ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಅರವಿಂದ್ ಪನಗಾರಿಯ ಮತ್ತು ಸದಸ್ಯರನ್ನು ಭೇಟಿ ಮಾಡಿ, ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಂಚಿಕೆ ಮತ್ತು ಹಣಕಾಸು ವರ್ಗಾವಣೆಗಳ ಕುರಿತು ರಾಜ್ಯದ ಆಶಯಗಳು, ನಿರೀಕ್ಷೆಗಳು ಮತ್ತು ಪ್ರಸ್ತಾವನೆಗಳನ್ನು ಮಂಡಿಸಿದರು. ಈ ಸಭೆಯಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿ ಕಚೇರಿ ಮತ್ತು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಮಾನ್ಯ ಮುಖ್ಯಮಂತ್ರಿಗಳು ಹೆಚ್ಚುವರಿ ಜ್ಞಾಪಕ ಪತ್ರವನ್ನು ಆಯೋಗಕ್ಕೆ ಸಲ್ಲಿಸುವುದರ ಜತೆಗೆ, ಈ ಜ್ಞಾಪಕ ಪತ್ರದಲ್ಲಿ ನ್ಯಾಯಯುತ, ಪಾರದರ್ಶಕ ಮತ್ತು ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ರಾಜ್ಯದ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಭಾಷಣದ ಮುಖ್ಯಾಂಶಗಳು:
1. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ್ದು, ರಾಜ್ಯವು ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.8.7ರಷ್ಟು ಕೊಡುಗೆ ನೀಡುತ್ತಿದ್ದು, ಜಿ.ಎಸ್.ಟಿ ಸಂಗ್ರಹಣೆಯಲ್ಲಿ 2ನೇ ಸ್ಥಾನದಲ್ಲಿದೆ.
2. ಈ ಕೊಡುಗೆಯ ಹೊರತಾಗಿಯೂ, ಸಂಪನ್ಮೂಲ ಹಂಚಿಕೆಯಲ್ಲಿ ಉಂಟಾಗಿರುವ ತೀವ್ರ ಅಸಮತೋಲನವನ್ನು ಮುಖ್ಯಮಂತ್ರಿಗಳು ಪ್ರಸ್ತುತ ಪಡಿಸಿದರು. ರಾಜ್ಯದಿಂದ ಕೇಂದ್ರಕ್ಕೆ ಸ್ವೀಕೃತವಾಗುವ ತೆರಿಗೆಯ ಪ್ರತಿ ರೂಪಾಯಿಗೆ ಪ್ರತಿಯಾಗಿ ರಾಜ್ಯವು ಕೇವಲ 15 ಪೈಸೆ ಮಾತ್ರ ಪಡೆಯುತ್ತದೆ. 15 ನೇ ಹಣಕಾಸು ಆಯೋಗವು ಕರ್ನಾಟಕದ ತೆರಿಗೆ ಪಾಲನ್ನು 4.713% ರಿಂದ 3.647% ಕ್ಕೆ ಇಳಿಕೆ ಮಾಡಿದ್ದರಿಂದ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ರೂ. 80,000 ಕೋಟಿಗಳಷ್ಟು ನಷ್ಟವಾಗಿದೆ.
3. ಸಂಪನ್ಮೂಲ ಹಂಚಿಕೆಯಲ್ಲಿ ಉಂಟಾಗಿರುವ ಈ ಅಸಮತೋಲನವನ್ನು ಸರಿಪಡಿಸಲು ರಾಜ್ಯವು 16ನೇ ಹಣಕಾಸು ಆಯೋಗಕ್ಕೆ ಈಗಾಗಲೇ ಜ್ಞಾಪನಾ ಪತ್ರವನ್ನು ಸಲ್ಲಿಸಿದ್ದು, ರಾಜ್ಯದ ಮುಖ್ಯ ಪ್ರಸ್ತಾವನೆಗಳು ಕೆಳಕಂಡಂತಿದೆ:
· ಕೇಂದ್ರ ಹಾಗೂ ರಾಜ್ಯಗಳ ನಡುವಿನ ಹಂಚಿಕೆಯು ಕನಿಷ್ಠ 50% ಕ್ಕೆ ಹೆಚ್ಚಿಸಬೇಕು ಮತ್ತು ಸೆಸ್ಗಳು ಮತ್ತು ಸರ್ಚಾರ್ಜ್ಗಳನ್ನು 5% ಕ್ಕೆ ಮಿತಿಗೊಳಿಸಬೇಕೆಂದು ಪ್ರಸ್ತಾಪಿಸಿದೆ. ಕೇಂದ್ರದ ತೆರಿಗೆಯೇತರ ಆದಾಯವನ್ನು ರಾಜ್ಯಗಳಿಗೆ ಹಂಚಿಕೆಯಾಗುವ ಪಾಲಿನಲ್ಲಿ (divisible pool) ಸೇರಿಸಲು ಸಹ ಶಿಫಾರಸು ಮಾಡಿದೆ.
