2024-25ನೇ ಹಣಕಾಸು ವರ್ಷದ ಬಾಕಿ ಆಸ್ತಿ ತೆರಿಗೆಗಳ ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಎಲ್ಲಾ ವಲಯ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೂಚನೆ ನೀಡಿದೆ. ಬಿಬಿಎಂಪಿ ವಿಶೇಷ ಅಯುಕ್ತ ಮನೀಷ್ ಮೌದ್ಗಿಲ್ ಅವರು ಎಲ್ಲ ವಲಯ ಅಧಿಕಾರಿಗಳೊಂದಿಗೆ ವರ್ಚ್ಯುವಲ್ ಸಭೆ ನಡೆಸಿ ಈ ಮಾಸಾಂತ್ಯಕ್ಕೆ 2024-25 ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳುತ್ತಿದ್ದು, ಬಾಕಿ ಇರುವ ಆಸ್ತಿ ತೆರಿಗೆ ಸಂಗ್ರಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಾಲಿಕೆ ಅಧಿಕಾರಿಗಳು ಭಾರಿ ಪ್ರಮಾಣದ ಬಾಕಿ ಉಳಿಸಿಕೊಂಡಿರುವ ಕಂಪನಿಗಳು, ವಾಣಿಜ್ಯ ಮತ್ತು ಅಂಗಡಿ ಮುಂಗಟ್ಟುಗಳ ಬಾಕಿಯನ್ನು ಸಂಗ್ರಹಿಸಲು ಆದ್ಯತೆ ನೀಡಬೇಕು ಎಂದೂ ಸೂಚಿಸಿದ್ದಾರೆ.
2024-25 ನೇ ಸಾಲಿನ ಆರ್ಥಿಕ ವರ್ಷಕ್ಕೆ 5,210 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು, ಪೈಕಿ 4,604 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದ್ದು, ನಿಗದಿತ ಗುರಿಯ ಶೇ. 88.36 ರಷ್ಟು ತಲುಪಲಾಗಿದೆ. ಹಣಕಾಸು ವರ್ಷ ಮುಗಿಯಲು ಕೇವಲ ಎರಡು ವಾರಗಳು ಬಾಕಿ ಇದ್ದು, ಇನ್ನೂ 606 ಕೋಟಿ ರೂ.ಗಳನ್ನು ಸಂಗ್ರಹಸಬೇಕಿದೆ. ಎಂಟು ಬಿಬಿಎಂಪಿ ವಲಯಗಳ ಪೈಕಿ ಯಲಹಂಕ ವಲಯವು ಶೇ. 99.97 ರಷ್ಟು ಆಸ್ತಿ ತೆರಿಗೆ ಸಂಗ್ರಹದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಬೊಮ್ಮನಹಳ್ಳಿ ವಲಯ ಕೊನೆಯ ಸ್ಥಾನದಲ್ಲಿದೆ.
