ಬೆಂಗಳೂರು: ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಸಂಬಂಧಪಟ್ಟಂತೆ ಈವರೆಗೂ ಯಾವುದೇ ಆಕ್ಷೇಪ ವ್ಯಕ್ತಪಡಿಸದ ಮಹಾರಾಷ್ಟ್ರ ಸರ್ಕಾರ ದೀಗ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಮೇ 9 ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಆಲಮಟ್ಟಿ ಅಣೆಕಟ್ಟು ಎತ್ತರವನ್ನು 519 ಮೀಟರ್ನಿಂದ 524.63 ಮೀಟರ್ಗೆ ಹೆಚ್ಚಿಸುವುದರಿಂದ ಮಹಾರಾಷ್ಟ್ರದಲ್ಲಿ ನೆರೆ ಪರಿಸ್ಥಿತಿ ಉಂಟಾಗುತ್ತದೆ. ಸಾಂಗ್ಲಿ, ಕೊಲ್ಲಾಪುರಕ್ಕೆ ತೊಂದರೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಆಲಮಟ್ಟಿ ಅಣೆಕಟ್ಟು ಎತ್ತರ ಕಾಮಗಾರಿ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದರು.
ಕೃಷ್ಣ ನ್ಯಾಯಾಧೀಕರಣದ ತೀರ್ಪಿನಲ್ಲಿ ಆಲಮಟ್ಟಿ ಎತ್ತರಕ್ಕೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ತನ್ನ ಪಾಲಿನ ನೀರನ್ನು ಬಳಕೆ ಮಾಡಲು ಮಹಾರಾಷ್ಟ್ರದಿಂದ ಇದುವರೆಗೂ ಯಾವುದೇ ಆಕ್ಷೇಪಣೆಗಳು ಇರಲಿಲ್ಲ. 2010 ಹಾಗೂ 2013 ರಲ್ಲಿನ ತೀರ್ಪುಗಳಿಗೂ ಮಹಾರಾಷ್ಟ್ರ ತಗಾದೆ ತೆಗೆದಿರಲಿಲ್ಲ. ನ್ಯಾಯಾಧೀಕರಣದ ತೀರ್ಪನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ನ್ಯಾಯಾಲಯಕ್ಕೆ ಮಹಾರಾಷ್ಟ್ರ ಸರ್ಕಾರವೇ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಆಲಮಟ್ಟಿ ಎತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದು ಆಘಾತಕಾರಿಯಾಗಿದೆ ಎಂದರು.
ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆಗೆ ಬಾಧ್ಯಸ್ಥ ರಾಜ್ಯಗಳ ಜೊತೆಗೆ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ರವರಿಗೆ ತಾವು ಮತ್ತು ಮುಖ್ಯಮಂತ್ರಿ ದೆಹಲಿಗೆ ಹೋಗಿದ್ದಾಗ ಮನವಿ ಸಲ್ಲಿಸಿದ್ದೆವು. ಅದರಂತೆ ಅಂತರರಾಜ್ಯ ಸಭೆಗಳೂ ನಿಗದಿಯಾಗಿದ್ದವು. ಅದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಆಂತರಿಕ ಸಭೆ ನಡೆಸಲಾಗಿತ್ತು. ಸಂಬಂಧಪಟ್ಟ ಜಿಲ್ಲೆಗಳ ಜನ ಪ್ರತಿನಿಧಿಗಳ ಜೊತೆಗೂ ಚರ್ಚೆ ನಡೆಸಲಾಗಿತ್ತು. ಸಭೆಯಲ್ಲಿ ಪಾಲ್ಗೊಳ್ಳಲು ನಮ್ಮ ಅಧಿಕಾರಿಗಳು ದೆಹಲಿಗೆ ಹೋಗಿದ್ದರು. ನಾವು ವಿಮಾನ ಏರಬೇಕು ಎಂಬ ಹಂತದಲ್ಲಿ ಸಭೆ ರದ್ದಾಗಿದೆ ಎಂಬ ಸಂದೇಶ ಬಂದಿತು ಎಂದರು.
