ನವದೆಹಲಿ: ನವಂಬರ್ ನಲ್ಲಿ ಚುನಾವಣೆ ನಡೆಯುವ ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್ ಐ ಆರ್ ) ವಿರೋಧಿಸಿ ಇಂಡಿಯಾ ಒಕ್ಕೂಟದ ಪಕ್ಷಗಳ ಸಂಸದರು ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದರು.
ಇಂದಿನ ಸಂಸತ್ ಕಲಾಪದ ಆರಂಭಕ್ಕೂ ಮುನ್ನ ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಆರ್ ಜೆ ಡಿ ಸೇರಿದಂತೆ ಹಲವಾರು ವಿಪಕ್ಷಗಳ ಸದಸ್ಯರು ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದಧ ಘೋಷಣೆಗಳನ್ನು ಕೂಗಿದರು. ಎಸ್ ಆರ್ ಐ ಅನ್ನು ಹಿಂಪಡೆಯುವಂತೆ ಆಗ್ರಹಪಡಿಸಿದರು.
ವಿರೋಧ ಪಕ್ಷದ ಸಂಸದರು ಮತ ಲೂಟಿ ನಿಲ್ಲಿಸಿ ಎಂದು ಬರೆದಿರುವ ಫಲಕಗಳು ಮತ್ತು ಚುನಾವಣಾ ಆಯೋಗ ಸರ್ಕಾರದ ನಡುವಿನ ಹೊಂದಾಣಿಕೆ ಚಿತ್ರಿಸಿರುವ ಫಲಕಗಳನ್ನು ಪ್ರದರ್ಶಿಸಿದರು. ವೋಟ್ ಕಿ ಚೋರಿ ಬಂದ್ ಕರೋ ಮತ ಕಳ್ಳತನ ನಿಲ್ಲಿಸಿ ಮತ್ತು ಎಸ್ ಐ ಆರ್ ವಾಪಸ್ ಲೋ ಎಂದು ಘೋಷಣೆಗಳನ್ನು ಕೂಗಿದರು.
ಚುನಾವಣಾ ಆಯೋಗದ ಈ ಪ್ರಕ್ರಿಯೆ ಬಿಹಾರ ವಿಧಾನಸಭಾ ಚುನಾವಣೆಗೆ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.