ಬೆಂಗಳೂರು : 16 ವರ್ಷದೊಳಗಿನ ಎಲ್ಲಾ ಶಾಲಾ-ಕಾಲೇಜುಗಳ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧದ ಸಾಧಕ -ಬಾಧಕ ಕುರಿತು ಪೋಷಕರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕವು 16 ವರ್ಷದ ಎಲ್ಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿ ಮೊಬೈಲ್ ಬಳಕೆ ನಿಯಂತ್ರಣ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಇಲಾಖೆಯು ಸಮಿತಿ ರಚಿಸಲಾಗಿದ್ದು, ಅವರಿಂದ ನೆರವು ಪಡೆಯಲಾಗುತ್ತಿದೆ. ಸಂಪೂರ್ಣವಾಗಿ ಮೊಬೈಲ್ ಬಳಕೆ ನಿಷೇಧಿಸಬೇಕೋ ಅಥವಾ ನಿರ್ಬಂಧಿಸಬೇಕೋ ಎಂಬುದರ ಬಗ್ಗೆ ಎಲ್ಲರೊಂದಿಗೆ ಕೂಲಂಕಷವಾಗಿ ಚರ್ಚಿಸಿ ಮುಂದಿನ ಅಧಿವೇಶನದ ವೇಳೆಗೆ ಸೂಕ್ತ ನಿರ್ಧಾರಕ್ಕೆ ಬರಲಾಗುವುದು.
ಕೆಲ ದೇಶಗಳಲ್ಲಿ ಶಾಲೆಗಳಲ್ಲಿ ಮೊಬೈಲ್ ಬಳಕೆ ಸಂಪೂರ್ಣ ನಿಷೇಧಿಸಲು ಹೊರಟಿವೆ. 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 2007ರಲ್ಲಿ ಮೊಬೈಲ್ ಬಳಕೆ ನಿಷೇಧ ಕುರಿತು ಕಾಯ್ದೆ ರೂಪಿಸಲಾಗಿತ್ತು. ಆದರೆ ಸಮಗ್ರವಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ. ಮೊಬೈಲ್ ಬಳಕೆ ನಿಷೇಧ ಕುರಿತು ಅನ್ಯ ರಾಷ್ಟ್ರಗಳ ಮಕ್ಕಳ ಆಯೋಗಗಳ ರೂಪಿಸಿರುವ ಮಾರ್ಗಸೂಚಿಗಳ ಬಗ್ಗೆ ಅಧ್ಯಯನ ಮಾಡಲಾಗುವುದು. ಪೋಷಕರೊಂದಿಗೆ ಈ ಬಗ್ಗೆ ಚರ್ಚಿಸಿದ ಬಳಿಕ ಮೊಬೈಲ್ ನಿಷೇಧ ಅಥವಾ ನಿರ್ಬಂಧಿಸಬೇಕಾ ಎಂಬುದರ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಇಂದಿನ ಎಐ ಯುಗದಲ್ಲಿ ಏಕಾಏಕಿ ಮೊಬೈಲ್ ಬಳಕೆ ನಿಷೇಧಿಸಲು ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದೆ. ಸಂವಹನಕ್ಕಾಗಿ ಮೊಬೈಲ್ ಬಳಕೆ ಆದರೆ ಸರಿ. ಆದರೆ ಸಮಾಜ ಹಾಳು ಮಾಡುವ ರೀತಿ ಇಂದು ಸಾಮಾಜಿಕ ಜಾಲತಾಣಗಳ ದುರ್ಬಳಕೆಯಾಗುತ್ತಿದೆ. ಮೊಬೈಲ್ ಬಳಕೆ ನಿಷೇಧ ನಿರ್ಧಾರ ಕೈಗೊಂಡರೆ ಮಕ್ಕಳು ತರಗತಿಗಳಿಗೆ ಮೊಬೈಲ್ ತರಬೇಕಾ? ಬೇಡ್ವಾ? ಇದರಿಂದ ಆಗುವ ಪ್ರತಿಕೂಲಗಳೇನು? ನಿರ್ಬಂಧ ವಿಧಿಸುವುದಾದರೆ ಏನೆಲ್ಲಾ ಮಾಡಬಹುದು ಎಂಬುದರ ಚರ್ಚಿಸಿ ಎಲ್ಲರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ತಳೆಯಲಾಗುವುದು ಎಂದೂ ತಿಳಿಸಿದರು.