ಆಲಮಟ್ಟಿ ಅಣೆಕಟ್ಟು ಎತ್ತರ ನಮ ಹಕ್ಕು. ಇದಕ್ಕೆ ಅಡ್ಡಿಪಡಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಮಹಾರಾಷ್ಟ್ರಕ್ಕೆ ಆಂತರಿಕವಾಗಿ ತೊಂದರೆಯಾಗುತ್ತಿದ್ದರೆ ಅದನ್ನು ಅವರು ಸರಿಪಡಿಸಿಕೊಳ್ಳಬೇಕು. ನಮ್ಮ ಯೋಜನೆಗೆ ಅಡ್ಡಿಪಡಿಸಬಾರದು ಎಂದು ವಿನಮ್ರವಾಗಿ ಮನವಿ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ಹೇಮಾವತಿ ರಾಜಕೀಯ :
ಹೇಮಾವತಿ ಲಿಂಕ್ ಕೆನಾಲ್ ಯೋಜನೆಯಲ್ಲಿ ಅನಗತ್ಯವಾದ ರಾಜಕೀಯ ನಡೆಯುತ್ತಿದೆ ಎಂದು ಶಿವಕುಮಾರ್ ಆಕ್ಷೇಪಿಸಿದ್ದಾರೆ. ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೂಪುಗೊಂಡ ಯೋಜನೆ ಇದು. ಅನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ತಡೆ ನೀಡಿದರು. ಆರಂಭದಲ್ಲಿ ಯೋಜನಾ ಗಾತ್ರ 600 ಕೋಟಿ ರೂ. ಇತ್ತು. ವಿಳಂಬದಿಂದಾಗಿ 400 ಕೋಟಿ ರೂ. ಹೆಚ್ಚಾಗಿ ಈಗ 1000 ಕೋಟಿ ರೂ. ತಲುಪಿದೆ. ರಾಜ್ಯಸರ್ಕಾರ ಈಗಾಗಲೇ 400 ಕೊಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ವಿವರಿಸಿದರು.
ತುಮಕೂರು ಜಿಲ್ಲೆಯ ಶಾಸಕರಾದ ಸುರೇಶ್ ಗೌಡ ಹಾಗೂ ಎಂ.ಪಿ.ಕೃಷ್ಣಪ್ಪ ಅವರ ಸಲಹೆಯಂತೆ ತಾಂತ್ರಿಕ ಸಮಿತಿಯನ್ನು ರಚಿಸಲಾಗಿತ್ತು. ವರದಿ ಆಧರಿಸಿ ಈಗ ನಾವು ಯೋಜನೆ ಕೈಗೊಳ್ಳುತ್ತಿದ್ದೇವೆ. ಕುಣಿಗಲ್ ತಾಲೂಕಿಗೆ 2014 ರಿಂದಲೂ ಹೇಮಾವತಿಯಿಂದ ಹಂಚಿಕೆಯಾಗಿದ್ದ 2 ಟಿಎಂಸಿಯಲ್ಲಿ ಶೇ.10 ರಷ್ಟು ಕೂಡ ಹರಿದಿಲ್ಲ. ನಿರಂತರವಾಗಿ ಅನ್ಯಾಯವಾಗಿದೆ. ಕುಣಿಗಲ್ಗೆ 3.3 ಟಿಎಂಸಿ ನೀರು ಹೋಗಬೇಕು. ಮಾಗಡಿಗೆ 0.6 ಟಿಎಂಸಿ ತಲುಪಬೇಕು. ಈ ಎಲ್ಲಾ ತಾಲೂಕುಗಳು ಕಾವೇರಿ ನದಿಪಾತ್ರದಲ್ಲಿಯೇ ಬರುತ್ತದೆ. ಇದು ಅಂತಾರಾಜ್ಯ ನದಿ ವಿವಾದ ಅಲ್ಲ ಎಂದು ತಿರುಗೇಟು ನೀಡಿದರು.
ತುಮಕೂರಿಗೆ ಕೃಷ್ಣಾ ನದಿ ಪಾತ್ರದಿಂದ ನೀರು ತರಲಾಗಿದೆ. ಎತ್ತಿನಹೊಳೆ ಆರಂಭದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಮಾತ್ರ ಸೀಮಿತವಾಗಿತ್ತು. ಯೋಜನೆಯಲ್ಲಿ ಬದಲಾವಣೆ ಮಾಡಿ ತುಮಕೂರು, ಚಿಕ್ಕನಾಯಕನಹಳ್ಳಿ, ಶಿರಾ ತಾಲೂಕಿನ ಕೆರೆಗಳಿಗೂ ತುಂಬಿಸಲು ಮಾರ್ಪಾಡು ಮಾಡಲಾಗಿದೆ. ಅದೇ ರೀತಿ ಕುಣಿಗಲ್, ಮಾಗಡಿ ತಾಲೂಕುಗಳಿಗೆ ನೀರು ಬೇಡವೇ? ಎಂದು ಪ್ರಶ್ನಿಸಿದರು.
ರಾಮನಗರಕ್ಕೆ ಸಾಕಷ್ಟು ನೀರಿದೆ. ಹೇಮಾವತಿಯಿಂದ ಅಲ್ಲಿಗೆ ನೀರು ಹರಿಯುವುದು ಬೇಕಿಲ್ಲ. ಅನಗತ್ಯವಾಗಿ ರಾಜಕಾರಣ ಮಾಡುವುದು ಅಮಾಯಕ ಸ್ವಾಮೀಜಿಗಳನ್ನು ಪ್ರತಿಭಟನೆಗೆ ಕೂರಿಸುವುದು, ಸರ್ಕಾರವನ್ನು ಬ್ಲಾಕ್ಮಮೇಲ್ ಮಾಡುವುದು ಸರಿಯಲ್ಲ ಎಂದರು.