ಬೆಂಗಳೂರು : ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಬೆಂಗಳೂರಿಗೆ ಉನ್ನತ ಶ್ರೇಣಿ ಬರಲು ಶ್ರಮವಹಿಸಿ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ವತಿಯಿಂದ “ಸ್ವಚ್ಛ ಸರ್ವೇಕ್ಷಣಾ–2026” ಕಾರ್ಯಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ರಾಯಭಾರಿಗಳ ಅಧಿಕೃತವಾಗಿ ಸೇರ್ಪಡೆ ಕಾರ್ಯಕ್ರಮ ನಡೆಯಿತ
ನಗರದಲ್ಲಿ ಉತ್ಪತ್ತಿಯಾಗುವ ಒಟ್ಟು ತ್ಯಾಜ್ಯದ ಶೇ. 45–50 ರಷ್ಟು ಭಾಗವನ್ನು ಈಗಾಗಲೇ ಮರುಬಳಕೆ (ರಿಸೈಕ್ಲಿಂಗ್) ಮಾಡಲಾಗುತ್ತಿದೆ. ತ್ಯಾಜ್ಯವನ್ನು ವಿವಿಧ ರೀತಿಯಲ್ಲಿ ಮರುಬಳಕೆ ಮಾಡುವ ಮೂಲಕ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ಸಂಬಂಧ ಮುಂದಿನ 3–4 ವರ್ಷಗಳಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಣಾಮಕಾರಿ ಮಾರ್ಪಾಡುಗಳನ್ನು ತರಲಾಗುವುದು ಎಂದು ತಿಳಿಸಿದರು.
ಹಸಿ ತ್ಯಾಜ್ಯವನ್ನು ಮೂಲದಲ್ಲಿಯೇ ಗೊಬ್ಬರವಾಗಿಸುವುದು, ಪ್ಲಾಸ್ಟಿಕ್ ಅನ್ನು ವಿದ್ಯುತ್ ಘಟಕಗಳಿಗೆ ಕಳುಹಿಸುವುದು, ಕಡಿಮೆ ಮೌಲ್ಯದ ಪ್ಲಾಸ್ಟಿಕ್ ಅನ್ನು ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸುವ ಮೂಲಕ ಇ.ಪಿ.ಆರ್ ಕ್ರೆಡಿಟ್ ಪಡೆಯಲಾಗುತ್ತಿದೆ. ಇದೇ ಮಾದರಿಯಲ್ಲಿ ವಿವಿಧ ಕಾರ್ಯಗಳಿಗೆ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಮರುಬಳಕೆ ಮಾಡುವ ಮೂಲಕ ಲ್ಯಾಂಡ್ ಫಿಲ್ಗೆ ಕಳುಹಿಸುವ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಲು ಸೂಕ್ತ ಕ್ರಮ ವಹಿಸಲಾಗುವುದೆಂದು ಹೇಳಿದರು.
ಲ್ಯಾಂಡ್ ಫಿಲ್ಗೆ ಹೋಗುವ ಕಾಂಪ್ಯಾಕ್ಟರ್ ಗಳ ಸಂಖ್ಯೆ ಇಳಿಕೆ: ಲ್ಯಾಂಡ್ ಫಿಲ್ ಗೆ ಹೋಗುವ ಕಾಂಪ್ಯಾಕ್ಟರ್ಗಳ ಸಂಖ್ಯೆ 400 ರಿಂದ 260ಕ್ಕೆ ಇಳಿಕೆಯಾಗಿದೆ. ರಾಜಾಜಿನಗರದಲ್ಲಿ ಶೇ.95 ರಷ್ಟು ಕಸ ವಿಂಗಡಣೆ ಆಗುತ್ತಿದೆ. ಚಾಮರಾಜಪೇಟೆಯ ಟ್ರಾನ್ಸಫರ್ ಸ್ಟೇಷನ್ ನಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಡೆಯುತ್ತಿದ್ದು, ನಗರದಲ್ಲಿ ಕಡಿಮೆ ಪ್ರಮಾಣದಲ್ಲಿ ಕಸ ವಿಂಗಡಣೆ ಆಗುತ್ತಿರುವ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಸೂಚಿಸಿದರು.
ರಾಯಭಾರಿಗಳ ನೇಮಕ: ಸ್ವಚ್ಛ ಸರ್ವೇಕ್ಷಣಾ 2025–26ರ ರಾಯಭಾರಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಡಾ: ಮಂಜಮ್ಮ ಜೋಗತಿ, ಚಲನಚಿತ್ರ ನಟರಾದ ಅನಿರುದ್ಧ್ ಜಟ್ಕರ್, ಇಂಡಿಯಾ ರೈಸಿಂಗ್ ಟ್ರಸ್ಟ್ನ ಮುಖ್ಯಸ್ಥರಾದ ಅರುಣ್ ಪೈ, ಸಮಾಜ ಸೇವಕರಾದ ಕೆ.ಎಂ. ನಾಗರಾಜ್, ಲೆಟ್ಸ್ ಬಿ ದಿ ಚೇಂಜ್ ಸಂಸ್ಥೆಯ ಮುಖ್ಯಸ್ಥರಾದ ಅನಿರುದ್ಧ್ ದತ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಅಭಿಲಾಶ್ ನಾಯರ್ ಅವರನ್ನು ರಾಯಭಾರಿಗಳಾಗಿ ನೇಮಿಸಲಾಗಿದೆ.
ಪದ್ಮಶ್ರೀ ಪುರಸ್ಕೃತ ಡಾ. ಮಂಜಮ್ಮ ಜೋಗತಿ, ನಮ್ಮ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ನಗರವನ್ನು ಸ್ವಚ್ಛವಾಗಿಡುವ ಜವಾಬ್ದಾರಿಯನ್ನು ನಾವು ಹೊತ್ತಿರಬೇಕು ಎಂದರು.
ನಟ ಅನಿರುದ್ಧ್ ಜಟ್ಕರ್, ನಗರದಲ್ಲಿ ಉಂಟಾಗುವ ಬ್ಲ್ಯಾಕ್ ಸ್ಪಾಟ್ಗಳು ಅಥವಾ ಸ್ವಚ್ಛತೆಗೆ ಸಂಬಂಧಿತ ಸಮಸ್ಯೆಗಳ ಕುರಿತು ದೂರು ಸಲ್ಲಿಸಿದಾಗ, ಅಧಿಕಾರಿಗಳು ಆದ್ಯತೆಯ ಮೇರೆಗೆ ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸುತ್ತಿರುವುದು ಶ್ಲಾಘನೀಯವಾಗಿದೆ. ನಗರದಲ್ಲಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತ ಜಾಗೃತಿ ಮೂಡಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.