· ರಾಜ್ಯಗಳ ನಡುವಿನ ಹಂಚಿಕೆಗೆ ಸಂಬಂಧಿಸಿದಂತೆ ಪ್ರತಿ ರಾಜ್ಯವು ತಾನು ನೀಡುವ ಕೊಡುಗೆಯಲ್ಲಿ ಸುಮಾರು 60% ಅನ್ನು ಉಳಿಸಿಕೊಳ್ಳಲು ಮತ್ತು 40% ಅನ್ನು ಉಳಿದ ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಸೂಚಿಸಿದೆ ಇದು ಬೆಳವಣಿಗೆ ಮತ್ತು ಸಮಾನತೆ ಎರಡನ್ನೂ ಖಚಿತಪಡಿಸುತ್ತದೆ.
· ಸೂತ್ರವನ್ನು ನ್ಯಾಯಯುತವಾಗಿಸಲು, ಕರ್ನಾಟಕವು ಆದಾಯ-ದೂರ (income-distance) ಮಾನದಂಡದ ಪಾಲನ್ನು ಕಡಿಮೆ ಮಾಡಲು ಮತ್ತು ರಾಜ್ಯದ ಆರ್ಥಿಕ ಕೊಡುಗೆಗೆ ಹೆಚ್ಚಿನ ಪಾಲನ್ನು ನೀಡಲು ಪ್ರಸ್ತಾಪಿಸಿದೆ.
4. ಕರ್ನಾಟಕವು ತನ್ನ ಹೆಚ್ಚುವರಿ ಜ್ಞಾಪಕ ಪತ್ರದಲ್ಲಿ, ಸಂಪನ್ಮೂಲ ಹಂಚಿಕೆಯು ಹೆಚ್ಚು ಬೆಳವಣಿಗೆ-ಆಧಾರಿತ ಮತ್ತು ನ್ಯಾಯಯುತವಾಗಿಸಲು ನಿರ್ಣಾಯಕ ಸುಧಾರಣೆಗಳಿಗೆ ಕರೆ ನೀಡಿದೆ. ಹೆಚ್ಚುವರಿ ಜ್ಞಾಪಕ ಪತ್ರದ ಪ್ರಮುಖ ಪ್ರಸ್ತಾವನೆಗಳು ಕೆಳಕಂಡಂತಿದೆ.
5. ತಲಾವಾರು ತೆರಿಗೆ ಹಂಚಿಕೆಯಲ್ಲಿ ಹೆಚ್ಚುತ್ತಿರುವ ಅಸಮಾನತೆಗಳು, ಆದಾಯ ಕೊರತೆ ಅನುದಾನಗಳ ಅವೈಜ್ಞಾನಿಕ ವಿನ್ಯಾಸ ಮತ್ತು ರಾಜ್ಯ-ನಿರ್ದಿಷ್ಟ ಅನುದಾನಗಳ ಅನಿರೀಕ್ಷಿತತೆಯ ಕುರಿತು ಹೆಚ್ಚುವರಿ ಜ್ಞಾಪಕ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ದೇಶದ GDP ಗೆ ರಾಜ್ಯದ ಕೊಡುಗೆಯು ಹೆಚ್ಚಾಗಿರುವ ಹೊರತಾಗಿಯೂ, ತಲಾವಾರು ತೆರಿಗೆ ಹಂಚಿಕೆಯು ಗಮನಾರ್ಹವಾಗಿ ಕುಸಿದಿದೆ – 14 ನೇ ಮತ್ತು 15 ನೇ ಹಣಕಾಸು ಆಯೋಗಗಳ ನಡುವಿನ ರಾಷ್ಟ್ರೀಯ ಸರಾಸರಿಯ 95% ರಿಂದ 73% ಕ್ಕೆ ಕುಸಿದಿದೆ.