ತಾತ್ಕಾಲಿಕ ಪರಿಹಾರ ರೂಪದಲ್ಲಿ ತೆರಿಗೆ ಪಾವತಿಸದ ವರ್ಷಕ್ಕೆ 100 ರೂ ತೆರಿಗೆಗೆ 100 ರೂ. ವಿಧಿಸಲಾಗುತ್ತಿದೆ. ಈ ಪರಿಹಾರವೂ ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಮಾಸಾಂತ್ಯದೊಳಗೆ ತೆರಿಗೆ ಪಾವತಿಸಿದರೆ ಭಾರಿ ಪ್ರಮಾಣದ ದಂಡವನ್ನು ಉಳಿಸಿಕೊಳ್ಳಬಹುದಾಗಿದೆ. ಈಗಾಗಲೇ ನಾವು ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಏಪ್ರಿಲ್ 1ರಿಂದ ಶೇ.100ರಷ್ಟು ದಂಡ ಪಾವತಿಸಬೇಕಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಹೆಚ್ಚುವರಿಯಾಗಿ 2022-23ನೇ ಸಾಲಿನ ಅಥವಾ ಅದಕ್ಕಿಂತಲೂ ಮುಂಚಿನ ತೆರಿಗೆ ಬಾಕಿಗೆ ಹೆಚ್ಚುವರಿಯಾಗಿ ಶೇ.9ರಷ್ಟು ಬಡ್ಡಿ ವಿಧಿಸಲಾಗುತ್ತದೆ. 2023-24ನೇ ಸಾಲಿನ ಬಾಕಿ ತೆರಿಗೆಗೆ ಶೇ.15ರಷ್ಟು ಬಡ್ಡಿ ವಿಧಿಸಲಾಗುತ್ತದೆ. 2024-25ನೇ ಸಾಲಿನ ಬಾಕಿ ತೆರಿಗೆಗೂ ಏಪ್ರಿಲ್ 1ರಿಂದ ಶೇ.15ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದೂ ಮನೀಷ್ ಮೌದ್ಗಿಲ್ ತಿಳಿಸಿದ್ದಾರೆ. ಉದಾಹರಣೆಗೆ 2022-23ನೇ ಸಾಲಿನಲ್ಲಿ 1000 ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಅವರು 2000ರೂ ಪಾವತಿಸಬೇಕು. ಜತೆಗೆ ಶೇ.15ರಷ್ಟು ಬಡ್ಡಿಯನ್ನೂ ತೆರಬೇಕಾಗುತ್ತದೆ. ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ 1,82,467 ಆಸ್ತಿಗಳು ತೆರಿಗೆ ಬಾಕಿ ಉಳಿಸಿಕೊಂಡಿವೆ. ಮಹದೇವಪುರ, ಪೂರ್ವ ಮತ್ತು ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿದುಕೊಂಡಿದೆ.
ಈ ಹಿಂದೆ ಬಾಕಿ ಉಳಿಸಿಕೊಂಡಿರು ತೆರಿಗೆಗೆ ಶೇ.100ರಷ್ಟು ದಂಡವನ್ನು ಮಾತ್ರ ವಿಧಿಸಲಾಗುತ್ತಿತ್ತು. ಆಸ್ತಿಯನ್ನು ಮುಚ್ಚಿಟ್ಟ, ಘೋಷಿಸದ ಆಸ್ತಿಗಳಿಗೆ ತೆರಿಗೆ ಬಾಕಿಯ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಿತ್ತು.ಆದರೆ ಇನ್ನು ಮುಂದೆ ಎಲ್ಲ ರೀತಿಯ ತೆರಿಗೆ ವಂಚನೆಯನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗುತ್ತದೆ. ಮಾರ್ಚ್ 31ಕ್ಕೆ ಕೆಲವೇ ದಿನಗಳು ಬಾಕಿ ಉಳಿದುಕೊಂಡಿದ್ದು, ಆಸ್ತಿ ಮಾಲೀಕರು ಕೂಡಲೇ ತರಿಗೆ ಪಾವತಿಸಿ ದುಪ್ಪಟ್ಟು ಪಾವತಿಯಿಂದ ಪಾರಾಗಬೇಕು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಕಿವಿಮಾತು ಹೇಳುತ್ತಾರೆ. ಒಂದು ವೇಳೆ ನೀವು ಇನ್ನೂ ತೆರಿಗೆ ಪಾವತಿಸಿಲ್ಲವಾದರೆ ಕೂಡಲೇ ಪಾವತಿಸಿಬಿಡಿ. ಇಲ್ಲವಾದಲ್ಲಿ ನಿಮ್ಮ ತೆರಿಗೆ ಹಣದ ದುಪ್ಪಟ್ಟು ಮತ್ತು ಬಡ್ಡಿಯನ್ನೂ ತೆರಬೇಕಾಗುತ್ತದೆ.