ಔರಂಗಾಬಾದ್: ಶಿಕ್ಷಣ, ಆರೋಗ್ಯ, ಉದ್ಯೋಗದಂತಹ ಸಮಸ್ಯೆಗಳಿಂದ ಯುವಕರನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಸಾಮಾಜಿಕ ಮಾಧ್ಯಮದ ಹುಚ್ಚನ್ನು ಹಚ್ಚುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ.
ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಯುಜನಾಂಗ ಸದಾ ಮಾಧ್ಯಮಗಳಲ್ಲಿ ತಲ್ಲೀನರಾಗಿರಬೇಕು ಎಂದು ಮೋದಿ ಬಯಸುತ್ತಾರೆ. ಇದರಿಂದ ಯುವಜನತೆ ಹೆಚ್ಚಿನ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂಬ ನಿರೀಕ್ಷೆ ಅವರದ್ದು ಎಂದು ಟೀಕಿಸಿದ್ದಾರೆ.
ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಪಿಎಂ ಮೋದಿ ಅವರು ರೀಲ್ಸ್, ಇನ್ಸ್ಟಾಗ್ರಾಂ. ಫೇಸ್ಬುಕ್ ನಲ್ಲಿ ಮುಳುಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮೂಳಕ ಅವರು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಕ್ಷೇತ್ರಗಳ ಸಮಸ್ಯೆಗಳಿಗೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡದಂತೆ ಬಯಸುತ್ತಾರೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಇಂಡಿಯಾ’ ಮೈತ್ರಿಯು ಹಿಂದುಳಿದ, ದಲಿತರ ಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಿದೆ. ಬಿಹಾರವನ್ನು ಉತ್ಪಾದನಾ ವಲಯವನ್ನಾಗಿ ಮಾರ್ಪಾಡು ಮಾಡುತ್ತೇವೆ. ನಳಂದದಲ್ಲಿ ಅತ್ಯಾಧುನಿಕ ವಿಶ್ವವಿದ್ಯಾಲಯ ಸ್ಥಾಪಿಸುತ್ತೇವೆ. ಮೇಡ್ ಇನ್ ಬಿಹಾರದ ಮೊಬೈಲ್ ಫೋನ್, ಉಡುಪುಗಳು ದೊರೆಯುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬಿಹಾರದಲ್ಲಿ ಗೆಲುವು ಸಾಧಿಸಲು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ ಕಳ್ಳತನದಲ್ಲಿ ನಿರತರಾಗಿದ್ದಾರೆ ಎಂದೂ ಟೀಕಿಸಿದರು.

