ಬೆಂಗಳೂರು: ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇನಲ್ಲಿ ದ್ವಿಚಕ್ರ ವಾಹನಗಳ ಪ್ರವೇಶವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಷೇಧಿಸಿದೆ. ಮಾರ್ಚ್.2ರಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಸಂಭವಿಸಿದ ಮೊದಲ ಅಪಘಾತದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇನಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಬಳಿ ಬೈಕ್ ಗಳ ಪ್ರವೇಶವನ್ನು ನಿಷೇಧಿಸಲು ಗಸ್ತು ವಾಹನಗಳಿಗೆ ಸೂಚನೆ ನೀಡಲಾಗಿದೆ. ಎಕ್ಸ್ ಪ್ರೆಸ್ ವೇನಲ್ಲಿ ಬೈಕ್ ಗಳ ಬಳಕೆಯನ್ನು ನಿಷೇಧಿಸಲು ಸೈನ್ ಬೋರ್ಡ್ ಗಳ ಅಳವಡಿಕೆ ಕಾರ್ಯ ಶೀಘ್ರ ಆರಂಭವಾಗಲಿದೆ. ದೇಶದ ಯಾವುದೇ ಎಕ್ಸ್ ಪ್ರೆಸ್ವೇಗಳಲ್ಲೂ ಬೈಕ್ ಗಳ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ದ್ವಿಚಕ್ರ ವಾಹನ ಸವಾರರು ಈ ಎಕ್ಸ್ಪ್ರೆಸ್ ವೇ ಬಳಸದಂತೆ ನಾವು ಒತ್ತಾಯಿಸುತ್ತೇವೆ. ಎಕ್ಸ್ ಪ್ರೆಸ್ ವೇಗಳನ್ನು ಗರಿಷ್ಠ 120 ಕಿ.ಮೀ ವೇಗದಲ್ಲಿ ಚಾಲನೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಇತರ ವಾಹನಗಳು ಅತಿ ವೇಗದಲ್ಲಿ ಚಲಿಸುವಾಗ ಬೈಕ್ ಸವಾರರು ಈ ಮಾರ್ಗವನ್ನು ಬಳಸುವುದು ಸುರಕ್ಷಿತವಲ್ಲ. ಬೈಕ್ ಸವಾರರು ತಮ್ಮನ್ನು ಮತ್ತು ಇತರ ವಾಹನ ಸವಾರರನ್ನೂ ಅಪಾಯಕ್ಕೆ ಸಿಲುಕಿಸುವ ಸಾಧ್ಯತೆಗಳಿರುತ್ತವೆ. ಈ ರಸ್ತೆ ಪೂರ್ಣಗೊಂಡಾಗ ವಾಹನ ಚಾಲಕರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದೆವು. ಅನೇಕ ಬೈಕ್ ಸವಾರರು ಹೊಸ ಅನುಭವಕ್ಕಾಗಿ ಈ ಹೈವೇಗೆ ಬಂದಿದ್ದರು. ಜೀವಗಳು ಅಮೂಲ್ಯವಾಗಿರುವುದರಿಂದ ಬೈಕ್ ಸವಾರರು ಈ ರಸ್ತೆಯಲ್ಲಿ ಸಂಚಾರ ಮಾಡಬಾರದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.