ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) 2025- 26 ನೇ ಸಾಲಿನ 5 ಸಾವಿರ ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯಪಾಲರಾದ ಥಾವರಚಂದ್ ಗೆಹ್ಗೋಟ್ ಅವರು ಜುಲೈ 24 ರಂದು ಅನುಮೋದನೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಕೆಕೆಆರ್ ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಧರ್ಮಸಿಂಗ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಳಿಯ ಕ್ರಿಯಾ ಯೋಜನೆಗೆ ಸಂಪೂರ್ಣ ಒಪ್ಪಿಗೆ ಸೂಚಿಸಿ ರಾಜಭವನಕ್ಕೆ ಸದರಿ ಕ್ರಿಯಾ ಯೋಜನೆ ಕಡತ ರವಾನಿಸಿದ್ದರು. ಇದೀಗ ರಾಜ್ಯಪಾಲರು ತ್ವರಿತವಾಗಿ ಅಂಕಿತ ಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ ಕಲ್ಯಾಣ ಭಾಗದಲ್ಲಿ ಮಂಡಳಿ ಇನ್ನೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
2023- 24 ರ ಸಾಲಿನ ಕ್ರಿಯಾ ಯೋಜನೆಗೆ ರಾಜ್ಯಪಾಲರು ಡಿಸೆಂಬರ್ನಲ್ಲಿ ಅನುಮೋದನೆ ನೀಡಿದ್ದರು. ಈ ಸಾಲಿನಲ್ಲಿ ಮಂಜಳಿಯ ಸಭೆ ಆಗಸ್ಟ್ 29 ರಂದು ನಡೆಸಲಾಗಿತ್ತು. ಆದಾಗ್ಯೂ ಮಾರ್ಚ್ 31 ರೊಳಗಾಗಿ ಕೆಕೆಆರ್ಡಿಬಿಯಿಂದ 2009 ಕೋಟಿ ರು ವೆಚ್ಚದಲ್ಲಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸೇರಿದಂತೆ ಹಲವು ರಂಗಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸಲಾಗಿತ್ತು.
2024- 25 ನೇ ಸಾಲಿನಲ್ಲಿ ಜುಲೈ ತಿಂಗಳ 1 ರಂದೇ ಮಂಡಳಿಯ ಸಭೆ ನಡೆಸಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಿದಾಗ ಸದರಿ ಕ್ರಿಯಾ ಯೋಜನೆಗೆ ರಾಜ್ಯಪಾಲರು ಆಗಸ್ಟ್ ತಿಂಗಳಲ್ಲಿ ಅನುಮೋದನೆ ನೀಡಿದ್ದರು.
ಈ ಬಾರಿ 2025- 26 ನೇ ಸಾಲಿನ ಮಂಡಳಿಯ ಸಭೆಯನ್ನು ಶಾಸಕರು, ಸಂಸದರು, ಮಂತ್ರಿಗಳು ಒಳಗೊಂಡೆತೆ ಮೇ ತಿಂಗಳ 10 ರಂದೇ ನಡೆಸಿ ಸಿದ್ಧಪಡಿಸಿದ್ದ 5 ಸಾವಿರ ಕೋಟಿ ರುಪಾಯಿ ಕ್ರಿಯಾ ಯೋಜನೆಗೆ ರಾಜ್ಯಪಾಲರಾದ ಥಾವರಚಂಗ್ ಗೆಲ್ಹೋಟ್ ಅವರು ಜುಲೈ 3 ನೇ ವಾರದಲ್ಲೇ ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಮಂಡಳಿಯಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಕೊಳ್ಳಲು ಹೆಚ್ಚಿನ ಅನುಕೂಲವಾದಂತಾಗಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಡಾ. ನಂಜುಂಡಪ್ಪ ವರದಿಯನ್ವಯವೇ ಸಿಡಿಐ ಸೂಚ್ಯಂಕ ಗುರುತಿಸಿ ಯೋಜನೆ ರೂಪಿಸಲಾಗುತ್ತಿದೆ. ಮೈಕ್ರೋ, ಮ್ಯಾಕ್ರೋ ಯೋಜನೆಯಡಿಯಲ್ಲಿನ ಅನುದಾನ ಹಂಚಿಕೆಯ ವಿವರಗಳಿರುವ ಕ್ರಿಯಾ ಯೋಜನೆಗೆ ರಾಜ್ಯಪಾಲರ ಅಂಕಿತ ದೊರಕಿದೆ.
