ಬೆಂಗಳೂರು: ನಿರ್ದೇಶಕ ನಂದಕಿಶೋರ್ ವಿರುದ್ಧ ಯುವ ನಟ ಶಬರೀಶ್ ಶೆಟ್ಟಿ ಎಂಬವರು ಹಣಕಾಸು ವಂಚನೆಯ ಆರೋಪ ಮಾಡಿದ್ದಾರೆ. ಒಂಬತ್ತು ವರ್ಷದ ಹಿಂದೆ ನಂದ ಕಿಶೋರ್ ಅವರು ತಮ್ಮಿಂದ 22 ಲಕ್ಷ ರೂ. ಹಣ ಪಡೆದುಕೊಂಡಿದ್ದು, ಹಿಂತಿರುಗಿಸದೆ ಮೋಸ ಮಾಡಿದ್ದಾರೆ. ಅಲ್ಲದೆ ಸುದೀಪ್ ಅವರ ಹೆಸರು ಬಳಸಿ ನನಗೆ ಬೆದರಿಕೆ ಸಹ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ತಾವು ಫಿಲಂ ಚೇಂಬರ್ ಗೆ ದೂರು ನೀಡುವುದಾಗಿ ಶಬರೀಶ್ ಹೇಳಿದ್ದಾರೆ.
ಸುಮಾರು ಒಂಬತ್ತು ವರ್ಷಗಳ ಹಿಂದೆ ಜಿಮ್ ಒಂದರಲ್ಲಿ ನಂದ ಕಿಶೋರ್ ಪರಿಚಯವಾಗಿದ್ದರು. ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದೆ. ಕ್ರಿಕೆಟ್ ಆಟಗಾರನೂ ಆಗಿರುವ ನನ್ನನ್ನು ಸಿಸಿಎಲ್ ನಲ್ಲಿ ಆಡಿಸುವುದಾಗಿ ಭರವಸೆ ನೀಡಿ, ನನ್ನಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಈ ಹಣವನ್ನು ಚಿನ್ನ ಅಡವಿಟ್ಟು ಅವರಿಗೆ ಕೊಟ್ಟಿದ್ದೆ. ಆದರೆ ಇದುವರೆಗೆ ತಮಗೆ ಹಣ ಮರಳಿಸಿಲ್ಲ. ಹಣ ಕೇಳಿದರೆ ಬೆದರಿಕೆ ಹಾಕುತ್ತಾರೆ. ನಾನು ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರು ಹೇಳಿ ಸಮ್ಮನಾಗಿಸುತ್ತಿದ್ದರು. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿದ್ದರು. ಈಗ ಹಣವೂ ಇಲ್ಲ, ಸಿನಿಮಾದಲ್ಲಿ ಅವಕಾಶವನ್ನೂ ಕೊಡಲಿಲ್ಲ. ಹಣ ಕೇಳಿದರೆ ನಿನ್ನ ಕೆಸಿಸಿಯಿಂದ ಹೊರ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಶಬರೀಶ್ ಆರೋಪಿಸಿದ್ದಾರೆ.
ಈಗ ನಾನು ‘ರಾಮಧೂತ’ ಸಿನಿಮಾ ಮಾಡಿದ್ದೇನೆ, ಶೂಟಿಂಗ್ ಮುಗಿದಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ. ನನ್ನ ಹಣ ವಾಪಸ್ ಕೊಡಿ ಎಂದರೆ ಕೊಡುತ್ತಿಲ್ಲ. ನಮ್ಮಂತಹ ಪುಟ್ಟ ಕಲಾವಿದರು ಬದುಕುವುದಾದರೂ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ವಿಷಯವನ್ನು ಶಿವಣ್ಣ ಮತ್ತು ಸುದೀಪ್ ಅವರ ಗಮನಕ್ಕೆ ತರುತ್ತೇನೆ ಮತ್ತು ಫಿಲ್ಮ್ ಚೇಂಬರ್ ಗೆ ದೂರು ಕೊಡುತ್ತೇನೆ ಎಂದೂ ಅವರು ಹೇಳಿದ್ದಾರೆ.