಕೆಂಡಾಮಂಡಲವಾಗುತ್ತಾರೆ ಎಂಬುದನ್ನು ಇಂದು ಮನುವಾದಿ ಸಂಘಟನೆಗಳಲ್ಲಿ ಕಾಲ್ದಳಗಳಂತೆ ಕೆಲಸ ಮಾಡುತ್ತಿರುವ SC/ST/OBC ಯುವಜನತೆ ಅರ್ಥ ಮಾಡಿಕೊಳ್ಳಬೇಕು. ಮುಸ್ಲೀಮರ ವಿರುದ್ಧ ನಿಲ್ಲಲು ಹಾಗೂ ಆ ಮೂಲಕ ಹಿಂದೂ ಮೇಲ್ಜಾತಿಗಳ ಅಧಿಕಾರ ಕಾಪಿಟ್ಟುಕೊಳ್ಳಲು ಮಾತ್ರ SC/ST/OBC ಗಳು ಇವರಿಗೆ ಬೇಕಷ್ಟೆ. ಸಮಾಜದಲ್ಲಿ ಸಮಾನತೆ ಬೇಕು ಎಂದರೆ ಅಥವಾ ಸಮಾನತೆ ಕಡೆ ಹೆಜ್ಜೆ ಇಟ್ಟರೆ ಬಲಪಂಥೀಯರು ಹೇಗೆಲ್ಲ ಆಡುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಕೊನೆಯದಾಗಿ, ಉತ್ತರಪ್ರದೇಶದ ಬ್ರಾಹ್ಮಣರಿಗೆ ಕರ್ನಾಟಕದ ಕುದ್ಮುಲ್ ರಂಗರಾವ್, ಗೋಪಾಲಕೃಷ್ಣ ಅಯ್ಯಂಗಾರರಂತಹ ಮಾನವತಾವಾದಿಗಳ ಪರಿಚಯ ಮಾಡಿಸಬೇಕು.
ಅಂದ ಹಾಗೆ ಏಳು ದಿನಗಳ ಬುದ್ದ ಕಥಾ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದಿದೆ. ಪಹೇವ ಹಳ್ಳಿಯ ದಲಿತರಿಗೆ ಹಾಗೂ ಹಿಂದುಳಿದ ಜಾತಿಯವರಿಗೆ ಅಭಿನಂದನೆಗಳನ್ನು ಹೇಳೋಣ.
![](https://kannadaplanet.com/wp-content/uploads/2023/12/IMG-20231226-WA0229.jpg)
ವಿಕಾಸ್ ಆರ್ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ.