ಬೆಂಗಳೂರು: ಶಿಕ್ಷಣ ಹಾಗೂ ಸಂಶೋಧನೆಗೆ ಸಂಬಂಧಿಸಿದಂತೆ ಹೆಚ್ಚಿನ ಸಹಭಾಗಿತ್ವ ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮತ್ತು ಲಿವರ್ ಪೂಲ್ ವಿಶ್ವವಿದ್ಯಾಲಯಗಳು ಮಹತ್ವದ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಿದವು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರಿ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಒಡಂಬಡಿಕೆ ಏರ್ಪಟ್ಟಿತು. ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್ ನ ಬ್ರಿಟಿಷ್ ಕೌನ್ಸಿಲ್ ವಿಭಾಗದ ನಿರ್ದೇಶಕ ಜನಕ ಪುಷ್ಪನಾಥನ್, ಮಿಷನ್ ನ ಉಪ ಮುಖ್ಯಸ್ಥ ಜೇಮ್ಸ್ ಗೋಡ್ಬರ್, ಲಿವರ್ ಪೂಲ್ ವಿ.ವಿ.ಯ ಕುಲಪತಿ ಪ್ರೊ.ಟಿಮ್ ಜೋನ್ಸ್, ಮತ್ತು ಸಮ-ಕುಲಪತಿ ಪ್ರೊ.ತಾರಿಕ್ ಅಲಿ ಅವರು ಅಂಕಿತಕ್ಕೆ ಸಹಿ ಹಾಕಿದರು.
ಆವಿಷ್ಕಾರ ಕಾರ್ಯಕ್ರಮಗಳು ಹಾಗೂ ಶಿಕ್ಷಣ ಸಹಕಾರಕ್ಕೆ ಸಂಬಂಧಿಸಿದ ಸಹಭಾಗಿತ್ವವನ್ನು ಸದೃಢಗೊಳಿಸುವ ಜೊತೆಗೆ, ಅದನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯಲು ಜಂಟಿ ಕಾರ್ಯತಂಡ ರಚಿಸುವ ಗುರಿಯನ್ನು ಕೂಡ ಒಡಂಬಡಿಕೆ ಹೊಂದಿದೆ. ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಉನ್ನತ ಶಿಕ್ಷಣ ಪರಿಷತ್ ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ಜಿ.ಚಂದ್ರಶೇಖರ ಸೇರಿದಂತೆ ಇತರರು ಇದ್ದರು.