ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿದ್ದ 11 ಇಂದಿರಾ ಕ್ಯಾಂಟೀನ್‌ಗಳು ಪುನರಾರಂಭ: ವಿಶೇಷ ಆಯುಕ್ತರು

Most read

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದಕ್ಷಿಣ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ 11 ಇಂದಿರಾ ಕ್ಯಾಂಟೀನ್‌ಗಳು ಬಿಲ್ ಪಾವತಿಯಾಗದೆ ಸ್ಥಗಿತಗೊಂಡಿರುವ ಬಗ್ಗೆ ಕೆಲ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ವಿದ್ಯುನ್ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ಈ ಕುರಿತು ಕೆಳಕಂಡಂತೆ ಸ್ಪಷ್ಠೀಕರಣ ನೀಡಲಾಗಿದೆ.

“ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ವಲಯಗಳಲ್ಲಿ 2017 ರಿಂದ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ.” ಈ ಸಂಬಂಧ ದಕ್ಷಿಣ ವಲಯದ 11 ಇಂದಿರಾ ಕ್ಯಾಂಟೀನ್‌ಗಳನ್ನು ಸಂಬಂಧಪಟ್ಟ ಸಂಸ್ಥೆಯವರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟವನ್ನು ರಿಯಾಯಿತಿ ದರಗಳಲ್ಲಿ ಒದಗಿಸುತ್ತಿದೆ.

ಮುಂದುವರಿದು, ಗುತ್ತಿಗೆ ಪಡೆದಿರುವ ಸಂಸ್ಥೆಯು ಸಲ್ಲಿಸಿರುವ ಬಿಲ್ಲುಗಳಲ್ಲಿ ಬಾಕಿ ಮೊತ್ತ ಅಂದಾಜು 40.00 ಕೋಟಿ ರೂ.ಗಳನ್ನು ಪಾವತಿಸದೇ ಇರುವ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಅಡುಗೆ ಕೋಣೆಯಲ್ಲಿ ನೀರಿನ ಮತ್ತು ವಿದ್ಯುತ್ ಬಿಲ್‌ಗಳನ್ನು ಪಾವತಿಸದೇ ಇರುವುದರಿಂದ ದಿನಾಂಕ: 18-07-2024ರಂದು ಸ್ಥಗಿತಗೊಳಿಸಿರುತ್ತಾರೆ.

ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಲಾಗಿದ್ದು, ಪಾಲಿಕೆಯ ವ್ಯಾಪ್ತಿಯಲ್ಲಿ ಆಹಾರದ ಗುಣಮಟ್ಟ, ಪ್ರಮಾಣವನ್ನು ಪರಿಶೀಲಿಸಲು ಪ್ರತಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಾರ್ಷ್ಲ್‌ಗಳನ್ನು ನಿಯೋಜಿಸಲಾಗಿದೆ. ಸದರಿ ಮಾರ್ಷಲ್‌ಗಳು ಪ್ರತಿ ನಿತ್ಯ ಖರ್ಚಾಗುವ ಊಟದ ಪ್ರಮಾಣದ ವರದಿ ಅನ್ವಯ ನವೆಂಬರ್-2021 ರಿಂದ ತಹಲ್‌ವರೆಗೆ ಸಂಬಂಧಪಟ್ಟ ಸಂಸ್ಥೆಯವರಿಗೆ ಅನುದಾನವನ್ನು ಪಾವತಿ ಮಾಡಲಾಗಿರುತ್ತದೆ. ಆದರೆ, ದಕ್ಷಿಣ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯವರು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಾಗರೀಕರಿಗೆ ಒದಗಿಸಿರುವ ಆಹಾರಕ್ಕಿಂತ ಹೆಚ್ಚಿನ ಮಟ್ಟದ ಬಿಲ್‌ನ್ನು ಸಲ್ಲಿಸಿರುವುದರಿಂದ ಅನುದಾನವನ್ನು ಕಡಿತಗೊಳಿಸಲಾಗಿರುತ್ತದೆ.

ಗುತ್ತಿಗೆದಾರರ ಜೊತೆ ಮಾಡಿಕೊಂಡಿರುವ ಒಡಂಬಡಿಕೆಯ ಪ್ರಕಾರ ನೀರು ಮತ್ತು ವಿದ್ಯುತ್ ಬಿಲ್‌ನ್ನು ಸಂಬಂಧಪಟ್ಟ ಸಂಸ್ಥೆಯವರೇ ಪಾವತಿಸಬೇಕಾಗಿರುತ್ತದೆ. ಈ ಬಗ್ಗೆ ದಿನಾಂಕ: 18-07-2024ರಂದು ಮುಖ್ಯ ಆರೋಗ್ಯಾಧಿಕಾರಿ(ಸಾ.ಆ)ರವರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಸಂಸ್ಥೆಯವರ ಪ್ರತಿನಿಧಿ, ದಕ್ಷಿಣ ವಲಯ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿರುತ್ತದೆ. ಸದರಿ ಸಭೆಯಲ್ಲಿ ಎಲ್ಲಾ ವಿಷಯಗಳ ಕುರಿತು ಸಂಸ್ಥೆಯ ಪ್ರತಿನಿಧಿಗಳಿಗೆ ವಿವರಿಸಿ, ತುರ್ತಾಗಿ ಸ್ಥಗಿತಗೊಂಡಿರುವ 11 ಇಂದಿರಾ ಕ್ಯಾಂಟೀನ್‌ಗಳನ್ನು ಪುನಾರಂಭಿಸುವಂತೆ ಸೂಚಿಸಲಾಗಿರುತ್ತದೆ.

ದಕ್ಷಿಣ ವಲಯದಲ್ಲಿ ಮುಚ್ಚಿದ್ದ 11 ಇಂದಿರಾ ಕ್ಯಾಂಟೀನ್‌ಗಳನ್ನು ದಿನಾಂಕ: 19-07-2024 ರಿಂದ ಅಂದರೆ ಇಂದಿನಿಂದ ಗುತ್ತಿದಾರರು ಪುನರಾರಂಭ ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಈ ರೀತಿ ಪುನರಾವರ್ತನೆಗೊಂಡಲ್ಲಿ ಕಾನೂನು ರೀತಿ ಕ್ರಮಕೈಗೊಂಡು ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುವುದೆಂದು ಸಂಬಂಧಪಟ್ಟ ಸಂಸ್ಥೆಯವರಿಗೆ ಎಚ್ಚರಿಕೆ ನೀಡಲಾಗಿದೆ ಎಂದುಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್* ರವರು ತಿಳಿಸಿರುತ್ತಾರೆ.

More articles

Latest article