ಪಟ್ನಾ: ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಿದ್ದ ಅಭ್ಯರ್ಥಿ ಗೆಲುವು ಸಾಧಿಸಲು ಸಹಾಯ ಮಾಡಿದ್ದೇನೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಹೇಳಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಪ್ರತಿಪಕ್ಷಗಳು ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಎನ್ನುವುದಕ್ಕೆ ದಕ್ಕಿಂತ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದ್ದಾರೆ.
ಮಾಂಝಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ಗಯಾದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಆರ್ಜೆಡಿ ಹಾಗೂ ಕಾಂಗ್ರೆಸ್ ಮತ ಕಳ್ಳತನಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಟೀಕಿಸಿವೆ.
ಹಿಂದೂಸ್ತಾನಿ ಅವಾಮಿ ಮೋರ್ಚಾ ಪಕ್ಷದ ಮುಖಂಡರೂ ಆದ ಮಾಂಝಿ ಅವರು ಟಿಕಾರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕುರಿತು ಈ ಮಾತನ್ನಾಡಿದ್ದಾರೆ. 2020ರಲ್ಲಿ ಈ ಕ್ಷೇತ್ರದಿಂದ ಮಾಂಝಿ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಗೆದ್ದಿದ್ದರು. ಆಗ ಅನಿಲ್ ಅವರು 2,700 ಮತಗಳಿಂದ ಹಿಂದಿದ್ದರು. ಅವರು ನನಗೆ ಕರೆ ಮಾಡಿದಾಗ ನಾನು ಸಂಬಂಧಪಟ್ಟ ಅಧಿಕಾರಿಗೆ ಕರೆ ಮಾಡಿ ಅವರು ಗೆಲ್ಲುವಂತೆ ಮಾಡಿದೆ ಎಂದಿದ್ದಾರೆ. ಸ್ಥಳೀಯ ಮಗಾಹಿ ಭಾಷೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಆರ್ಜೆಡಿ ಪ್ರತಿಕ್ರಿಯಿಸಿ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿಗೆ ಚುನಾವಣಾ ಆಯೋಗ ಸಹಾಯ ಮಾಡಿರುವುದಕ್ಕೆ ನಿದರ್ಶನವಾಗಿದೆ ಎಂದು ಟೀಕಿಸಿದೆ.
ಬಿಹಾರ ಕಾಂಗ್ರೆಸ್ ಮುಖಂಡ ಅಸಿತ್ ನಾಥ್ ಮಾತನಾಡಿ, ಸಂಸತ್ತಿನಲ್ಲಿ ಮತ ಕಳ್ಳತನ ಕುರಿತು ಚರ್ಚೆ ನಡೆಯುವಾಗ ಕೇಂದ್ರ ಗೃಹ ಸಚಿವರು ಕೆಂಡಾಮಂಡಲರಾಗಿದ್ದರು. ಈಗ ಅವರ ಸಹೋದ್ಯೋಗಿಯೇ ಮತ ಕಳ್ಳತನವನ್ನು ಒಪ್ಪಿಕೊಂಡಿದ್ದುದ್ದಾರೆ ಎಂದು ಲೇವಡಿ ಮಾಡಿದ್ದಾರೆ.

