ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆತ: ಕ್ಷಮೆ ಯಾಚಿಸಿದ ಬಿಹಾರ ಯುವತಿ

Most read

ಬೆಂಗಳೂರು: ತನ್ನ ದ್ವಿಚಕ್ರ ವಾಹನಕ್ಕೆ ಆಟೋ ತಗುಲಿತು ಎಂದು ಆಟೋಚಾಲಕನಿಗೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ ಬಿಹಾರ ಮೂಲದ ಯುವತಿ ತಪೊಪ್ಪಿಕೊಂಡು ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾರೆ.

ಎರಡು ದಿನಗಳ ಹಿಂದೆ ಬೆಳ್ಳಂದೂರು ವೃತ್ತದಲ್ಲಿ ಈ ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕರಿಂದ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಯುವತಿಗೆ ಬೆಳ್ಳಂದೂರು ಪೊಲೀಸರು ನೋಟೀಸ್‌‍ ನೀಡಿದ್ದರು. ಈ ಹಿನ್ನಲೆಯಲ್ಲಿ ಠಾಣೆಗೆ ಬಂದ ಯುವತಿ ಮತ್ತು ಆಕೆಯ ಪತಿ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮಿಸಿ ತಪ್ಪಾಯಿತು ಎಂದು ಕೇಳಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದೇವೆ. ನಗರದ ಜನರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಕನ್ನಡಿಗರ ಬಗ್ಗೆ ಗೌರವವಿದೆ ಎಂದು ದಂಪತಿ ಹೇಳಿದ್ದಾರೆ. ಗರ್ಭಿಣಿಯಾಗಿರುವ ಈ ಯುವತಿ ಆಸ್ಪತ್ರೆಗೆ ಹೋಗಿ ಮರಳಿ ಬರುವಾಗ ಈ ಘಟನೆ ನಡೆದಿದೆ. ಕೋಪದಲ್ಲಿ ಚಪ್ಪಲಿಯಿಂದ ಹೊಡೆದಿದ್ದೇನೆ ಎಂದು ತಪ್ಪು ಒಪ್ಪಿಕೊಂಡ ಹಿನ್ನಲೆಯಲ್ಲಿ ಠಾಣೆ ಜಾಮೀನಿನ ಮೇಲೆ ಯುವತಿಯನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಟೋ ಚಾಲಕ ಲೋಕೇಶ್‌ ಪ್ರತಿಕ್ರಿಯೆ ನೀಡಿ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿರುವುದರಿಂದ ನನಗೆ ತುಂಬಾ ನೋವಾಗಿದೆ. ಯಾವುದೇ ಕಾರಣಕ್ಕೂ ದೂರನ್ನು ವಾಪಸ್‌‍ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಘಟನೆಯಿಂದ ನಾನು ಎರಡು ದಿನ ಅನುಭವಿಸಿದ ಯಾತನೆ ಯಾರಿಗೂ ಬೇಡ. ಯಾರಿಗೂ ಮುಖ ತೋರಿಸಲು ಆಗಲಿಲ್ಲ, ಯಾವುದೇ ಕಾರಣಕ್ಕೂ ಪ್ರಕರಣದಿಂದ ಹಿಂದೆ ಸರಿಯಲ್ಲ ಎಂದು ಆಟೋ ಚಾಲಕ ಲೋಕೇಶ್‌ ತಿಳಿಸಿದ್ದಾರೆ.

More articles

Latest article