ತಿರುವನಂತಪುರ: ಮುಂಜಾನೆ 3 ಗಂಟೆಗೆ ಹುಂಜವೊಂದು ಕೂಗುತ್ತಿದ್ದು ನಿದ್ರೆ ಗ ಮಾಡಲು ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಳ್ಳಿಕಲ್ ಗ್ರಾಮದ ವಯೋವೃದ್ಧರೊಬ್ಬರು ದೂರು ದಾಖಲಿಸಿದ್ದಾರೆ. ಪ್ರತಿದಿನ ಮುಂಜಾನೆ 3 ಗಂಟೆ ಸುಮಾರಿಗೆ ನೆರೆಮನೆಯ ಹುಂಜವೊಂದು ಪಟ್ಟುಬಿಡದೆ ಕೂಗಲು ಪ್ರಾರಂಭಿಸುತ್ತದೆ. ಹುಂಜದ ಗದ್ದಲಕ್ಕೆ ನೆಮ್ಮದಿಯಿಂದ ನಿದ್ರೆ ಮಾಡಲು ಸಾದ್ಯವಾಗುತ್ತಿಲ್ಲ. ಶಾಂತಿಯುತ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಸಂತ್ರಸ್ತ ರಾಧಾಕೃಷ್ಣ ಕುರುಪ್ ದೂರು ದಾಖಲಿಸಿದ್ದರು. ನಮ್ಮ ನೆರೆ ಮನೆಯವರಾದ ಅನಿಲ್ ಕುಮಾರ್ ಅವರಿಗೆ ಸೇರಿದ ಹುಂಜದ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಧಾಕೃಷ್ಣ ಅವರು ಅಡೂರು ಕಂದಾಯ ವಿಭಾಗೀಯ ಕಚೇರಿಯಲ್ಲಿ (ಆರ್ಡಿಒ) ದೂರು ದಾಖಲಿಸಿದ್ದಾರೆ.
ಕಂದಾಯ ಇಲಾಖೆ ಪ್ರಕರಣ ಸಂಬಂಧ ತನಿಖೆ ನಡೆಸಿದ್ದು, ಹುಂಜದಿಂದ ರಾಧಾಕೃಷ್ಣ ಅವರಿಗೆ ನಿಜವಾಗಿಯೂ ತೊಂದರೆಯಾಗುತ್ತಿದೆ ಎಂಬುದು ದೃಢಪಟ್ಟಿದೆ ಎಂದು ಆರ್ಡಿಒ ಅಧಿಕಾರಿಗಳು ವರದಿ ನೀಡಿದ್ದಾರೆ. ಕೂಡಲೇ ಕೋಳಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿರುವ ಆರ್ಡಿಒ ಅಧಿಕಾರಿಗಳು, 14 ದಿನಗಳ ಗಡುವು ನೀಡಿದ್ದಾರೆ.