ಏಪ್ರಿಲ್‌ ಒಳಗೆ 3,000 ಲೈನ್‌ಮನ್‌ಗಳ ನೇಮಕ: ಸಚಿವ ಕೆ.ಜೆ.ಜಾರ್ಜ್‌

Most read

ಹಾವೇರಿ: ರಾಜ್ಯದಲ್ಲಿ ಖಾಲಿ ಇರುವ 3,000 ಸಾವಿರ ಲೈನ್‌ಮನ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಏಪಿಲ್‌ ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್‌ ಹೇಳಿದ್ದಾರೆ.  ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ  ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಏಪ್ರಿಲ್‌ ಒಳಗಾಗಿ ಲೈನ್‌ಮನ್‌ಗಳ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಬಳಿಕ ಸಮಸ್ಯೆ ಬಹುತೇಕ ಬಗೆಹರಿಯಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಳೆದ ವರ್ಷ ತೀವ್ರ ಬರಗಾಲವಿದ್ದ ಕಾರಣ ವಿದ್ಯುತ್‌ ಕೊರತೆಯಿದ್ದರೂ ಕೇವಲ ಒಂದು ತಿಂಗಳು ಮಾತ್ರ ಸಮಸ್ಯೆಯಾಗಿತ್ತು. ಉಳಿದ 11 ತಿಂಗಳಿನಲ್ಲಿ ಸಮರ್ಪಕವಾಗಿ ವಿದ್ಯುತ್‌ ಪೂರೈಸಲಾಗಿದೆ. ಪ್ರಸ್ತಕ ವರ್ಷ 19 ಸಾವಿರ ಮೆಗಾ ವ್ಯಾಟ್ ವಿದ್ಯುತ್‌ ಬೇಡಿಕೆ ಇದ್ದು, ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆ ಸನ್ನದ್ಧವಾಗಿದೆ. ರಾಜ್ಯದಲ್ಲಿ ಯಾವುದೇ ವಿದ್ಯುತ್‌ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಜನರು ತಮ್ಮ ತೊಂದರೆಗಳನ್ನು ಜನಪ್ರತಿನಿಧಿಗಳ ಬಳಿ ಹೇಳಿಕೊಳ್ಳುತ್ತಾರೆ. ಜತೆಗೆ ಜನಪ್ರತಿನಿಧಿಗಳಲ್ಲಿಯೂ ಕ್ಷೇತದ ಸಮಸ್ಯೆ ಬಗೆಹರಿಸಲು ಸಾಕಷ್ಟು ಯೋಚನೆಗಳಿರುತ್ತವೆ. ಆದ್ದರಿಂದ ಅವರನ್ನು ಭೇಟಿಯಾಗಿ ಸಲಹೆಗಳನ್ನು ಪಡೆಯಿರಿ. ತೊಂದರೆಗಳಿದ್ದರೆ ನಿಮ್ಮ ವ್ಯಾಪ್ತಿಯಲ್ಲಿ ಸರಿ ಪಡಿಸಿ, ಇಲ್ಲವೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತನ್ನಿ. ಅವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸೋಲಾರ್ ಪಂಪ್ ಸೆಟ್ ಒದಗಿಸುವ ಕುಸುಮ್-ಬಿ ಯೋಜನೆಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಸಬ್ಸಿಡಿಯನ್ನು ಶೇ. 50ಕ್ಕೆ ಹೆಚ್ಚಿಸಿದ್ದು, ಕೇಂದ್ರ ಸರ್ಕಾರ ಶೇ. 30ರಷ್ಟು ಸಬ್ಸಿಡಿ ನೀಡುತ್ತದೆ. ರೈತರು ಕೇವಲ ಶೇ.20 ಮಾತ್ರ ಹಣ ಪಾವತಿಸಿ ಸೋಲಾರ್ ಪಂಪ್ ಸೆಟ್ ಪಡೆಯಬಹುದು. ಈ ಯೋಜನ ರೈತರಿಗೆ ವರದಾನವಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2.5 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಿ ಮೂಲ ಸೌಕರ್ಯ ಒದಗಿಸಿದೆ. ಉಳಿದ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೊಸದಾಗಿ ಬಂದ ಅಕ್ರಮ-ಸಕ್ರಮ ಅರ್ಜಿಗಳ ಕುರಿತು ನಂತರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಮತನಾಡಿ, ನೆಗಳೂರಿನಲ್ಲಿ 110 ಕೆ.ವಿ. ಸಾಮರ್ಥ್ಯದ ಸ್ಟೆಷನ್‌ ಪ್ರಾರಂಭಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು,ಈ ಬಗ್ಗೆ ಎರಡು ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾನಗಲ್‌ ಶಾಸಕ ಶ್ರೀನಿವಾಸ್‌ ಮಾನೆ ಮಾತನಾಡಿ, ಅಧಿಕ ಒತ್ತಡದಿಂದ ಟ್ರಾನ್ಸ್ ಫಾರ್ಮರ್ ಗಳು ಸುಡುತ್ತಿವೆ. ಆದ್ದರಿಂದ ಅವುಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಸುಟ್ಟು ಹೋದ ಟ್ರಾನ್ಸ್‌  ಫಾರ್ಮರ್ ಗಳನ್ನು ಶೀಘ್ರ ಬದಲಿಸಬೇಕು ಎಂದು ಮನವಿ ಮಾಡಿದರು.  ಹಿರೇಕೆರೂರು ಶಾಸಕ ಯು.ಬಿ ಬಣಕಾರ ಮಾತನಾಡಿ,  ಕೃಷಿ ಪಂಪ್ ಸೆಟ್ ಗಳಿಗೆ ದಿನದ ಏಳು ಗಂಟೆ ನಿರಂತರ ವಿದ್ಯುತ್ ಪೂರೈಸಬೇಕು. ಕೆಲವು ಕಡೆ ಹಳೆಯದಾಗಿರುವ ವಿದ್ಯುತ್‌ ಲೈನ್‌ಗಳನ್ನು ಬದಲಿಸಬೇಕು ಎಂದು ಮನವಿ ಮಾಡಿದರು. ಶಾಸಕರ ಅಹಾಲುಗಳನ್ನು ಆಲಿಸಿದ ಸಚಿವ ಕೆ.ಜೆ.ಜಾರ್ಜ್, ಈ ಎಲ್ಲಾ ವಿಚಾರಗಳ ಬಗ್ಗೆ  ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶರಿಗೆ ಸೂಚಿಸಿದರು. ಜತೆಗೆ ಸಕ್ಕರೆ ಕಾರ್ಖಾನೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಬಗ್ಗೆ ವರದಿ ಪಡೆದು ಕ್ರಮ ಜರುಗಿಸುವಂತೆಯೂ ತಾಕೀತು ಮಡಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ ಅಜೀಮ್‍ಪೀ ರ ಖಾದ್ರಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಪ್ರಕಾಶ ಕೋಳಿವಾಡ,  ಯಾಸಿರ್ ಅಹ್ಮ ದ್‍ಖಾನ್ ಪಠಾಣ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಸೇರಿದಂತೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

More articles

Latest article