ಆನೇಕಲ್ ತಾಲ್ಲೂಕಿನ ಹಳೇ ಚಂದಾಪುರದಲ್ಲಿ ಸೂಟ್ಕೇಸ್ನಲ್ಲಿ ಬಾಲಕಿಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಸೂರ್ಯಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಆನೇಕಲ್: ತಾಲ್ಲೂಕಿನ ಹಳೆ ಚಂದಾಪುರದ ರೈಲ್ವೆ ಸೇತುವೆ ಬಳಿ ಅನಾಥವಾಗಿ ಬಿದ್ದಿದ್ದ ಸೂಟ್ ಕೇಸ್ ನಲ್ಲಿ ಸುಮಾರು 16 ವಯಸ್ಸಿನ ಬಾಲಕಿಯ ಶವ ಪತ್ತೆಯಾಗಿದೆ.
ಬಾಲಕಿಯ ಕೈಕಾಲು ಮಡಚಿ ಸೂಟ್ ಕೇಸ್ ನಲ್ಲಿ ತುಂಬಲಾಗಿದ್ದು, ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ಬಾಲಕಿಯನ್ನು ಬೇರೆ ಎಲ್ಲೋ ಕೊಲೆ ಮಾಡಿ ಬಳಿಕ ಶವವನ್ನು ಸೂಟ್ ಕೇಸ್ ನಲ್ಲಿಟ್ಟು ರೈಲಿನಿಂದ ಎಸೆದಿರಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಮತ್ತು ಸೂರ್ಯ ಸಿಟಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ನೀಲಿ ಬಣ್ಣದ ಸೂಟ್ಕೇಸ್ ತೆರೆದುಕೊಂಡಿತ್ತು. ಅದರಲ್ಲಿ ಬಾಲಕಿಯ ಮುಖ ಕಂಡು ಸ್ಥಳೀಯರು ಸೂರ್ಯಸಿಟಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸೂರ್ಯಸಿಟಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸಂಜೀವ್ ಮಹಾಜನ್ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸೂಟ್ ಕೇಸ್ ತೆರೆದಾಗ ಕೈಕಾಲು ಮಡಚಿ ತುರುಕಿದ್ದ ಬಾಲಕಿಯ ಶವ ಕಂಡು ಬಂದಿದೆ. ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಇನ್ ಸ್ಟೆಕ್ಟರ್ ಮಹಾಜನ್ ತಿಳಿಸಿದ್ದಾರೆ.