ಬಿಹಾರ ಚುನಾವಣೆ: ʼಮಹಾಘಟಬಂಧನ್‌’ ಮೈತ್ರಿ ಸೇರ್ಪಡೆಗೆ ಎಐಎಂಐಎಂ ಒಲವು, ಲಾಲು ಪ್ರಸಾದ್‌ ಗೆ ಓವೈಸಿ ಪತ್ರ

Most read

ಪಟ್ನಾ: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ, ಕಾಂಗ್ರೆಸ್‌ ಮತ್ತು ಎಡಪಕ್ಷಗಳನ್ನೊಳಗೊಂಡ ‘ಮಹಾಘಟಬಂಧನ್‌’ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲು ಅಸಾದುದ್ಧೀನ್‌ ಓವೈಸಿ ಅವರ ಎಐಎಂಐಎಂ ಪಕ್ಷ ಒಲವು ತೋರಿಸಿದೆ.

ಈ ಸಂಬಂಧ ಎಐಎಂಐಎಂನ ಬಿಹಾರ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಪಕ್ಷದ ಏಕೈಕ ಶಾಸಕ ಅಖ್ತರುಲ್‌ ಇಮಾನ್‌ ಅವರು ರಾಷ್ಟ್ರೀಯ ಜನತಾದಳದ (ಆರ್‌ ಜೆಡಿ) ಅಧ್ಯಕ್ಷ ಲಾಲು ಪ್ರಸಾದ್‌ ಅವರಿಗೆ ಪತ್ರ ಬರೆದಿದ್ದು, ಮೈತ್ರಿಕೂಟಕ್ಕೆ ಸೇರ್ಪಡೆಗೊಳಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

‘ಮಹಾಘಟಬಂಧನ್‌’ ಮೈತ್ರಿಕೂಟಕ್ಕೆ ಎಐಎಂಐಎಂ ಸೇರ್ಪಡೆಯಿಂದ ಮತಗಳ ವಿಭಜನೆಯಾಗುವುದನ್ನು ತಡೆಯಬಹುದು ಎಂದು ಇಮಾನ್‌ ಉಲ್ಲೇಖಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಅವರು ಈ ಪತ್ರವನ್ನು ಹಂಚಿಕೊಂಡಿದ್ದಾರೆ.

2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ‌ಬಿಎಸ್‌ ಪಿ ಹಾಗೂ ರಾಷ್ಟ್ರೀಯ ಲೋಕ ಸಮಾಜ ಪಕ್ಷದೊಂದಿಗೆ (ಆರ್‌ ಎಲ್‌ ಎಸ್‌ ಪಿ) ಮೈತ್ರಿ ಮಾಡಿಕೊಂಡಿದ್ದ ಎಐಎಂಐಎಂ ಐದು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಇವರಲ್ಲಿ ನಾಲ್ವರು ಶಾಸಕರು 2022ರಲ್ಲಿ ಆರ್‌ ಜೆಡಿಗೆ ಸೇರ್ಪಡೆಯಾಗಿದ್ದರು.

More articles

Latest article