ಕನ್ನಡಿಗರ ಮೇಲೆ ದೌರ್ಜನ್ಯ: ಗೋವಾ ಸರ್ಕಾರ ವಜಾಗೊಳಿಸಲು ಕರವೇ ನಾರಾಯಣಗೌಡ ಆಗ್ರಹ

Most read

ಗೋವಾ ಸರ್ಕಾರ ಮತ್ತೆ ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕೆಲೆಬ್ಬಿಸುತ್ತಿದ್ದು, ಇಡೀ ಗೋವಾದಲ್ಲಿ ಕನ್ನಡಿಗರು ಯಾರೂ ಇರಬಾರದು ಎಂಬ ತೀರ್ಮಾನಕ್ಕೆ ಬಂದಂತಿದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾಗೊಳಿಸಿ, ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಸರಣಿ ಪೋಸ್ಟ್ ಮಾಡಿರುವ ಅವರು, ಉತ್ತರ ಗೋವಾದ ಸಂಗೋಲ್ಡಾ ಪ್ರದೇಶದಲ್ಲಿ ನಿನ್ನೆ 15 ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ಜೆಸಿಬಿ ಬಳಿಸಿ ಧ್ವಂಸಗೊಳಿಸಲಾಗಿದೆ, ಅವರಿಗೆ ಅನ್ನ ನೀರು ಸೂರು ಇಲ್ಲದಂತೆ ಮಾಡಲಾಗಿದೆ. ಕನ್ನಡಿಗರ ಮನಸು ಭಾರವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ನಾಲ್ಕು ದಶಕಗಳಿಂದ ಆ ಪ್ರದೇಶದಲ್ಲಿ ವಾಸವಾಗಿದ್ದ ಕನ್ನಡಿಗರನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಹದಿನೈದು ಕನ್ನಡಿಗರ ಕುಟುಂಬಗಳು ಬೀದಿಪಾಲಾಗಿವೆ. ಸಂತ್ರಸ್ಥ ಕುಟುಂಬಗಳಿಗೆ ಯಾವುದೇ ಪುನರ್ವಸತಿ ನೀಡಲಾಗಿಲ್ಲ. ಸಿರಿಯಾ, ಲೆಬೆನಾನ್ ದೇಶಗಳಲ್ಲಿ ನಡೆಯುತ್ತಿರುವುದು ಗೋವಾದಲ್ಲಿ ನಡೆಯುತ್ತಿದೆ.

ಗೋವಾದಲ್ಲಿ ಹೀಗೆ ಕನ್ನಡಿಗರನ್ನು ಗುರಿಯಾಗಿಟ್ಟುಕೊಂಡು ಅಲ್ಲಿನ ಸರ್ಕಾರ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆರನೇ ಬಾರಿ ಇಂಥ ದುಷ್ಕೃತ್ಯವನ್ನು ಎಸಗುತ್ತಿದೆ. ಇದು ನಿಸ್ಸಂಶಯವಾಗಿ ಜನಾಂಗೀಯ ದ್ವೇಷದ ಕುಕೃತ್ಯ. ಹೀಗಾಗಿ ಗೋವಾ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಭಾರತದ ಸಂವಿಧಾನದ 29 ಮತ್ತು 30ನೇ ವಿಧಿಗಳು ಸ್ಪಷ್ಟವಾಗಿ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತವೆ. ಗೋವಾದಲ್ಲಿ ನಡೆಯುತ್ತಿರುವುದು ಸಂವಿಧಾನ ವಿರೋಧಿ ಕಾರ್ಯಾಚರಣೆ. ದೇಶದ ಯಾವುದೇ ಭಾಗದಲ್ಲಿ ಸರ್ಕಾರವೇ ಮುಂದೆ ನಿಂತು ಭಾಷಾ ಸಮುದಾಯವನ್ನು ಬೀದಿಗೆ ತಳ್ಳಿದ ಉದಾಹರಣೆ ಇಲ್ಲ.

2005ರಲ್ಲಿ ವಾಸ್ಕೋದ ಬೈನಾದಲ್ಲಿದ್ದ 1,162 ಕನ್ನಡಿಗ ಕುಟುಂಬಗಳನ್ನು ಬೀದಿಪಾಲು ಮಾಡಲಾಯಿತು. 2014ರಲ್ಲಿ 70 ಕುಟುಂಬ, 2015ರಲ್ಲಿ 157 ಕುಟುಂಬಗಳನ್ನು ಬೈನಾದಲ್ಲಿಯೇ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು. 2017ರಲ್ಲಿ ಮಂಗೂರ್ ಹಿಲ್ಸ್ ನಲ್ಲಿ ವಾಸಿಸುತ್ತಿದ್ದ 211 ಕುಟುಂಬಗಳನ್ನು, 2019ರಲ್ಲಿ ಝರಿ ಪ್ರದೇಶದಲ್ಲಿದ್ದ 62 ಕುಟುಂಬಗಳನ್ನು ಗೋವಾ ಸರ್ಕಾರ ಒಕ್ಕಲೆಬ್ಬಿಸಿತ್ತು.

ಗೋವಾ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮೇಲಿಂದ ಮೇಲೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವುದೇ ಅದರ ದೊಡ್ಡ ಅಜೆಂಡಾ ಆಗಿದೆ. ಹೀಗಾಗಿ ಈ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.

More articles

Latest article