ನವದೆಹಲಿ: ದೇಶಾದ್ಯಂತ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ದಾಖಲಿಸಿಕೊಂಡಿದೆ. 2018ರಲ್ಲಿಯೇ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಆದೇಶಿಸಿತ್ತು.
ಆದರೂ ಅನೇಕ ಠಾಣೆಗಳಲ್ಲಿ ಸಿಸಿಟಿವಿಗಳು ಸಮರ್ಪಕವಾಗಿ ಕಾರ್ಯ ನಿರ್ಹಿಸುತ್ತಿರಲಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸದಂತೆ ಈ ಆದೇಶ ಹೊರಡಿಸಿತ್ತು. ಪೊಲೀಸ್ ಠಾಣೆಯ ಪ್ರವೇಶ ದ್ವಾರ, ಹೊರ ಹೋಗುವ ಮಾರ್ಗ, ಕಾರಿಡಾರ್, ಮುಖ್ಯ ಗೇಟ್, ಲಾಕ್ ಅಪ್, ಸ್ವಾಗತಕಾರರ ಟೇಬಲ್ ಸೇರಿದಂತೆ ಇಡೀ ಠಾಣೆಯ ಪ್ರತಿಯೊಂದು ಚಟುವಟಿಕೆಗಳು ಕಾಣುವಂತೆ ಸಿಸಿಟಿವಿ ಅಳವಡಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಜತೆಗೆ ಪ್ರತಿ ಠಾಣೆಗೂ ಇದು ಕಡ್ಡಾಯ ಎಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಕ್ಯಾಮೆರಾಗಳು ರಾತ್ರಿ ಸಮಯದಲ್ಲೂ ಸ್ಪಷ್ಟವಾಗಿ ದಾಖಲಾಗುವ ಗುಣಮಟ್ಟ ಹೊಂದಿರಬೇಕು. ಜತೆಗೆ ಧ್ವನಿ ಮತ್ತು ವಿಡಿಯೊ ಎರಡೂ ದಾಖಲಾಗಲೇಬೇಕು. ಕನಿಷ್ಠ ಒಂದು ವರ್ಷದ ದೃಶ್ಯಗಳನ್ನು ದಾಖಲಿಸುವ ಸಾಮರ್ಥ್ಯದ ತಂತ್ರಜ್ಞಾನ ಹೊಂದಿರುವ ಸಾಧನಗಳನ್ನು ಅಳವಡಿಸಬೇಕು ಎಂದೂ ಸೂಚಿಸಿತ್ತು.
2020ರ ಡಿಸೆಂಬರ್ನಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಎನ್ಐಎ ಕಚೇರಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ನಿರ್ದೇಶನ ನೀಡಿತ್ತು.
ಕಳೆದ ಎಂಟು ತಿಂಗಳಲ್ಲಿ ಪೊಲೀಸರ ವಶದಲ್ಲಿದ್ದ 11 ಮಂದಿ ಮೃತಪಟ್ಟಿದ್ದಾರೆ. ಸಂಬಂಧಪಟ್ಟ ಈ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎನ್ನುವುದು ಕೋರ್ಟ್ ಗಮನಕ್ಕೆ ಬಂದಿದೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.