6. ಸಂಪನ್ಮೂಲ ಹಂಚಿಕೆಯಲ್ಲಿ ಸಮಾನತೆ ಮುಖ್ಯವಾಗಿದ್ದರೂ, ಇದು ಸ್ಥಿರವಾದ ಆರ್ಥಿಕ ಕಾರ್ಯಕ್ಷಮತೆ ಮತ್ತು ಆರ್ಥಿಕ ಶಿಸ್ತನ್ನು ಪಾಲಿಸುವ ರಾಜ್ಯಗಳಿಗೆ ದಂಡ ವಿಧಿಸುವಂತಾಗಬಾರದು. ಸಂಪನ್ಮೂಲ ಹಂಚಿಕೆಯಲ್ಲಿ ಸಮಾನತೆಯನ್ನು ಫಲಿತಾಂಶ ಆಧಾರಿತ ರೀತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ರಾಜ್ಯವು ಒತ್ತಿಹೇಳಿತು. ಆದ್ದರಿಂದ, ಆದಾಯ-ದೂರ ಮಾನದಂಡದ ಪಾಲನ್ನು 20% ರಷ್ಟು ಕಡಿಮೆ ಮಾಡಿ ದೇಶದGDP ಯಲ್ಲಿ ರಾಜ್ಯಗಳ ಕೊಡುಗೆಯನ್ನು ಅಳತೆಗೊಲಾಗಿ ಪರಿಗಣಿಸಿ ಇದಕ್ಕೆ 20% ಅಂಕವನ್ನು ನೀಡಬೇಕೆಂದು ಪ್ರಸ್ತಾಪಿಸಿದೆ.
7. ಹಣಕಾಸು ಆಯೋಗವು ನೀಡುವ ರಾಜಸ್ವ ಕೊರತೆ ಅನುದಾನಗಳ ಪರಿಣಾಮಕಾರಿತ್ವವನ್ನು ಮುಖ್ಯಮಂತ್ರಿಯವರು ಪ್ರಶ್ನಿಸಿದರು. ಪ್ರಸ್ತುತ ರೂಪದಲ್ಲಿ ರಾಜಸ್ವ ಕೊರತೆ ಅನುದಾನವನ್ನು ಪಡೆಯುತ್ತಿರುವ ಫಲಾನುಭವಿ ರಾಜ್ಯಗಳು, ಈ ಅನುದಾನದ ಹೊರತಾಗಿಯೂ ರಾಜಸ್ವ ಕೊರತೆಯನ್ನು ಶೂನ್ಯವಾಗಿಸುವಲ್ಲಿ ವಿಫಲವಾಗಿರುವುದನ್ನು ಉಲ್ಲೇಖಿಸಿ ರಾಜಸ್ವ ಕೊರತೆ ಅನುದಾನವನ್ನು ತೆರಿಗೆ ಹಂಚಿಕೆಯ ಸೂತ್ರದಲ್ಲೇ ರಾಜ್ಯಗಳಿಗೆ ನೀಡಬೇಕೆಂದು ಪ್ರಸ್ತಾಪಿಸಿದರು.
8. ಇದಲ್ಲದೆ, ರಾಜಸ್ವ ಕೊರತೆ ಅನುದಾನಗಳನ್ನು ಅಂದಾಜಿಸಲು ಆಯೋಗವು ಪರಿಕಲ್ಪಿಸುವ ವೆಚ್ಚದ ಆದ್ಯತೆಗಳು ವ್ಯಕ್ತಿನಿಷ್ಠ ಮೌಲ್ಯಮಾಪನಗಳನ್ನು ಪ್ರತಿಬಿಂಬಿಸುತ್ತವೆ. ದುರದೃಷ್ಟವಶಾತ್, ಈ ಮೌಲ್ಯಮಾಪನಗಳು ಸಂಬಳ, ಪಿಂಚಣಿ ಮತ್ತು ಆಡಳಿತಾತ್ಮಕ ವೆಚ್ಚಗಳಿಗೆ ಹೋಲಿಸಿದರೆ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರ ಭರಿಸುವ ವೆಚ್ಚವನ್ನು ಕಡಿಮೆ ಪ್ರಮಾಣದಲ್ಲಿ ಇರಿಸುತ್ತವೆ. ನಮ್ಮ ಸರ್ಕಾರವು ಎಲ್ಲರ ಕಲ್ಯಾಣವನ್ನು ಒತ್ತಿಹೇಳುವ ಗಾಂಧೀಜಿಯವರ ಸರ್ವೋದಯ ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿದೆ. ಕಡಿಮೆ ಆದಾಯದ ಕುಟುಂಬಗಳನ್ನು ಸಬಲೀಕರಣಗೊಳಿಸುವ ಮೂಲಕ, ಸ್ಥಳೀಯ ಬೇಡಿಕೆಯನ್ನು ಉತ್ತೇಜಿಸುವ ಮತ್ತು ಸಮಗ್ರ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ರೂಪಿತವಾಗಿದೆ. ಆದ್ದರಿಂದ, ಹಣಕಾಸಿನ ಹಂಚಿಕೆಯಲ್ಲಿ ಮೌಲ್ಯಮಾಪನ ಮಾಡುವಾಗ ಈ ಕಲ್ಯಾಣ ಕಾರ್ಯಕ್ರಮಗಳ ಮೇಲಿನ ವೆಚ್ಚಗಳಿಗೆ ಹೆಚ್ಚಿನ ಆದ್ಯತೆ ನೀಡದೆ ಹೋದರೆ ಕನಿಷ್ಠ ಸಂಬಳ, ಪಿಂಚಣಿ ಮತ್ತು ಬಡ್ಡಿ ಪಾವತಿಗಳಂತಹ ಬದ್ಧ ವೆಚ್ಚಗಳಿಗೆ ಸಮಾನವಾಗಿ ಪರಿಗಣಿಸಬೇಕು.
