ಬೆಂಗಳೂರು: ಎಟಿಎಂಗೆ ತುಂಬಬೇಕಿದ್ದ ರೂ. 7.11 ಕೋಟಿ ಹಣವನ್ನು ದರೋಡೆ ಮಾಡಲು ಓರ್ವ ಪೋಲೀಸ್ ಪೇದೆ ಮತ್ತು ಸಿಎಂಸಿ ಕಂಪನಿ ಮಾಜಿ ಉದ್ಯೋಗಿ ಪ್ರಮುಖ ಸೂತ್ರದಾರಿಗಳು ಎಂಬ ಮಾಹಿತಿ ಹೊರಬಿದ್ದಿದೆ. ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ಮತ್ತು ಸಿಎಂಎಸ್ ಮಾಜಿ ಉದ್ಯೋಗಿ ಝೇವಿಯರ್ ದರೋಡೆಗೆ ಸಂಚು ರೂಪಿಸಿದ್ದರು. ಈಗಾಗಲೇ ಇಬ್ಬರನ್ನೂ ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಅಣ್ಣಪ್ಪ ಹೊಯ್ಸಳ ವಾಹನದಲ್ಲಿ ಗಸ್ತು ಕೆಲಸ ಮಾಡುತ್ತಿದ್ದ. ಅಲ್ಲಿ ಅಷ್ಟೇನೂ ಕೆಲಸ ಇಲ್ಲದ ಈತ ಝೇವಿಯರ್ ಜತೆ ಕಾಲ ಕಳೆಯುತ್ತಿದ್ದ. ಈ ವೇಳೆ ಝೇವಿಯರ್ ಎಟಿಎಂಗಳಿಗೆ ಹೇಗೆ ಹಣ ವರ್ಗಾಯಿಸಲಾಗುತ್ತದೆ ಎಂದು ವಿವರಿಸಿದ್ದ. ಈ ಆಧಾರದಲ್ಲಿ ಇಬ್ಬರೂ ಹಣ ದರೋಡೆ ಮಾಡಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ಇವರು ತುಂಬಾ ಬುದ್ದಿವಂತಿಕೆಯಿಂದಲೇ ಯೋಜನೆ ರೂಪಿಸಿದ್ದರು. ಇಬ್ಬರೂ ದರೋಡೆ ಸ್ಥಳಕ್ಕೆ ಹೋಗದೆ ಕುಳಿತಲ್ಲಿಂದಲೇ ದರೋಡೆಯನ್ನು ನಿಯಂತ್ರಿಸುತ್ತಿದ್ದರು. ಹೇಗೆ ಹಣ ಲಪಟಾಯಿಸಬೇಕು ಮತ್ತು ಪರಾರಿಯಾಗಬೇಕು ಎಂದು ಸಂಚು ರೂಪಿಸಿದ್ದರು. ಇದೀಗ ಪೊಲೀಸರು ಇಬ್ಬರನ್ನೂ ಹೆಡೆಮುರಿ ಕಟ್ಟಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

