ನವದೆಹಲಿ: ಯೋಗ ಗುರು ಬಾಬಾ ರಾಮದೇವ್, ಇತ್ತೀಚೆಗೆ ಹಮ್ದರ್ದ್ ಕಂಪನಿಯ ಪಾನೀಯ ಕುರಿತು ‘ಶರಬತ್ ಜಿಹಾದ್’ ಎಂದು ಹೇಳಿಕೆ ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್, ‘ಈ ಹೇಳಿಕೆ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ತಂದಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.
ಹಮ್ ದರ್ದ್ ನ್ಯಾಷನಲ್ ಫೌಂಡೇಶನ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್, ‘ಬಾಬಾ ರಾಮ್ದೇವ್ ಅವರ ಹೇಳಿಕೆ ಸಮರ್ಥನೀಯ ಅಲ್ಲವೇ ಅಲ್ಲ. ಜವಬ್ದಾರಿಯಿಂದ ಹೇಳಿಕೆ ನೀಡಲು ನಿಮ್ಮ ಕಕ್ಷಿದಾರರಿಗೆ ತಿಳಿಸಿ, ಇಲ್ಲದಿದ್ದರೆ ನ್ಯಾಯಾಲಯ ಬಲವಾದ ಆದೇಶ ನೀಡಬೇಕಗುತ್ತದೆ’ ಎಂದು ರಾಮ್ ದೇವ್ ಪರ ವಕೀಲರಿಗೆ ನ್ಯಾಯಾಲಯ ಎಚ್ಚರಿಸಿತು.
ಪತಂಜಲಿ ಗುಲಾಬ್ ಶರಬತ್ ಪ್ರಚಾರ ಮಾಡುವಾಗ ಬಾಬಾ ರಾಮ್ ದೇವ್, ಹಮ್ದರ್ದ್ ಅವರು ರೂಹ್ ಅಫ್ಜಾದಿಂದ (ಶರಬತ್) ಗಳಿಸಿದ ಹಣವನ್ನು ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸುತ್ತಿದ್ದಾರೆ ಎಂದು ಹೇಳಿದ್ದರು. ನಂತರ ಯಾವುದೇ ಬ್ರ್ಯಾಂಡ್ ಅಥವಾ ಸಮುದಾಯವನ್ನು ಉದ್ದೇಶಿಸಿ ಹೇಳಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಹಮ್ ದರ್ದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹಟಗಿ ‘ಇದು ಸಮುದಾಯದ ನಡುವೆ ಬಿರುಕು ಸೃಷ್ಟಿಸುವ ಪ್ರಕರಣವಾಗಿದೆ ಮತ್ತು ದ್ವೇಷ ಭಾಷಣವಾಗಿದೆ. ರಾಮ್ ದೇವ್ ಅವರು ‘ಶರಬತ್ ಜಿಹಾದ್’ ಎಂದು ಹೇಳಿದ್ದರು. ಅವರು ಅವರ ಉದ್ಯಮ ನೋಡಿಕೊಳ್ಳಲಿ, ನಮಗೇಕೆ ತೊಂದರೆ ಕೊಡಬೇಕು ಎಂದು ವಾದಿಸಿದರು.