ನವದೆಹಲಿ: ಕೇಂದ್ರ ಸರ್ಕಾರ ನಡೆಸಲಿರುವ ಜನಗಣತಿಗೆ ನಾಗರೀಕರು ಸ್ವಯಂ ದತ್ತಾಂಶ ದಾಖಲಿಸುವ ಸೌಕರ್ಯ ಒದಗಿಸುವಂತಹ ವೆಬ್ ಪೋರ್ಟಲ್ ಸಿದ್ದಪಡಿಸಲಾಗುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್ ಗಣತಿ ನಡೆಯಲಿದ್ದು, ಗಣತಿದಾರರು ನಾಗರಿಕರ ಮಾಹಿತಿಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ದಾಖಲಿಸಿಕೊಳ್ಳಲಿದ್ದಾರೆ.
ಮನೆಗಳ ಪಟ್ಟಿ ಹಾಗೂ ಮನೆಗಳ ಗಣತಿ (ಎಚ್ಎಲ್ ಒ) ಮತ್ತು ಜನಗಣತಿಯ (ಪಿಇ) ಸಂದರ್ಭದಲ್ಲಿಯೂ ಸ್ವಯಂ ದತ್ತಾಂಶ ದಾಖಲಿಸುವ ಅವಕಾಶ ನಾಗರಿಕರಿಗೆ ಲಭ್ಯವಾಗಲಿದೆ.
ಡಿಜಿಟಲ್ ಗಣತಿಯ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಿ, ಎಲೆಕ್ಟ್ರಾನಿಕ್ ಮಾದರಿಯಲ್ಲಿ ಕೇಂದ್ರೀಕೃತ ಸರ್ವರ್ ಗೆ ವರ್ಗಾಯಿಸಲಾಗುತ್ತದೆ. ಇದರಿಂದ ಗಣತಿ ದತ್ತಾಂಶಗಳನ್ನು ಕಡಿಮೆ ಅವಧಿಯಲ್ಲಿ ಕ್ರೋಡೀಕರಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ದತ್ತಾಂಶ ಸಂಗ್ರಹ, ವರ್ಗಾವಣೆ ಹಾಗೂ ಶೇಖರಣೆ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತದೆ. ಈ ಹಿಂದೆ ಜನಗಣತಿ ನಡೆದಾಗ ಎರಡರಿಂದ ಮೂರು ವರ್ಷಗಳ ನಂತರ ದತ್ತಾಂಶಗಳನ್ನು ಸಾರ್ವಜನಿಕರ ಮುಂದೆ ಇಡಲಾಗುತ್ತಿತ್ತು. ಆದರೆ ಡಿಜಿಟಲ್ ದತ್ತಾಂಶ ಸಂಗ್ರಹದಿಂದ ಕೆಲವೇ ತಿಂಗಳಲ್ಲಿ ಜನರಿಗೆ ಈ ಮಾಹಿತಿ ಲಭ್ಯವಾಗಲಿದೆ.
ಮನೆಗಳ ಗಣತಿಯು 2026ರ ಏಪ್ರಿಲ್ 1ರಿಂದ ಆರಂಭಗೊಳ್ಳಲಿದೆ. 2027ರ ಫೆಬ್ರುವರಿ 1ರಿಂದ ನಡೆಯುವ ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ. ಇದರ ಜತೆಗೆ ಜಾತಿವಾರು ಗಣತಿ ಪ್ರಕ್ರಿಯೆಯೂ ನಡೆಯಲಿದೆ. ಈಗಾಗಲೇ ನಿಗದಿಪಡಿಸಿರುವ ಗಡುವಿನ ಅನ್ವಯ ಮೂರು ತಿಂಗಳ ಒಳಗಾಗಿ ಜನಗಣತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಜಿಲ್ಲೆ, ಉಪ ವಿಭಾಗ, ತಾಲ್ಲೂಕು ಹಾಗೂ ಪೊಲೀಸ್ ಠಾಣಾ ವ್ಯಾಪ್ತಿವಾರು ವಿಭಜಿಸಿ ಗಣತಿ ಪ್ರಕ್ರಿಯೆ ನಡೆಸಲಾಗುತ್ತದೆ. 2026ರ ಏಪ್ರಿಲ್ 1ರಿಂದ ಮನೆಗಳ ಪಟ್ಟಿ ಮಾಡುವ ಕೆಲಸ ಆರಂಭಗೊಳ್ಳಲಿದ್ದು, ಮೇಲ್ವಿಚಾರಕರು, ಗಣತಿದಾರರ ಕೆಲಸಗಳ ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್, ಗಣತಿ ಆಯುಕ್ತರಾದ ಮೃತ್ಯುಂಜಯ್ ಕುಮಾರ್ ನಾರಾಯಣ್ ಹೇಳಿದ್ದಾರೆ.
ಮೂರು ಹಂತಗಳಲ್ಲಿ ಕೇಂದ್ರೀಕೃತ ಹಾಗೂ ಅಗತ್ಯ ತರಬೇತಿಯನ್ನು ನೀಡಲು ರಾಷ್ಟ್ರೀಯ ಟ್ರೇನರ್ ಮಾಸ್ಟರ್ ಹಾಗೂ ಫೀಲ್ಡ್ ಟ್ರೇನರ್ ಗಳನ್ನು ನಿಯೋಜಿಸಲಾಗುತ್ತದೆ. ಪೀಲ್ಡ್ ಟ್ರೇನರ್ ಗಳು 34 ಲಕ್ಷ ತರಬೇತುದಾರರಿಗೆ ತರಬೇತಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜನಗಣತಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ದೇಶದಾದ್ಯಂತ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಮೂಲಕ ಗಣತಿಯ ಕೊನೆಯ ಹಂತದವರೆಗೂ ಜನರ ಸಹಭಾಗಿತ್ವ ಹಾಗೂ ನೆರವು ಪಡೆಯಲು ಸಾಧ್ಯವಾಗುತ್ತದೆ. ಪ್ರತಿ ಗ್ರಾಮ ಹಾಗೂ ಪಟ್ಟಣವನ್ನು ಏಕರೂಪದ ಎಣಿಕೆ ಬ್ಲಾಕ್ ಗಳಾಗಿ ವಿಂಗಡಿಸಲಾಗುತ್ತದೆ. ಇದರಿಂದ ಗಣತಿದಾರರು ಗಣತಿ ಬಿಟ್ಟು ಹೋಗುವ ಹಾಗೂ ಗಣತಿ ಪುನರಾವರ್ತನೆ ತಪ್ಪಿಸಬಹುದಾಗಿದೆ ಎಂದೂ ಮೃತ್ಯುಂಜಯ್ ಕುಮಾರ್ ನಾರಾಯಣ್ ತಿಳಿಸಿದ್ದಾರೆ.