ಬೆಂಗಳೂರು : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪಿಎಂಎವೈ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ಪ್ರಗತಿಯಲ್ಲಿರುವ 1,80,253 ಮನೆಗಳ ಕಾಮಗಾರಿ ಯನ್ನು 2026 ಡಿಸೆoಬರ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ವಿಧಾನಸಭೆಗೆ ತಿಳಿಸಿದ್ದಾರೆ.
ಶಾಸಕ ಸಿದ್ದು ಪಾಟೀಲ್ ಅವರ ಪ್ರೆಶ್ನೆಗೆ ಉತ್ತರಿಸಿದ ಸಚಿವರು, ಫಲಾನುಭವಿಗಳ ವಂತಿಗೆ ಪಾವತಿ ಆಗದ ಕಾರಣ ಯೋಜನೆಗೆ ಸಮಸ್ಯೆ ಉಂಟಾಗಿತ್ತು ಮುಖ್ಯಮಂತ್ರಿ ಯವರಿಗೆ ಸಮಸ್ಯೆ ಮನವರಿಕೆ ಮಾಡಿಕೊಟ್ಟು ಬಡವರ ಮನೆಗೆ ಸರ್ಕಾರವೇ ಫಲಾನುಭವಿಗಳ ವಂತಿಗೆ ಪಾವತಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. 500ಕೋಟಿ ರೂ. ಬಿಡುಗಡೆ ನಂತರ ಮೊದಲ ಹಂತದಲ್ಲಿ 36,789 ಮನೆ ಹಂಚಿಕೆ ಮಾಡಿ ಎರಡನೇ ಹಂತದಲ್ಲಿ 40,345 ಮನೆ ಹಂಚಿಕೆಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು 2026 ರೊಳಗೆ ಪೂರ್ಣ ಗೊಳಿಸಲು ಸೂಚಿಸಿದ್ದು ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅರವಿಂದ್ ಬೆಲ್ಲದ್ ಅವರ ಉಪ ಪ್ರೆಶ್ನೆಗೆ ಉತ್ತರಿಸಿದ ಸಚಿವರು, ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಬಡ ಕುಟುಂಬ ಗಳಿಗೆ 47,870 ಮನೆ ನಿರ್ಮಾಣ ಯೋಜನೆ ಸಹ ಫಲಾನುಭವಿಗಳ ವಂತಿಗೆ ಪಾವತಿ ಆಗದ ಕಾರಣ, ಆ ವಿಚಾರ ಸಹ ಮುಖ್ಯಮಂತ್ರಿ ಯವರ ಗಮನಕ್ಕೆ ತಂದಿದ್ದು, ಸರ್ಕಾರವೇ ವಂತಿಗೆ ಭರಿಸಲು ತಾತ್ವಿಕ ಒಪ್ಪಿಗೆ ದೊರೆತಿದ್ದು ಸಂಪುಟಕ್ಕೆ ತಂದು ಒಪ್ಪಿಗೆ ಪಡೆಯಲಾಗುವುದು. ಆ ಮನೆಗಳನ್ನು ಆದಷ್ಟು ಬೇಗ ಪೂರ್ಣ ಗೊಳಿಸಿ ಹಂಚಿಕೆ ಮಾಡಲಾಗುವುದು ಎಂದು ವಿವರಿಸಿದರು.