9. ಕೇಂದ್ರ ಸರ್ಕರದ ವಿವೇಚನಾಧಾರಿತ ಅನುದಾನವಾಗಿರುವ ರಾಜ್ಯ ಕೇಂದ್ರಿತ ಅನುದಾನದ ಬದಲಾಗಿ ಒಟ್ಟು ಕೇಂದ್ರ ಸ್ವೀಕೃತಿಗಳ 0.3% ರಷ್ಟು ಅನುದಾನವನ್ನು ಸೂತ್ರ ಆಧಾರಿತ ಹಂಚಿಕೆಯ ಮೂಲಕ ರಾಜ್ಯಗಳಿಗೆ ನೀಡಬೇಕೆಂದು ಕರ್ನಾಟಕವು ಶಿಫಾರಸು ಮಾಡಿದೆ. ಆದಾಗ್ಯೂ, ಆಯೋಗವು ಅಂತಹ ನಿಬಂಧನೆಗಳನ್ನು ಮುಂದುವರಿಸಿದರೆ ಬೆಂಗಳೂರು ಮತ್ತು ಇತರ ನಿರ್ಣಾಯಕ ಯೋಜನೆಗಳಿಗೆ ಅನುದಾನಕ್ಕಾಗಿ ಮೂಲ ಜ್ಞಾಪಕ ಪತ್ರದಲ್ಲಿ ಸಲ್ಲಿಸಿರುವ ತನ್ನ ಪ್ರಸ್ತಾವನೆಯನ್ನು ಪುನರುಚ್ಚರಿಸಿದೆ.
10. ಇದಲ್ಲದೆ, ಕರ್ನಾಟಕದ ಆರ್ಥಿಕತೆಯಲ್ಲಿ ಬೆಂಗಳೂರಿನ ಪ್ರಮುಖ ಪಾತ್ರವನ್ನು ಪರಿಗಣಿಸಿ, ಬೆಂಗಳೂರಿನ ಮೂಲಸೌಕರ್ಯವನ್ನು ಬಲಪಡಿಸಲು ₹1.15 ಲಕ್ಷ ಕೋಟಿ ಹೂಡಿಕೆಗೆ ಬೆಂಬಲವನ್ನು ಮುಖ್ಯಮಂತ್ರಿ ಕೋರಿದರು. ಅಲ್ಲದೆ, ಕಡಿಮೆ ಆದಾಯ ಮತ್ತು ಕುಂಠಿತ ಮೂಲಸೌಕರ್ಯ ಅಭಿವೃದ್ಧಿ ಸಮಸ್ಯೆಯನ್ನು ಎದುರಿಸುತ್ತಿರುವ ಕಲ್ಯಾಣ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಪ್ರಾದೇಶಿಕ ಅಂತರವನ್ನು ಕಡಿಮೆ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
11. ಬೆಳವಣಿಗೆ ಮತ್ತು ಸಮಾನತೆ ಜೊತೆ ಜೊತೆಯಾಗಿ ಮುಂದುವರಿಯಬೇಕು. ಆದ್ದರಿಂದ ಸಧೃಡ ಭಾರತದ ನಿರ್ಮಾಣಕ್ಕೆ ನ್ಯಾಯಯುತ ಸಂಪನ್ಮೂಲ ಹಂಚಿಕೆಯಿಂದ ಬೆಂಬಲಿತವಾದ ಬಲವಾದ ಕರ್ನಾಟಕ ಅತ್ಯಗತ್ಯ ಎಂದು ಮುಖ್ಯಮಂತ್ರಿಯವರು ಒತ್ತಿ ಹೇಳಿದರು.
“ಕರ್ನಾಟಕದ ಆರ್ಥಿಕ ಬಲವು ರಾಷ್ಟ್ರೀಯ ಬೆಳವಣಿಗೆಗೆ ಇಂಧನವಾಗಿದೆ. ಬೆಳವಣಿಗೆಗೆ ದಂಡ ವಿಧಿಸಬಾರದು, ಬದಲಾಗಿ ಪ್ರೋತ್ಸಾಹ ದೊರೆಯುವಂತೆ ನೋಡಿಕೊಳ್ಳುವ ಸಮಯ ಇದು. ಸಮತೋಲಿತ, ಸಂಪನ್ಮೂಲ ಹಂಚಿಕೆಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವಂತೆ ನಾವು ಆಯೋಗವನ್ನು ಒತ್ತಾಯಿಸುತ್ತೇವೆ.”