10. 5. 2025 ರಂದು ಜರುಗಿದ ಕೆಕೆಆರ್ಡಿಬಿ ಮಂಡಳಿಯ ಸಭೆಯಲ್ಲಿನ ಚರ್ಚೆಗಳು, ನಿರ್ಣಯಗಳಂತೆ ಹಾಗೂ ಮಂಡಳಿಯ ನಿಯಮಗಳಂತೆ, 2025– 26 ರ ಮೈಕ್ರೋ, ಮ್ಯಾಕ್ರೋ, ವಿವೇಚನೆ ಅನುದಾನ, ಆಡಳಿತಾತ್ಮಕ ವೆಚ್ಚ ಸೇರಿದಂತೆ ಎಲ್ಲಾ ಹಂತಗಳಲ್ಲಿಯೂ ಅನುದಾನ ಹಂಚಿಕೆ ಮಾಡಿ ರೂಪಿಸಲಾಗಿರುವ ಕ್ರಿಯಾ ಯೋಜನೆ ಜನಸಂಖ್ಯೆಗೆ ಅನುಗುಣವಾಗಿಯೂ ಇದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಮಂಡಿಸಿರುವ ಆಯವ್ಯವಯದಲ್ಲಿನ ಮಿತಿಯಂತೆಯೇ 5 ಸಾವಿರ ಕೋಟಿ ರುಪಾಯಿಗಳಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಆರ್ಥಿಕ ಇಲಾಖೆ 5 ಸಾವಿರ ಕೋಟಿ ರುಪಾಯಿಗಳಿಗೆ ಕ್ರಿಯಾ ಯೋಜನೆ ತಯ್ಯಾರಿಸಲು ಅನುಮತಿ ನೀಡಿತ್ತು. ಅದರಂತೆಯೇ ಮಂಡಳಿಯ ಕ್ರಿಯಾ ಯೋಜನೆಗೆ ಇದೀಗ ರಾಜ್ಯಪಾಲರಿಂದ ಅನುಮೋದನೆ ದೊರಕಿದೆ. ಇದು ಬರುವ ದಿನಗಳಲ್ಲಿ ಮಂಡಳಿಯ ಅನುದಾನ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲು ಅವಕಾಶ ಒದಗಿಸಿದೆ ಎಂದೂ ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕೆಕೆಆರ್ಡಿಬಿ ಕ್ರಿಯಾ ಯೋಜನೆಗೆ ರಾಜ್ಯಪಾಲರು ಈ ಬಾರಿ ಜುಲೈನಲ್ಲೇ ಅಂಕಿತ ಹಾಕುವ ಮೂಲಕ ಕಲ್ಯಾಣ ನಾಡಿನ ಪ್ರಗತಿಗೆ ಹೊಸ ವೇಗ ನೀಡುವ ದಿಶೆಯಲ್ಲಿ ಹೊಸ ಅವಕಾಶ ಒದಗಿಸಿದ್ದಾರೆಂದು ಕೆಕೆಆರ್ಡಿಬಿ ಅಧ್ಯಕ್ಷರಾದ ಡಾ. ಅಜಯ್ ಧರ್ಮಸಿಂಗ್ ಖುದ್ದು ರಾಜಭವನಕ್ಕೆ ತೆರಳಿ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿ ಕೃತಜ್ಞತೆ ಸಲ್ಲಿಸಿದ್ದಾರೆ.