ಬೆಂಗಳೂರು : ಮುಖ್ಯಮಂತ್ರಿ ಕಚೇರಿಯ ಮಾಧ್ಯಮ ಕಾರ್ಯದರ್ಶಿ-3 ಹುದ್ದೆಗೆ ನೇಮಕಗೊಂಡಿದ್ದ ರಾಘವೇಂದ್ರ ಭಟ್ ಅವರ ನೇಮಕಾತಿ ಆದೇಶವನ್ನು ಕರ್ನಾಟಕ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಅಧಿಕೃತ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಜುಲೈ 8ರಂದು ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಕ ಮಾಡಿತ್ತು. ಹಿರಿಯ ಪತ್ರಕರ್ತರಾದ ಪಿ. ತ್ಯಾಗರಾಜ್ ಅವರನ್ನು ಮಾಧ್ಯಮ ಕಾರ್ಯದರ್ಶಿ-1, ಆರ್. ಜಯಪ್ರಕಾಶ್ ಅವರನ್ನು ಮಾಧ್ಯಮ ಕಾರ್ಯದರ್ಶಿ-2 ಹಾಗೂ ರಾಘವೇಂದ್ರ ಭಟ್ ಅವರನ್ನು ಮಾಧ್ಯಮ ಕಾರ್ಯದರ್ಶಿ-3 ಆಗಿ ನೇಮಕ ಮಾಡಲಾಗಿತ್ತು.
ಆದರೆ, ರಾಘವೇಂದ್ರ ಭಟ್ ಅವರ ನೇಮಕಾತಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. 2021ರಲ್ಲಿ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ರೀತಿಯ ಪೋಸ್ಟ್ ಮಾಡಿದ್ದರು ಎನ್ನಲಾದ ಹಳೆಯ ಪೋಸ್ಟ್ಗಳು ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಸರ್ಕಾರ ಅವರ ನೇಮಕಾತಿ ಆದೇಶವನ್ನು ಅಮಾನತುಗೊಳಿಸಿ ಹೊಸ ಅಧಿಸೂಚನೆ ಹೊರಡಿಸಿದೆ.

