ಹೊಸ ಜಾತಿ ಸಮೀಕ್ಷೆಗೆ ವಿರೋಧ; ಕಾಂತರಾಜ್ ವರದಿ ಜಾರಿಗೆ ಹಿಂದುಳಿದ ಸಮುದಾಯಗಳ ಆಗ್ರಹ

Most read

ಬೆಂಗಳೂರು: ಸಮಾಜಿಕ ಮತ್ತು ಶೈಕ್ಷಣಿಕ ಮರು  ಸಮೀಕ್ಷೆ ಕುರಿತಂತೆ ಕರ್ನಾಟಕ ಶೋಷಿತ ಸಮುದಾಯ ಒಕ್ಕೂಟದ ವತಿಯಿಂದ ಅಹಿಂದ ಮುಖಂಡರ ಮಹಾಸಭೆಯನ್ನು ಬಂಜಾರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಮಹಾ ಒಕ್ಕೂಟದ ಪ್ರಧಾನ ಸಂಚಾಲಕರಾದ ರಾಮಚಂದ್ರಪ್ಪ, ಅನಂತ್ ನಾಯ್ಕ, ಎಣ್ಣೆಗೆರೆ ವೆಂಕಟರಾಮಯ್ಯ, ಆದರ್ಶ ಯಲ್ಲಪ್ಪ, ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಗೋಪಾಲ್, ದಾವಣಗೆರೆ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ವಿನಯ್ ಕುಮಾರ್, ಕುರುಬರ ಸಂಘದ ಅಧ್ಯಕ್ಷರಾದ ಈರಣ್ಣ, ರಾಮಕೃಷ್ಣಪ್ಪ, ಈಡಿಗ ಸಮಾಜದ ಮುಖಂಡೆ ನಳಿನಾಕ್ಷಿ ಸಣ್ಣಪ್ಪ ಸೇರಿದಂತೆ ವಿವಿಧ ಹಿಂದುಳಿದ ಸಮಾಜಗಳ ಮುಖಂಡರು ಭಾಗವಹಿಸಿದ್ದರು.

 ವಿಧಾನ ಪರಿಷತ್ ಸದಸ್ಯ  ನಾಗರಾಜ್ ಯಾದವ್ ಮಾತನಾಡಿ,ಸಮಾಜಿಕ ಮತ್ತು ಆರ್ಥಿಕ ಮರು ಸಮೀಕ್ಷೆ ವಿಚಾರದಲ್ಲಿ ನಮ್ಮ ಹಿಂದುಳಿದ ಸಮಾಜಗಳು ಒಟ್ಟಾಗಿ ಅಂತರಿಕವಾಗಿ ಬಗೆಹರಿಸಿಕೊಳ್ಳಬೇಕಾಗಿದೆ,ಕಾಂತರಾಜ್ ಆಯೋಗ ವರದಿಯನ್ನು ಜಾರಿ ತರುವಂತೆ ಕಾಂಗ್ರೆಸ್ ಹೈಕಮಾಂಡ್ ಮುಖಂಡರಿಗೆ ಅರಿವು ಮೂಡಿಸಬೇಕಾಗಿದೆ.ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗಗಳ ಏಳಿಗೆ ಕುರಿತ ಬದ್ಧತೆ ಇದೆ ಎಂದರು.

ಪ್ರಧಾನ ಸಂಚಾಲಕರಾದ ರಾಮಚಂದ್ರಪ್ಪ, ಅನಂತ್ ನಾಯ್ಕ್  ಮಾತನಾಡಿ, ಯಾವುದೋ ಒಂದು ಸಮುದಾಯವನ್ನು ಒಲೈಕೆ ಮಾಡಿಕೊಳ್ಳಲು ಇಡೀ ಹಿಂದುಳಿದ ಸಮುದಾಯದ ಆಶಯಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಇರುವ ವರದಿ ತಿರಸ್ಕರಿಸಿ ಮರು ಸಮೀಕ್ಷೆ ಮಾಡಲು ಹೊರಟಿರುವುದೂ ಸರಿಯಲ್ಲ. ಈ ಕುರಿತು ಹಿಂದುಳಿದ ವರ್ಗಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ವಿವಿಧ ಜಿಲ್ಲೆಗಳಲ್ಲಿ ಮುಂದಿನ ಹೋರಾಟ ನಡೆಸುವ ಬಗ್ಗೆ ಚರ್ಚೆ ನಡೆಸಲಾಗುವುದು. ಯಾರು ಯಾರು ಈ ವರದಿಯನ್ನು ವಿರೋಧ ಮಾಡಿದ್ದಾರೋ ಅವರಿಗೆ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದರು.

ಮುಖ್ಯಮಂತ್ರಿಗಳಿಗೆ ಈ ಕುರಿತು ಮನವಿ ಮಾಡಿ ಕಾಂತರಾಜ್ ವರದಿ ಬಿಡುಗಡೆ ಮಾಡುವಂತೆ ಮನವಿ ಮಾಡೋಣ.‌ ಜಾರಿಗಿಂತ ಮುಂಚೆ ಚರ್ಚೆಗೆ ಅವಕಾಶ ಕೊಡೋಣ. ನಮಗೆ ಯಾವುದೇ ರೀತಿಯ ಹೈಕಮಾಂಡ್ ಇಲ್ಲ. ಸಂವಿಧಾನವೇ ನಮಗೆ ಹೈಕಮಾಂಡ್. ಕಾಂಗ್ರೆಸ್ ಪಕ್ಷಕ್ಕೆ ಮೇಲ್ವರ್ಗದವರ ಶೇ.10 ರಷ್ಟು ಮತಗಳು ಬರುವುದಿಲ್ಲ. ನಿಜವಾಗಿ ಹಿಂದುಳಿದ ವರ್ಗದವರೇ ಕಾಂಗ್ರೆಸ್‌ ಮತದಾರರು. ಇರುವ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಮುಂದುವರೆಯಬೇಕು. ಅವರ ಕನಸಿನ ಯೋಜನೆಗಳು ಜಾರಿಯಾಗಬೇಕು. ಮರು ಸಮೀಕ್ಷೆ ಕೈ ಬಿಡುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ಪತ್ರ ಬರೆಯೋಣ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ಕುರಿತು ಹೋರಾಟ ಮಾಡೋಣ ಎಂದರು.

ವಿನಯ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಹಿಂದುಳಿದವರ ಹೆಸರು ಹೇಳಿಕೊಂಡು, ಅವರಿಂದ ಮತ ಪಡೆದು ಅಧಿಕಾರಕ್ಕೆ ಬಂದಿದೆ. ಪ್ರಸ್ತುತ ಹಿಂದುಳಿದ ವರ್ಗದವರ ಏಳಿಗೆಗೆ ಸಂಬಂಧಿಸಿದ ಸಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯನ್ನು ಎರಡು ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿದು ಜಾರಿ ತರದೇ ಕಳ್ಳಾಟವಾಡುತ್ತಿದೆ. ಈ ಕುರಿತಂತೆ ಹೋಬಳಿ,ಗ್ರಾಮ ಮಟ್ಟದಲ್ಲಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.

ವಿವಿಧ  ಹಿಂದುಳಿದ ಸಮಾಜದ ಮುಖಂಡರು ಮಾತನಾಡಿ, ಸಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಮರು ಸಮೀಕ್ಷೆ ನಡೆಸಬಾರದು,ಕಾಂತರಾಜ್ ಆಯೋಗ ವರದಿಯನ್ನು ಜಾರಿಗೊಳಿಸುವಂತೆ ರಾಜ್ಯದೆಲ್ಲಡೆ ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದರು.

More articles

Latest article